
ಮುಂಬೈ: ಇಲ್ಲಿನ ಭಾಂಡುಪ್ ಪಶ್ಚಿಮದ ನಿವಾಸದಲ್ಲಿ ಜನ್ಮದಿನಾಚರಣೆಯ ಅಂಗವಾಗಿ ‘ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್’ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ನಿರ್ದೇಶಕಿ ಶ್ರೀದೇವಿ ರಾವ್ ಅವರು ಮಾತನಾಡಿ, “ದಿ. ಚಂದ್ರಶೇಖರ ರಾವ್ ಅವರು ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು ಎನ್ನುವ ಹಂಬಲ ಹೊಂದಿದ್ದರು. ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಅವರ ಆಶಯವನ್ನು ಈ ಟ್ರಸ್ಟ್ ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಇಂದಿನವರೆಗೂ ಅನೇಕ ವಿದ್ಯಾರ್ಥಿಗಳಿಗೆ ಟ್ರಸ್ಟ್ ನೆರವಿನ ಹಸ್ತ ಚಾಚಿದೆ,” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕಿ ಶ್ರೀಮತಿ ಅವರು ಮಾತನಾಡಿ, ಚಂದ್ರಶೇಖರ ರಾವ್ ಅವರ ಸಮಾಜಮುಖಿ ಚಿಂತನೆ ಹಾಗೂ ಇತರರ ಸಂಕಷ್ಟಕ್ಕೆ ಸ್ಪಂದಿಸುವ ಗುಣಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಗೌರವ ಅತಿಥಿಗಳಾದ ಅರುಣ್ ಶೇಟ್ ಹಾಗೂ ಪ್ರತಾಪ್ ಶೇಟ್ ಅವರು ರಾವ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ, ಅವರ ಸರಳ ಸಜ್ಜನಿಕೆ ಹಾಗೂ ಸಾಹಿತ್ಯ ಕ್ಷೇತ್ರದ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಾದ ಬಾಲಚಂದ್ರ ದೇವಾಡಿಗ, ಕೃಷ್ಣ ಪೂಜಾರಿ, ಸಂದೀಪ್ ಭಟ್ ಹಾಗೂ ಪರಮಾನಂದ ದಳಪತಿ ಅವರು ಮಾತನಾಡಿ, ಟ್ರಸ್ಟ್ ಮೂಲಕ ನಡೆಯುತ್ತಿರುವ ಸಾಹಿತ್ಯ ಹಾಗೂ ಸಮಾಜಸೇವೆಯ ಕಾರ್ಯಗಳನ್ನು ಹರಸಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಜಾನಪದ ಹಾಡು ಹಾಗೂ ನೃತ್ಯ ಪ್ರದರ್ಶನ ನಡೆಯಿತು. ವಿಶೇಷವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಪ್ರತಿಭೆ ಆರ್ನಾ ಸಂದೀಪ್ ಭಟ್ ಅವರ ಕಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯು ಕಾರ್ಯಕ್ರಮಕ್ಕೆ ಸಾಹಿತ್ಯಿಕ ಮೆರುಗು ನೀಡಿತು.
ಕಾರ್ಯಕ್ರಮದ ಆರಂಭದಲ್ಲಿ ಅರ್ಪಿತಾ ಭಟ್ ಪ್ರಾರ್ಥಿಸಿದರು. ಡಾ. ಜಿ.ಪಿ. ಕುಸುಮಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ರಾವ್ ಅವರ ಕುಟುಂಬಸ್ಥರು, ಹಿತೈಷಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.




