June 25, 2026
Mumbai News Kannada
ಸುದ್ದಿ

ಸತತ 12 ಗಂಟೆ ಚರ್ಚೆ, ವಾಗ್ವಾದ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ





ಸುದೀರ್ಘ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಬಿಸಿಬಿಸಿ ಚರ್ಚೆ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆ ರಾಜ್ಯಸಭೆಯು ವಕ್ಫ್ (ತಿದ್ದುಪಡಿ) ಮಸೂದೆ, 2025 ನ್ನು ಅಂಗೀಕರಿಸಿತು.

ರಾಜ್ಯಸಭೆಯಲ್ಲಿ, ಮಸೂದೆಯ ಪರವಾಗಿ 128 ಮತಗಳು ಮತ್ತು ವಿರೋಧವಾಗಿ 95 ಮತಗಳು ಚಲಾವಣೆಯಾದವು. ವಕ್ಫ್ ಮಂಡಳಿಗೆ ತಿದ್ದುಪಡಿ ತರಲು ಕೋರುವ ಮಸೂದೆಯು ಮುಸಲ್ಮಾನ ಸಮುದಾಯಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಬದಲಿಗೆ ಅವರಿಗೆ ಇನ್ನಷ್ಟು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ತಿದ್ದುಪಡಿ ಮಸೂದೆ ಬಗ್ಗೆ ನಿನ್ನೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಚರ್ಚೆ ಆರಂಭವಾಗಿ ಇಂದು ನಸುಕಿನ ಜಾವದವರೆಗೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಸತತ ಚರ್ಚೆಗಳು ನಡೆದವು. ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವ ಮೊದಲು, ವಕ್ಫ್ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಾಗಿಲ್ಲ ಎಂದು ರಿಜಿಜು ಒತ್ತಿ ಹೇಳಿದರು.

ವಕ್ಫ್ ಮಂಡಳಿ ಯಾವಾಗಲೂ ಹಾಗೆಯೇ ಇರುತ್ತದೆ. ವಕ್ಫ್ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು, ಮುಸ್ಲಿಮರನ್ನು ಮಾತ್ರ ಶಾಸನಬದ್ಧ ಸಂಸ್ಥೆಯಲ್ಲಿ ಏಕೆ ಸೇರಿಸಬೇಕು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿವಾದವಿದ್ದರೆ, ಆ ವಿವಾದವನ್ನು ಹೇಗೆ ಪರಿಹರಿಸಲಾಗುತ್ತದೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರೊಂದಿಗೆ ವಿವಾದಗಳೂ ಇರಬಹುದಲ್ಲವೇ ಎಂದು ಕೇಳಿದರು.

ಶಾಸನಬದ್ಧ ಸಂಸ್ಥೆಯು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಒಳಗೊಂಡ ಜಾತ್ಯತೀತ ಸಂಸ್ಥೆಯಾಗಿರಬೇಕು ಎಂದು ರಿಜಿಜು ವಾದಿಸಿದರು. ನಂತರ ಮಸೂದೆಯನ್ನು ರಾಜ್ಯಸಭೆಯಲ್ಲಿ ಷರತ್ತು-ಅನುಬಂಧದ ಆಧಾರದ ಮೇಲೆ ಮತಕ್ಕೆ ಹಾಕಲಾಯಿತು.

ಇದಕ್ಕೂ ಮೊದಲು, ಕೇಂದ್ರ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025 ನ್ನು ರಾಜ್ಯಸಭೆಯಲ್ಲಿ ಮಂಡಿಸಿದರು, ಆಡಳಿತಾರೂಢ ಎನ್‌ಡಿಎ ಈ ಶಾಸನವನ್ನು ಅಲ್ಪಸಂಖ್ಯಾತರಿಗೆ ಪ್ರಯೋಜನಕಾರಿ ಎಂದು ಸಮರ್ಥಿಸಿಕೊಂಡರೆ, ಪ್ರತಿಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ಎಂದು ಕರೆದವು.

ಲೋಕಸಭೆಯಲ್ಲಿ, ವಿರೋಧ ಪಕ್ಷದ ಸದಸ್ಯರು ತಂದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತಗಳಿಂದ ತಿರಸ್ಕರಿಸಿದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮತಗಳ ವಿಭಜನೆಯಲ್ಲಿ 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.



Related posts

ಮಲಾಡ್: ನಡಿಕೆರೆ ಕೃಷ್ಣ ಶೆಟ್ಟಿ ನಿಧನ

Mumbai News Desk

ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ವಿತರಣೆಗೆ ಸುಪ್ರೀಂ ಕೋರ್ಟ್ ನಿಷೇಧ

Mumbai News Desk

ಆರ್ಥಿಕ ಕ್ರಾಂತಿಯ ಹರಿಕಾರ, ಸಮಾಜ ಸೇವಕ ವರದ ಉಳ್ಳಾಲ್ ಅಸ್ತಂಗತ : ಮುಂಬೈನಲ್ಲಿ ಇಂದು ಅಂತ್ಯಕ್ರಿಯೆ

Mumbai News Desk

ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ ತುಳು ನಾಟಕ ಪ್ರದರ್ಶನ   ಸಾಧಕರಿಗೆ ಸನ್ಮಾನ

Mumbai News Desk

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಬದ್ದ : ಪತ್ರಿಕಾಗೋಷ್ಥಿಯಲ್ಲಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk