
ಮೂಡಬಿದ್ರೆ ಕುಂಜಾಡಿಯ ನಿವಾಸಿಯಾದ ಹಿರಿಯ ಸಮಾಜ ಸೇವಕ, ಪ್ರಗತಿಪರ ಕೃಷಿಕ ಹಾಗೂ ದಾನಿಗಳಾದ ಮಹಾಬಲ (95) ಅವರು ಮಾರ್ಚ್ 5ರಂದು ದೈವಾಧೀನರಾಗಿದ್ದಾರೆ. ಮೃತರು ಮುಂಬೈನ ಖ್ಯಾತ ಜ್ಯೋತಿಷಿ, ಪುರೋಹಿತ ಹಾಗೂ ಸಯನ್ ಕನ್ನಡ ಸಂಘದ ಅಧ್ಯಕ್ಷರಾದ ಪ್ರವೀಣ್ ಭಟ್ ಅವರ ತಂದೆಯಾಗಿದ್ದಾರೆ.
ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಸಕ್ರಿಯ ಸದಸ್ಯರಾಗಿ ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದ ಅವರು, ಕೃಷಿ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ ಸಾಧಕರಾಗಿದ್ದರು. ಮೃತರು ಪತ್ನಿ, ಪ್ರವೀಣ್ ಭಟ್ ಸೇರಿದಂತೆ ಆರು ಮಂದಿ ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಕನ್ನಡ ಸಂಘ ಸಯನ್ ನ ಪದಾಧಿಕಾರಿಗಳು, ಸಲಹೆಗಾರರು, ಸದಸ್ಯರು, ಮುಂಬೈ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸದಸ್ಯರು ಹಾಗೂ ಜಯ ಸಿ. ಸುವರ್ಣ ಅಭಿಮಾನಿ ಬಳಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜದ ಹಿತಚಿಂತಕರಾಗಿದ್ದ ಅವರ ಅಗಲಿಕೆಯು ಈ ಭಾಗದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.




