
ಪ್ರತಿಯೊಬ್ಬರ ಕೊಡುಗೆಯಿಂದ ಹಿರಿಯರ ಕನಸು ನನಸಾಗಿದೆ – ರಘು ಎ. ಮೂಲ್ಯ ಪಾದೆಬೆಟ್ಟು
ಮಂಗಳೂರು: ನಗರದ ಮಂಗಳಾದೇವಿ ಸಮೀಪ ನಿರ್ಮಾಣಗೊಂಡ ಬೃಹತ್ ಕುಲಾಲ ಭವನ ಉದ್ಘಾಟನಾ ಸಮಾರಂಭದ ಸಮಾರೋಪ ಸಭೆಯು ಸನ್ಮಾನ ಹಾಗೂ ಕೃತಜ್ಞತಾ ಕಾರ್ಯಕ್ರಮಗಳೊಂದಿಗೆ ನ. 23ರಂದು ವೈಭವದಿಂದ ಜರುಗಿತು. ಈ ಭವನವು ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ದಿ. ಪಿ. ಕೆ. ಸಾಲ್ಯಾನ್ ಸೇರಿದಂತೆ ಸಮಾಜದ ಎಲ್ಲ ಹಿರಿಯರ ಕನಸು ಮತ್ತು ಪರಿಶ್ರಮದ ಫಲವಾಗಿದೆ ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು ಹೇಳಿದರು.
ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಪೂರ್ಣಗೊಳಿಸಲು ಸಮಾಜ ಬಾಂಧವರೆಲ್ಲರೂ, ದಾನಿಗಳು ಹಾಗೂ ಮಹಾದಾನಿಗಳೊಂದಿಗೆ ಕೈಜೋಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಕುಲಾಲ ಸಂಘ ಮುಂಬಯಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ದೂರದ ಹಳ್ಳಿಗಳಿಂದಲೂ ಸಮಾಜ ಬಾಂಧವರು ಆಗಮಿಸಿ ಪ್ರೋತ್ಸಾಹ ನೀಡಿರುವುದನ್ನು ಶ್ಲಾಘಿಸಿದರು. ದಾನಿಗಳ ಜೊತೆಗೆ ಅನೇಕರು ಠೇವಣಿಗಳ ಮೂಲಕ ಮಹತ್ವದ ಸಹಕಾರ ನೀಡಿದ್ದು, ಕೆಲವರು ತಮ್ಮ ಠೇವಣಿಯನ್ನು ದಾನವಾಗಿ ಪರಿವರ್ತಿಸಿ ಉದಾರತೆ ತೋರಿದ್ದಾರೆ ಎಂದರು.
ಮುಂಬಯಿಯಿಂದ ಐನೂರಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸಿದ್ದರು. ಮುಂಬಯಿ ಕುಲಾಲ ಸಂಘದ ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ, ಉಪಸಮಿತಿಗಳು, ಮಹಿಳಾ ವಿಭಾಗ ಮತ್ತು ಸ್ಥಳೀಯ ಸಮಿತಿಗಳ ಸೇವೆ ಅವಿಸ್ಮರಣೀಯ. ಊರಿನ ಸಮಾಜ ಬಾಂಧವರ ಸಹಕಾರವನ್ನು ಸ್ಮರಿಸಿದ ರಘು ಎ. ಮೂಲ್ಯ, ಇದೇ ರೀತಿ ಎಲ್ಲರೂ ಒಂದೇ ಕುಟುಂಬದಂತೆ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕುಲಾಲ ಸಮಾಜದ ಸಾಧನೆಯನ್ನು ಶ್ಲಾಘಿಸಿದರು. ದೇವಾಡಿಗ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಎಚ್. ಮೋಹನ್ ದಾಸ್ ಮಾತನಾಡಿ, ಕುಲಾಲ ಸಮಾಜ ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದು, ದೊಡ್ಡ ಸಮಾಜಗಳ ಸಾಲಿಗೆ ಸೇರಿದೆ. ಇಂತಹ ಭವನಗಳು ದೇಶದ ವಿವಿಧೆಡೆ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಪತ್ರಕರ್ತ, ‘ಕರ್ನಾಟಕ ಮಲ್ಲ’ದ ಮುಖ್ಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ, ದೊಡ್ಡ ಮಟ್ಟದಲ್ಲಿರುವ ಕುಲಾಲ ಸಮಾಜ ತಮ್ಮ ಮೂಲ ಬೇರನ್ನು ಮರೆಯಬಾರದು. ಮಣ್ಣಿನಿಂದಲೇ ಬದುಕನ್ನು ರೂಪಿಸಿದ ಕುಲಾಲ ಸಮಾಜದಿಂದ ಈ ಭವನ ಎದ್ದು ನಿಂತಿದೆ. ಭವನಕ್ಕೆ ಎಷ್ಟು ಮೊತ್ತ ನೀಡಿದರೂ ಅದು ಸಮಾಜಕ್ಕೆ ನೀಡಿದ ಶ್ರೇಷ್ಠ ಕೊಡುಗೆ. ದಿ. ಪಿ. ಕೆ. ಸಾಲ್ಯಾನ್ ಅವರು ಎಲ್ಲಾ ತುಳು ಕನ್ನಡಿಗರಿಗೆ ಬೇಕಾದವರಾಗಿದ್ದು, ಅವರ ಕೊಡುಗೆ ಈ ಸಮಾಜಕ್ಕೆ ಅಪಾರ ಎಂದು ಸ್ಮರಿಸಿದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ಅವರು ಮಂಡಳಿಯ ಪರವಾಗಿ ಕುಲಾಲ ಸಮಾಜಕ್ಕೆ ಅಭಿನಂದನೆ ಸಲ್ಲಿಸಿ, ಮಾಜಿ ಅಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಹಾದಿಯಲ್ಲೇ ಮುಂದುವರಿಯುತ್ತಿರುವ ಸಮಾಜ ಬಾಂಧವರ ಕಾರ್ಯವನ್ನು ಶ್ಲಾಘಿಸಿದರು.
ಕಟ್ಟಡ ಸಮಿತಿಯ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಬಂಟ್ವಾಳ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲ. ಅನಿಲ್ ದಾಸ್, ಚಲನಚಿತ್ರ ನಟ ಅರ್ಜುನ್ ವೇದಾಂತ್ ಅವರನ್ನು ಹಾಗೂ ಭವನ ನಿರ್ಮಾಣಕ್ಕೆ ಸಹಕರಿಸಿದ ಮಹಾದಾನಿಗಳು, ದಾನಿಗಳು, ಪ್ರಾಯೋಜಕರು ಮತ್ತು ಇತರ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಪ್ರಮುಖ ದಾನಿಗಳೆಂದರೆ: ಮಹಾಬಲ ಕೊಟ್ಟಾರಿ ದಂಪತಿ, ವಾಮನ್ ಕರ್ಕೇರ ದಂಪತಿ, ಮಮತಾ ಗುಜರನ್ ದಂಪತಿ, ರಘು ಆರ್. ಮೂಲ್ಯ ಗೋರೆಗಾಂವ್ ದಂಪತಿ, ಎ. ಬಿ. ಸಾಲ್ಯಾನ್, ಎನ್. ಜಿ. ಮೂಲ್ಯ ದಂಪತಿ, ಶ್ರೀನಿವಾಸ್ ಬಿ. ಸಾಲ್ಯಾನ್, ಮಹಾಬಲ ಕೊಟ್ಟಾರಿ, ಸದಾಶಿವ ಕುಲಾಲ್, ಶ್ರೀಮತಿ ಎ. ಜಯರಾಮ್, ಭಾಸ್ಕರ ಅತ್ತಾವರ್, ಶೀಧರ ಮೂಲ್ಯ, ಸುರೇಶ್ ಕುಲಾಲ್ ದಂಪತಿ, ನಟೇಶ್ ಕುಮಾರ್ ಬಂಗೇರ ದಂಪತಿ, ಗಣೇಶ್ ಕುಲಾಲ್, ಅಜಯ್ ಮೂಲ್ಯ ದಂಪತಿ, ದಯಾನಂದ ಮತ್ತು ಪ್ರವೀಣ್, ಬಿ. ಪ್ರೇಮಾನಂದ ಕುಲಾಲ್, ಸಂಜಯ್ ರಾಜು ಕುಂದರ್, ಹೇಮಚಂದ್ರ, ಕೃಷ್ಣ ಬಂಗೇರ ದಂಪತಿ ಮತ್ತು ದಿನೇಶ್ ಕುಲಾಲ್ ದಂಪತಿ.
ಅಲ್ಲದೆ, ಕುಲಾಲ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷ ರವಿ ದೇವಾಡಿಗ, ಅಖಿಲ ಭಾರತ ಕುಂಭಾರರ ಮಹಾಸಂಘದ ಅಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಲ್ತೂರು, ಹೆಗ್ಗಡೆ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಮನೋಜ್ ಹೆಗ್ಡೆ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರದ ಆಡಳಿತ ಟ್ರಷ್ಟಿ ಸುಂದರ್ ಕುಲಾಲ್ ಶಕ್ತಿನಗರ, ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕುಲಶೇಖರದ ಅಧ್ಯಕ್ಷ ದಾಮೋದರ ಎ., ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರದ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಹೋಟೆಲ್ ಅಶ್ವಿತ್ ಸಿಬಿಡಿ ಬೆಲಾಪುರ ನವಿ ಮುಂಬಯಿಯ ಸಂಜೀವ ಎನ್. ಶೆಟ್ಟಿ, ಕುಲಾಲ ಸಂಘ ಕೊಲ್ಯದ ಅಧ್ಯಕ್ಷ ಭಾಸ್ಕರ ಕುತ್ತಾರ್, ಜ್ಯೋತಿ ಸಹಕಾರಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿಯ ಮಾಜಿ ಅಧ್ಯಕ್ಷ ಎನ್.ಜಿ. ಮೂಲ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಗೌ. ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ. ಮೂಲ್ಯ ಮತ್ತು ಸುನಿಲ್ ಕೆ. ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್. ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಕಟ್ಟಡ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪಕಾರ್ಯಾಧ್ಯಕ್ಷರುಗಳಾದ ಸುನಿಲ್ ಆರ್. ಸಾಲ್ಯಾನ್, ಜೈರಾಜ್ ಪಿ. ಸಾಲ್ಯಾನ್, ಮಮತಾ ಎಸ್. ಗುಜರಾನ್, ಕಾರ್ಯದರ್ಶಿ ಉಮೇಶ್ ಎಂ. ಬಂಗೇರ ಭಾಗವಹಿಸಿದ್ದರು.
ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷ ಬಿ. ದಿನೇಶ್ ಕುಲಾಲ್, ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಉಪಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡಾ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ ಹಾಗೂ ಸದಸ್ಯರುಗಳು, ‘ಅಮೂಲ್ಯ’ ಸಂಪಾದಕ ಆನಂದ್ ಬಿ. ಮೂಲ್ಯ, ಉಪ ಸಂಪಾದಕ ಎಲ್. ಆರ್. ಮೂಲ್ಯ, ಉಪ ಸಮಿತಿಗಳು, ಸ್ಥಳೀಯ ಸಮಿತಿಗಳ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಪರವಾಗಿ ಅಧ್ಯಕ್ಷ ಮಯೂರ್ ಉಳ್ಳಾಲ್ ಸಹ ಉಪಸ್ಥಿತರಿದ್ದರು.
ಸಮಾರೋಪದ ಅಂಗವಾಗಿ ಡಾ. ದೇವದಾಸ್ ಕಾಪಿಕಾಡ್ ರವರ “ಏರ್ಲ ಗ್ಯಾರಂಟಿ ಅತ್” ತುಳು ನಾಟಕ ಪ್ರದರ್ಶನ ನಡೆಯಿತು. ಲಕ್ಷಣ್ ಸಿ. ಮೂಲ್ಯ ಧನ್ಯವಾದ ಸಮರ್ಪಿಸಿದರು.




