
ಮೂಲ್ಕಿ: ಮೂಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ಸಮುದಾಯ ಭವನದ ಪಕ್ಕದಲ್ಲಿರುವ ಅಂಗನವಾಡಿಯ ಮಕ್ಕಳಿಗೆ ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ಮಾಲೀಕರಾದ ಜೋನ್ ಕ್ವಾಡ್ರಸ್ ಅವರು ಕ್ರೀಡಾ ಸಾಮಗ್ರಿ ಮತ್ತು ಕುರ್ಚಿಗಳನ್ನು ಉದಾರವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೂಲ್ಕಿ ನಗರ ಪಂಚಾಯತಿಯ ನಿವೃತ್ತ ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲಿಯಾನ್ ಅವರು ಮಾತನಾಡಿ, “ಸುರಭಿ ಸಂಸ್ಥೆಯು ಪ್ರತಿ ವರ್ಷವೂ ಮೂಲ್ಕಿ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಧನಸಹಾಯ ಮತ್ತು ಸಮವಸ್ತ್ರಗಳನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ, ಅದರ ಮೂಲಕ ಪ್ರತಿ ವರ್ಷವೂ ನಿರಂತರವಾಗಿ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಸಮವಸ್ತ್ರ ಮತ್ತು ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಯೋಜನೆಯನ್ನು ಹೊಂದಿದೆ. ಸುರಭಿ ಸಂಸ್ಥೆಯು ಮೂಲ್ಕಿಯಲ್ಲಿ ಒಂದು ಆದರ್ಶ ಸಂಸ್ಥೆಯಾಗಿ ಜನರ ಮೆಚ್ಚುಗೆ ಗಳಿಸಲಿ” ಎಂದು ಆಶಿಸಿದರು.

ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ಮಾಲೀಕರಾದ ಜೋನ್ ಕ್ವಾಡ್ರಸ್ ಅವರು ಮಾತನಾಡಿ, “ನಾನು ಮಕ್ಕಳ ಭವಿಷ್ಯಕ್ಕಾಗಿ ಜಾತಿ-ಮತ ನೋಡದೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಟ್ರಸ್ಟ್ ಅನ್ನು ಸ್ಥಾಪಿಸಿ, ಅದರ ಮೂಲಕ ನೆರವು ನೀಡುವ ಉದ್ದೇಶ ಇದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೂಲ್ಕಿ ನಗರ ಪಂಚಾಯತಿಯ ಸದಸ್ಯ ಪುತ್ತುಬಾವ, ಅಂಗನವಾಡಿ ಸಹಾಯಕರು, ಅಂಗನವಾಡಿ ಮೇಲ್ವಿಚಾರಕಿ ಭಾರತಿ, ಮತ್ತು ಅಂಗನವಾಡಿ ಮಕ್ಕಳ ಸಂಘದ ಅಧ್ಯಕ್ಷೆ ಶೈಲಶ್ರೀ ಅವರು ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿಯಾದ ಮಂಜುಳಾ ಅವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.




