
ಮುಂಬಯಿ: ಕಲಿಯುಗ ವರದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಅತ್ತೂರು ಗುಂಡ್ಯಡ್ಕ ಜಯ ಸ್ವಾಮಿ ಅವರ ಆಯೋಜನೆಯಲ್ಲಿ 19ನೇ ವರ್ಷದ ‘ಅಯ್ಯಪ್ಪ ಸ್ವಾಮಿ ಮಹಾಪೂಜೆ’ಯು ಡಿ. 19ರಂದು ದಹಿಸರ್ ಪೂರ್ವದ ರಾವಲ್ಪಾಡದ ಸೇಂಟ್ ಥಾಮಸ್ ಸ್ಕೂಲ್ ಬಳಿ ಇರುವ ರಾಧಾಕೃಷ್ಣ ಮಂದಿರ ಸಭಾಂಗಣದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅಂಧೇರಿಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಅವರ ಪವಿತ್ರ ಮಾರ್ಗದರ್ಶನದಲ್ಲಿ ಈ ಬಾರಿಯ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಅಂದು ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಪ್ರಾಣಪ್ರತಿಷ್ಠೆ ಪೂಜೆ, ಅರ್ಚನೆ ಹಾಗೂ ಕೇರಳ ಗ್ರೂಪ್ ಸದಸ್ಯರಿಂದ ಭಕ್ತಿಪೂರ್ವಕ ‘ನಾರಾಯಣೀಯಂ’ ಪಾರಾಯಣ ನಡೆಯಿತು. ನಂತರ ದಹಿಸರ್ ರಾವಲ್ಪಾಡದ ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನದ ಬುವಾಜಿ ಪ್ರಕಾಶ್ ಅಮೀನ್ ಮತ್ತು ತಂಡದವರಿಂದ ಭಜನಾ ಸಂಕೀರ್ತನೆ ನೆರೆದಿದ್ದ ಭಕ್ತರಲ್ಲಿ ಭಕ್ತಿಭಾವ ಮೂಡಿಸಿತು.

ಮಧ್ಯಾಹ್ನ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಅವರ ನೇತೃತ್ವದಲ್ಲಿ ಮಹಾಪೂಜೆ ಸಂಪನ್ನಗೊಂಡಿತು. ಪೂಜೆಯ ನಂತರ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಿ, ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ವಿಶೇಷವಾಗಿ ಜಯ ಸ್ವಾಮಿ ಅವರು ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಸತೀಶ್ ಗುರುಸ್ವಾಮಿ ಹಾಗೂ ಪ್ರಕಾಶ್ ಗುರುಸ್ವಾಮಿ ಇನ್ನಂಜೆ ಅವರಿಗೆ ‘ಗುರುವಂದನೆ’ ಸಲ್ಲಿಸಿ ಗೌರವಿಸಿದರು.

ಈ ಪುಣ್ಯ ಕಾರ್ಯಕ್ರಮದಲ್ಲಿ ನವದುರ್ಗಾ ಅಯ್ಯಪ್ಪ ಮಂಡಳಿ ದಹಿಸರ್ನ ಸದಸ್ಯರು, ಮೋಹನ್ ಗುರುಸ್ವಾಮಿ, ಆರಾಧನಾ ವೈಶಾಲಿ ನಗರದ ಸತೀಶ್ ಗುರುಸ್ವಾಮಿ, ಮುಂಬಯಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನದ ಅಧ್ಯಕ್ಷ ಶೇಖರ್ ಪಿ. ಶೆಟ್ಟಿ, ಉದ್ಯಮಿಗಳಾದ ಜಯ ಕೆ. ಪೂಜಾರಿ, ದಿನೇಶ್ ಡಿ. ಪೂಜಾರಿ, ಬಿಲ್ಡರ್ ರವೀಂದ್ರ ಶೆಟ್ಟಿ ವಿರಾರ್ ಸೇರಿದಂತೆ ಹಲವಾರು ಉದ್ಯಮಿಗಳು, ಹೋಟೆಲ್ ಮಾಲೀಕರು ಹಾಗೂ ವಾಹನ ಚಾಲಕರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ನೂರಾರು ಅಯ್ಯಪ್ಪ ಭಕ್ತರು ತಂಡೋಪತಂಡವಾಗಿ ಆಗಮಿಸಿ ಮಹಾಪ್ರಸಾದ ಸ್ವೀಕರಿಸಿದರು. ಆಯೋಜಕ ಅತ್ತೂರು ಗುಂಡ್ಯಡ್ಕ ಜಯ ಸ್ವಾಮಿ ಅವರು ಸರ್ವ ಭಕ್ತರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಚಿತ್ರ ವರದಿ: ದಿನೇಶ್ ಕುಲಾಲ್




