
ಕ್ರೀಡೆ ಬದುಕಿಗೆ ಸ್ಫೂರ್ತಿ, ಗುರಿ ನಿರ್ಧರಿಸಲು ಸಹಕಾರಿ: ಶ್ರೀನಿವಾಸ ಸಾಫಲ್ಯ
ಮುಂಬೈ: “ಆಟೋಟ ಸ್ಪರ್ಧೆಗಳು ಮನುಷ್ಯನ ಗುರಿಯನ್ನು ನಿರ್ಧರಿಸುವುದಲ್ಲದೆ, ಬದುಕಿಗೆ ಹೊಸ ಸ್ಫೂರ್ತಿಯನ್ನು ನೀಡುತ್ತವೆ. ಸೋಲು-ಗೆಲುವಿನ ವಿಶ್ಲೇಷಣೆಯು ಜೀವನದ ಮುಂದಿನ ಹಾದಿಗೆ ಪಾಠವಾಗಬಲ್ಲದು,” ಎಂದು ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಅಭಿಪ್ರಾಯಪಟ್ಟರು.
ನಗರದ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನಾದಲ್ಲಿ ಸಾಫಲ್ಯ ಸೇವಾ ಸಂಘದ ವತಿಯಿಂದ ಇತ್ತೀಚೆಗೆ (ಜ. 18) ಆಯೋಜಿಸಲಾಗಿದ್ದ ‘ಸಾಫಲ್ಯ ಕ್ರೀಡಾ ಸ್ಪರ್ಧೆ – 2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. “ಸಂಸಾರವೇ ಒಂದು ಬದುಕಿನ ಪಂದ್ಯ. ಸಮಾಜದ ಬಾಂಧವರು ಒಗ್ಗೂಡಿ ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಮಧುರ ಬಾಂಧವ್ಯದ ಸಂಕೇತವಾಗಿದೆ,” ಎಂದರು.

ಇದೇ ಸಂದರ್ಭದಲ್ಲಿ ಸಾಫಲ್ಯ ಸಮಾಜದ ಯುವ ಪ್ರತಿಭೆಗಳಾದ ರಾಷ್ಟ್ರೀಯ ಅಥ್ಲೆಟಿಕ್ ಹಾಗೂ ಟೇಬಲ್ ಟೆನಿಸ್ ಪಟು ಕುಮಾರಿ ಖುಷಿ ಮತ್ತು ಥ್ರೋ ಬಾಲ್ ರಾಷ್ಟ್ರೀಯ ಚಾಂಪಿಯನ್ ಕುಮಾರಿ ರಶಿ ಹರೀಶ್ ಸುವರ್ಣ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಟೈಗರ್ಸ್ ಅಂತರರಾಷ್ಟ್ರೀಯ ಲಾಜಿಸ್ಟಿಕ್ಸ್ನ ಉದ್ಯಮಿ ವಿಗ್ನೇಶ್ ಮಂಜೇಶ್ವರ ಮಾತನಾಡಿ, “ಸಂಘವು ಶ್ರೀನಿವಾಸ ಸಾಫಲ್ಯರ ನೇತೃತ್ವದಲ್ಲಿ ಮಹತ್ತರ ಅಭಿವೃದ್ಧಿ ಕಾಣುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಹೆಚ್ಚಿನ ಸಂಖ್ಯೆಯ ಉಪಸ್ಥಿತಿಯು ಸಮಾಜದ ಒಗ್ಗಟ್ಟಿನ ಪ್ರತೀಕವಾಗಿದೆ,” ಎಂದರು.

ಮುಂಬೈ ದೇವಾಡಿಗ ಸಂಘದ ಉಪಾಧ್ಯಕ್ಷ ನರೇಶ್ ದೇವಾಡಿಗ ಮಾತನಾಡಿ, “ಆಧುನಿಕ ಬದುಕಿನಲ್ಲಿ ದೈಹಿಕ ಕಸರತ್ತು ಮತ್ತು ಕ್ರೀಡೆಗಳು ಮನಸ್ಸಿನ ಸಂತುಲನ ಕಾಪಾಡಲು ಪೂರಕ. ಸಂಘದ ಬಲವರ್ಧನೆಗೆ ಯುವಪೀಳಿಗೆಯ ಸಹಕಾರ ಅಗತ್ಯ,” ಎಂದು ತಿಳಿಸಿದರು. ಮತ್ತೊಬ್ಬ ಅತಿಥಿ ಮೋಹನ್ ಮಂಜೇಶ್ವರ ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಬೆಳಿಗ್ಗೆ ಆಕರ್ಷಕ ಪಥಸಂಚಲನ, ದೀಪ ಪ್ರಜ್ವಲನೆ ಮತ್ತು ಪ್ರಾರ್ಥನೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಜೀವನ್ ಸಿರಿಯನ್ ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಹಿರಿಯರಿಗಾಗಿ ಸಾಮಾನ್ಯ ಜ್ಞಾನದ ರಸಪ್ರಶ್ನೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಮಲ್ಲಿಕಾ ಸಪಳಿಗ, ಮಹೇಶ್ ಬಂಗೇರ ಮತ್ತು ಹೇಮಂತ್ ಸಪಳಿಗ ಅವರನ್ನು ಸನ್ಮಾನಿಸಲಾಯಿತು.

ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಮತ್ತು ಕು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಕು. ಶ್ರೇಯ ಮತ್ತು ಕು. ಅನ್ವಿತ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಮಂಡೋನ್, ಯುವ ವಿಭಾಗದ ಅಧ್ಯಕ್ಷೆ ಕು. ಸಂದ್ಯಾ ಪುತ್ರನ್, ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಕೋಶಾಧಿಕಾರಿ ಹೇಮಂತ್ ಸಪಳಿಗ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಕಲಾ ಬಂಗೇರ, ರತಿಕ ಸಾಫಲ್ಯ, ವ್ರಿಷ್ಟಿ ಸಾಲಿಯಾನ್, ಸತೀಶ್ ಪುತ್ರನ್, ವಂದನಾ ಪುತ್ರನ್, ಶೋಭಾ ಬಂಗೇರ, ಪ್ರತಿಭಾ ಸಫಲಿಗ, ಮೀನಾಕ್ಷಿ ಸಪಳಿಗ, ಸತೀಶ್ ಕುಂದರ್, ಜಗನ್ನಾಥ್ ಕರ್ಕೇರ, ಸಂತೋಷ್ ಕುಂದರ್ ಹಾಗೂ ಕವಿತಾ ಪುತ್ರನ್ ಸಹಕರಿಸಿದರು. ಕಾರ್ಯದರ್ಶಿ ಭಾಸ್ಕರ್ ಸಪಳಿಗ ವಂದಿಸಿದರು. ಮೊದಲಿಗೆ ಆಗಮಿಸಿದ 200 ಸದಸ್ಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.




