
ಸಮೀಕ್ಷಕರು ಪತ್ರಕರ್ತರಿದ್ದಂತೆ – ಪದ್ಮಜಾ ಮಣ್ಣೂರ
ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಷನ್ ಮುಂಬಯಿಯ ಕಿರು ಸಭಾಗೃಹದಲ್ಲಿ ಶನಿವಾರ ಸಂಜೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಆಯೋಜಿಸಿದ್ದ 9 ಕೃತಿಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮೀಕ್ಷೆಯು ಕೃತಿಯ ಕೈಗನ್ನಡಿ ಆಗಿದ್ದು, ಸಮೀಕ್ಷೆಯಲ್ಲಿ ಕೃತಿಯ ಸಂಪೂರ್ಣ ತಿರುಳು ತಿಳಿಯುತ್ತದೆ. ಒಂದೊಂದು ಕೃತಿಯ ಸಮೀಕ್ಷೆ ಕೇಳಿದಾಗಲೂ ಅದನ್ನು ಓದಲೇ ಬೇಕೆಂಬ ಕುತೂಹಲ ಹೆಚ್ಚುತ್ತದೆ. ಸಮೀಕ್ಷಕರು ಪತ್ರಕರ್ತರಿದ್ದಂತೆ, ಕೃತಿಯ ಭವಿಷ್ಯ ಅವರ ಕೈಯಲ್ಲಿದೆ. ಸಮೀಕ್ಷೆ ಮೂಲಕ ಸೃಜನಾ ಬಳಗವು ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ಕೃತಿಗಳನ್ನು ಹೊರ ತರಲು ಸ್ಫೂರ್ತಿ ನೀಡುತ್ತಿದೆ. ಕೃತಿಗಳ ಸಮೀಕ್ಷಕರು ಆ ನಿಟ್ಟಿನಲ್ಲಿ ಯೋಗ್ಯವಾದ ನಿರ್ಣಯ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

💖 ಸೃಜನಾ ಬಳಗದ ಹೆಜ್ಜೆ
- ಮುಂಬೈ ಕನ್ನಡ ಲೇಖಕಿಯರ ಬಳಗವಾದ ಸೃಜನಾ ಈಗ 22ರ ಸಂಭ್ರಮದಲ್ಲಿದೆ.
- ಬೆರಳೆಣಿಕೆಯಷ್ಟು ಲೇಖಕಿಯರಿಂದ ಆರಂಭಗೊಂಡ ಸೃಜನಾದಲ್ಲಿ ಈಗ ಸುಮಾರು 60ರಷ್ಟು ಸದಸ್ಯರಿದ್ದಾರೆ.
- ಪ್ರಧಾನ ರೂವಾರಿ ಡಾ. ಸುನೀತಾ ಎಂ. ಶೆಟ್ಟಿ ಮತ್ತು ಹಿರಿಯ ಸದಸ್ಯರ ಸಲಹೆ ಸೂಚನೆಗಳೊಂದಿಗೆ ಸೃಜನಾ ಮುಂದುವರಿಯುತ್ತಿದೆ.
- ಬಳಗವು ‘ಕತೆ ಹೇಳೇ’, ‘ಬೆಳಕಿನೆಡೆಗೆ’, ‘ಡಾ. ವಸಂತಕುಮಾರ ತಾಳ್ತಜೆ ಅವರ ನುಡಿ ನಮನ’, ‘ಜಾನಪದದಲ್ಲಿ ಮಹಿಳೆ’, ‘ಮುಂಬಯಿ ಬಿಂಬ’, ‘ಓದು ಮುಗಿದ ಮೇಲೆ’, ‘ನಮ್ಮ ಕವಿತೆ’, ‘ಹ್ಯಾಂಡ್ ಬುಕ್ ಆಫ್ ಕನ್ನಡ ವುಮೆನ್ ರೈಟರ್ಸ್’, ‘ಪ್ರವಾಸಿಗರ ಅಂತರಂಗ’, ‘ಗದ್ದಲದ ಗೂಡಲ್ಲಿ ಚಿಲಿಪಿಲಿ’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಪ್ರತಿಯೊಂದು ಕೃತಿಯು ತನ್ನದೇ ಆದ ಸಾಹಿತ್ಯಕ ವಿಶಿಷ್ಟತೆಯಿಂದ ಮೂಡಿಬಂದಿದೆ.
- ಬೇರೆ ಬೇರೆ ಸಂಘಗಳ ಸಹಯೋಗದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಳಗವು ಒಳನಾಡು-ಹೊರನಾಡುಗಳಲ್ಲಿ ಹೆಸರು ಗಳಿಸಿದೆ.
