
ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಭಜನೆ ಪೂರಕ: ಭಾರತಿ ಅಂಚನ್
ಮುಂಬೈ: “ಭಜನೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗ. ಮಕ್ಕಳು ಬಾಲ್ಯದಲ್ಲೇ ಭಜನೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಸಂಸ್ಕಾರ ಹಾಗೂ ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳುತ್ತವೆ,” ಎಂದು ಬಿಲ್ಲವರ ಅಸೋಸಿಯೇಶನ್ ಮುಂಬೈ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಭಾರತಿ ಅಂಚನ್ ತಿಳಿಸಿದರು.
ಮಾರ್ಚ್ 12ರಂದು ಮೀರಾರೋಡ್ ಪೂರ್ವದ ಶಾಂತಿನಗರದ ಸೆಕ್ಟರ್ 5ರಲ್ಲಿರುವ ಬಿಲ್ಲವರ ಅಸೋಸಿಯೇಶನ್ನ ಮೀರಾರೋಡ್ ಸ್ಥಳೀಯ ಕಚೇರಿಯಲ್ಲಿ, ಬೇಸಿಗೆ ಶಿಬಿರದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ **’ಮಕ್ಕಳ ಭಜನಾ ತಂಡ’**ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
”ಭಜನೆಯಲ್ಲಿನ ಕೈತಟ್ಟುವುದು, ದೈಹಿಕ ಚಲನೆ ಮತ್ತು ನೃತ್ಯವು ಮಕ್ಕಳ ದೈಹಿಕ, ಮಾನಸಿಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಗೆ ಸಹಕಾರಿ. ಇಂದಿನ ಮಕ್ಕಳು ಮೊಬೈಲ್, ದೂರದರ್ಶನ ಮತ್ತು ಆಧುನಿಕ ತಂತ್ರಜ್ಞಾನದ ಅಡ್ಡಪರಿಣಾಮಗಳಿಂದ ದೂರವಿದ್ದು, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಸಾಮೂಹಿಕ ಭಜನೆಯು ಸಹಕಾರ ಮತ್ತು ಸ್ನೇಹ ಮನೋಭಾವವನ್ನು ವೃದ್ಧಿಸುತ್ತದೆ,” ಎಂದು ಅವರು ಶುಭ ಹಾರೈಸಿದರು.
ಮೀರಾರೋಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಎಂ. ಕರ್ಕೇರ ಮಾತನಾಡಿ, “ಪಾಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಆತ್ಮವಿಶ್ವಾಸವನ್ನು ತುಂಬುವ ಪ್ರೇರಕ ಶಕ್ತಿಗಳಾಗಿವೆ. ವೇದಿಕೆಯಲ್ಲಿ ಭಜನೆ ಹಾಡುವುದು ಅಥವಾ ವಾದ್ಯ ನುಡಿಸುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ,” ಎಂದರು.
ಇದೇ ಸಂದರ್ಭದಲ್ಲಿ ತರಬೇತಿ ನೀಡಿದ ಭಜನಾ ಗುರು ಪ್ರಪುಲ್ ಶ್ರೀಯಾನ್ ಮತ್ತು ಶಿಬಿರಾರ್ಥಿ ಮಕ್ಕಳನ್ನು ಸ್ಥಳೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ವಿಜೇತೇಂದ್ರ ಸನಿಲ್ ಅವರ ಪೌರೋಹಿತ್ಯದಲ್ಲಿ ಗುರುಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರಾದ ಎನ್.ಪಿ. ಕೋಟ್ಯಾನ್ ಮತ್ತು ದಿನೇಶ್ ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ ಮಾಬಿಯಾನ್, ಜಂಟಿ ಕೋಶಾಧಿಕಾರಿ ಲೀಲಾಧರ್ ಕೆ. ಸನಿಲ್ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕೆ. ಪೂಜಾರಿ, ಶಾಂಭವಿ ಜಿ. ಸಾಲ್ಯಾನ್, ಗೀತಾ ಎಂ. ಪೂಜಾರಿ, ಸಂಜೀವಿ ಎಸ್. ಪೂಜಾರಿ, ಸುಲೋಚನಾ ವಿ. ಮಾಬಿಯಾನ್, ಸುಮಿತ್ರಾ ಪೂಜಾರಿ, ರಾಧಾ ಎಸ್. ಕೋಟ್ಯಾನ್, ಪೂರ್ಣಿಮಾ ಪೂಜಾರಿ, ಇಂದಿರಾ ಎಸ್. ಸುವರ್ಣ ಹಾಗೂ ಕೇಂದ್ರ ಕಚೇರಿಯ ಜಿ.ಕೆ. ಕೆಂಚನಕೆರೆ, ಅಶೋಕ್ ವಳದೂರು ಸೇರಿದಂತೆ ಯುವ ವಿಭಾಗ ಮತ್ತು ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು. ಗೌರವ ಕಾರ್ಯದರ್ಶಿ ಜಯಲಕ್ಷ್ಮಿ ಎಸ್. ಸಾಲ್ಯಾನ್ ವಂದಿಸಿದರು.
ವರದಿ ಮತ್ತು ಚಿತ್ರ: ರಮೇಶ ಅಮೀನ್