- ಕಥಾ ಕಮ್ಮಟ, ಅನುವಾದ ಕಮ್ಮಟ, ಕಾವ್ಯ ಕಮ್ಮಟ ಮುಂತಾದ ಅನವರತ ಸಾಹಿತ್ಯಕ ಚಟುವಟಿಕೆಗಳು ಸೃಜನಾದಲ್ಲಿ ಜರುಗುತ್ತಿರುತ್ತವೆ ಎಂದು ಪದ್ಮಜಾ ಮಣ್ಣೂರ ಅವರು ವಿವರಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಗೌ. ಪ್ರ. ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ, ಸುಧುಘಾ ಹೆಗ್ಡೆ, ಸೃಜನಾದ ಕೋಶಾಧಿಕಾರಿ ಡಾ. ದಾಕ್ಷಾಯಣಿ ಯಡಹಳ್ಳಿ, ಸಹ ಸಂಚಾಲಕಿ ಡಾ. ಜಿ ಪಿ ಕುಸುಮಾ, ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ, ಹಾಗೂ ಜೊತೆ ಕಾರ್ಯದರ್ಶಿ ಕುಸುಮಾ ಚಂದ್ರ ಪೂಜಾರಿ ಉಪಸ್ಥಿತರಿದ್ದರು.
ಸೃಜನಾ ಸದಸ್ಯೆಯರು ಈ ಕೆಳಗಿನ ಕೃತಿಗಳ ಸಮೀಕ್ಷೆಗಳನ್ನು ನಡೆಸಿದರು:
- ಡಾ. ದಾಕ್ಷಾಯಿಣಿ ಯಡಹಳ್ಳಿ – ‘ಸೂರ್ಯಪ್ರಭೆ’
- ಡಾ. ಜಿ ಪಿ ಕುಸುಮಾ – ‘ಹೊರನಾಡಿನಲ್ಲಿ ತುಳುವರು’
- ಲಲಿತಾ ಪ್ರಭು ಅಂಗಡಿ – ‘ಮುಂಬೈ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ’
- ಶಾರದಾ ಅಂಬೆಸಂಗೆ – ‘ಸೌಹಾರ್ದ ಸೇತು’
- ಲತಾ ಸಂತೋಷ್ ಶೆಟ್ಟಿ ಮುದ್ದುಮನೆ – ‘ಕನ್ನಡ ಶಾಲೆಯ ಸವಿನೆನಪುಗಳು’
- ಸುಶೀಲಾ ದೇವಾಡಿಗ – ‘ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ’
- ಅಶ್ವಿತಾ ಶೆಟ್ಟಿ – ‘ಯಾರು ಆಳಿದರೇನು ನಾವು ರಾಗಿ ಬೀಸೋದು ತಪ್ಪುತ್ತ’
- ರಶ್ಮಿ ಭಟ್ – ‘ನನ್ನ ಭಾರತ ನನ್ನ ಪರಂಪರೆ’
- ದೀಪಾ ಶೆಟ್ಟಿ – ‘ದಶಧಾರೆ’ (ನನ್ನೂರು ನನ್ನ ಶಹರ)
ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಸುಗುಣ ಬಂಗೇರ, ಶಾಂತ ಶೆಟ್ಟಿ, ಕರುಣಾಕರ್ ಟಿ. ಶೆಟ್ಟಿ, ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ.ಎಸ್. ನಾಯಕ್, ಬಿ. ಸಣ್ಣಯ್ಯ ದೇವಾಡಿಗ, ಶಾಮಲಾ ಮಾಧವ್, ಎಸ್. ಕೆ. ಸುಂದರ್, ಮಧುಸೂದನ್ ಟಿ. ಆರ್, ಗೋಪಾಲ್ ತ್ರಾಸಿ ಸೇರಿದಂತೆ ಸೃಜನಾ ಸದಸ್ಯರು, ಸಾಹಿತ್ಯ ಪ್ರೇಮಿಗಳು ಮತ್ತು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಂತ ಎಂ ಶೆಟ್ಟಿ ಪ್ರಾರ್ಥನೆಗೈದರು. ಪದ್ಮಜಾ ಮಣ್ಣೂರ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಾಗತ ಮತ್ತು ಪ್ರಸ್ತಾವನೆ ಮಾಡಿದರು. ಸಮೀಕ್ಷೆ ನಡೆಸಿದ ಪರಿವೀಕ್ಷಕರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕುಮದಾ ಡಿ. ಶೆಟ್ಟಿ ನಿರೂಪಿಸಿದರು. ಕೊನೆಯಲ್ಲಿ ಯಶೋದಾ ಶೆಟ್ಟಿ ಅವರು ವಂದಿಸಿದರು.




