32 C
Mumbai
April 23, 2026
Mumbai News Kannada
EnglishUncategorizedಮುಂಬಯಿ

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ





ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ- ದೇವೇಂದ್ರ ಬಿ. ಬುನ್ನನ್

ಚಿತ್ರ ವರದಿ: ದಿನೇಶ್ ಕುಲಾಲ್

​ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾದ ವೈಶಿಷ್ಟ್ಯಪೂರ್ಣ ನವರಾತ್ರಿ ಉತ್ಸವವು, ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ಭವ್ಯ ಪ್ರತೀಕವಾಗಿ ಮೂಡಿಬಂದಿದೆ. ಶಾರದಾ ಪೂಜೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ, ಭಕ್ತಿಗೀತೆಗಳ ರಸಮಂಜರಿ, ಉತ್ಸಾಹಭರಿತ ಕುಣಿತ ಭಜನೆ ಹಾಗೂ ಸಮಾಜದ ಸಾಧಕರಿಗೆ ಸನ್ಮಾನದಂತಹ ವಿಶಿಷ್ಟ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

​ಮುಂಬಯಿಯ ವಸಾಯಿ ಪಶ್ಚಿಮದ ಪಾರ್ವತಿ ಸಿನೆಮಾ ಹತ್ತಿರವಿರುವ ಸ್ವಾಮಿ ನಾರಾಯಣ ಮಂದಿರ ಸಭಾಗೃಹದ ಮೊದಲ ಮಹಡಿಯಲ್ಲಿ, ಅಕ್ಟೋಬರ್ 1 ರಂದು (28ರ ರವಿವಾರ) ಜರುಗಿದ ನವರಾತ್ರಿ ಉತ್ಸವವನ್ನು ಸಂಘದ ಅಧ್ಯಕ್ಷರಾದ ದೇವೇಂದ್ರ ಬಿ. ಬುನ್ನನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವರ್ಷಂಪ್ರತಿ ಪರಿಸರದ ಕನ್ನಡಿಗರನ್ನು ಒಗ್ಗೂಡಿಸಿ ಶಾರದಾ ಪೂಜೆಯನ್ನು ಆಯೋಜಿಸುತ್ತಿದ್ದ ಮಹಿಳಾ ವಿಭಾಗ, ಈ ಬಾರಿ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಕರ್ನಿರೆ ಅವರ ಸಾರಥ್ಯದಲ್ಲಿ ಇದನ್ನು ಮತ್ತಷ್ಟು ವಿಭಿನ್ನವಾಗಿ ಸಂಘಟಿಸಿ, ಅಪಾರ ಸಂಖ್ಯೆಯ ಮಹಿಳೆಯರನ್ನು ಒಂದುಗೂಡಿಸಿತು.

​ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್ ಅವರು ಮಾತನಾಡಿ, “ಮಹಿಳೆಯರ ಭಜನೆ, ಮಕ್ಕಳ ಕುಣಿತ ಭಜನೆ, ಹಾಗೂ ವಿಜಯ ಶೆಟ್ಟಿ ಮೂಡಬೆಳ್ಳೆ ಅವರ ಭಕ್ತಿರಸಮಂಜರಿಯೊಂದಿಗೆ ಸಂಪನ್ನಗೊಂಡ ಈ ವಿಶಿಷ್ಟ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

​ಸಂಘದ ಉಪಾಧ್ಯಕ್ಷರಾದ ಕರ್ನೂರ ಶಂಕರ್ ಆಳ್ವ ಅವರು ನವರಾತ್ರಿಯ ಮಹತ್ವವನ್ನು ವಿವರಿಸಿ, “ನವರಾತ್ರಿಯ ದಿನಗಳು ನವದುರ್ಗೆಯರು ಧರ್ಮದ ರಕ್ಷಣೆಯ ಶಕ್ತಿಯ ಪ್ರತಿಬಿಂಬವಾಗಿದೆ. ಬೇರೆ ಬೇರೆ ರೂಪದಲ್ಲಿ ತಮ್ಮ ಶಕ್ತಿ ರೂಪವನ್ನು ಪ್ರದರ್ಶಿಸಿ ಧರ್ಮವನ್ನು ರಕ್ಷಿಸಿಕೊಂಡವರು” ಎಂದು ನುಡಿದರು.

​ಗೌರವ ಅಧ್ಯಕ್ಷರಾದ ವಿಶ್ವನಾಥ್ ಪಿ. ಶೆಟ್ಟಿ ಅವರು ತಮ್ಮ ಸಂದೇಶದಲ್ಲಿ, “ನವರಾತ್ರಿ ಹಬ್ಬ ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಮಹಿಳಾ ವಿಭಾಗವು ಆಯೋಜಿಸಿದ ವಿಭಿನ್ನ ಕಾರ್ಯಕ್ರಮಗಳು ವಿವಿಧ ಸಂಸ್ಕೃತಿಗಳನ್ನು ನೋಡುವ ಅವಕಾಶ ಕಲ್ಪಿಸಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

​ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಅವರು ಸರ್ವರನ್ನೂ ಸ್ವಾಗತಿಸಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಸಂಘದ ನಿರಂತರ ಸೇವೆಯನ್ನು ಉಲ್ಲೇಖಿಸಿ, ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

​ಸಾಧಕರಿಗೆ ಗೌರವ ಸನ್ಮಾನ

​ಈ ಸಂದರ್ಭದಲ್ಲಿ ಸಮಾಜದಲ್ಲಿ ತಮ್ಮ ಸಾಧನೆಯ ಮೂಲಕ ಛಾಪು ಮೂಡಿಸಿದ ಇಬ್ಬರು ಮಹಿಳೆಯರನ್ನು ಸನ್ಮಾನಿಸಲಾಯಿತು:

  1. ಮಧುರಾ ಹರೀಶ್ ಶೆಟ್ಟಿ: ಇತ್ತೀಚೆಗೆ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಇವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, “ಮಹಿಳೆಯರು ಸಮಾಜದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ವಯಸ್ಸು ಅಡ್ಡಿಯಲ್ಲ; ಪ್ರತಿಭೆಯನ್ನು ಪ್ರದರ್ಶಿಸಿದಾಗ ಆತ್ಮಶೈರ್ಯ ಹೆಚ್ಚುತ್ತದೆ. ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿದ ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
  2. ಜಯಶ್ರೀ ಪಿ. ಅಂಚನ್: ಶಿಕ್ಷಕಿಯಾಗಿರುವ ಇವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತಾ, “ಕಳೆದ 25 ವರ್ಷಗಳಿಂದ ಈ ಪರಿಸರದಲ್ಲಿ ಟ್ಯೂಷನ್ ಕ್ಲಾಸ್‌ಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶಕರಾಗಿದ್ದೇವೆ. ಮಹಿಳೆಯರು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು” ಎಂದು ಕರೆ ನೀಡಿದರು.

​ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ, ವಸಾಯಿ ಇವರಿಂದ ಭಜನೆ, ಬಳಿಕ ನಗರದ ಪ್ರಸಿದ್ಧ ಸಂಗೀತ ಕಲಾವಿದ ವಿಜಯ್ ಶೆಟ್ಟಿ ಮೂಡಬೆಳ್ಳೆ ಅವರಿಂದ ಭಕ್ತಿ ರಸಮಂಜರಿ, ಸಂಜೆ ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ಮಕ್ಕಳಿಂದ ಕುಣಿತ ಭಜನೆ ಹಾಗೂ ಮಹಿಳೆಯರಿಂದ ಹಳದಿ-ಕುಂಕುಮ ಕಾರ್ಯಕ್ರಮ ನಡೆಯಿತು.

​ಕಾರ್ಯಕ್ರಮವನ್ನು ಸುರೇಖಾ ಹರಿಪ್ರಸಾದ್ ರೈ ಅವರು ನಿರೂಪಿಸಿ ಮೆರಗು ನೀಡಿದರೆ, ಪೂರ್ಣಿಮ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು.

​ವೇದಿಕೆಯ ಮೇಲೆ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ. ಶೆಟ್ಟಿ, ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್, ಉಪಾಧ್ಯಕ್ಷ ಕರ್ನೂರ ಶಂಕರ್ ಆಳ್ವ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ, ಉಪ ಕಾರ್ಯಧ್ಯಕ್ಷ ಓ ಪಿ ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ವಿಜಯ್ ಎಂ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಯಶೋಧರ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ, ಸಂಘದ ಕಾರ್ಯದರ್ಶಿ ಪೂರ್ಣಿಮಾ ಎ. ಶೆಟ್ಟಿ, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.

​ಸಂಘದ ಜತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್, ಜತೆ ಕೋಶಾಧಿಕಾರಿ ಹರಿಪ್ರಸಾದ್ ಶೆಟ್ಟಿ, ಸದಸ್ಯ ನೋಂದಣಿಕೆ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ಗಂಗಾಧರ್ ಶೆಟ್ಟಿ, ಕರುಣಾಕರ್ ಅಮೀನ್, ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರು ಹಾಗೂ ಅಪಾರ ಸಂಖ್ಯೆಯ ತುಳು-ಕನ್ನಡಿಗರು ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



Related posts

As ‘Unicorns’ Emerge, Utah Makes a Case for Tech Entrepreneurs

admin

ಕುಲಾಲ ಸಂಘ ಮುಂಬಯಿ  : ವಿದ್ಯಾರ್ಥಿ ವೇತನ ವಿತರಣೆ.

Mumbai News Desk

Precinct Data Shows Rich, White Neighborhoods Flipping Democratic in 2016. Will It Last?

admin

ವಿವಶ….

Chandrahas

ಭಾರತ್ ಬ್ಯಾಂಕಿನ ಬೈಕುಲ್ಲಾ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆ: ಯಶಸ್ವಿ ಆಚರಣೆ

Mumbai News Desk

Jayashreekrishna Parisara Premi Samiti : Conferring George Fernandes Memorial National Aaward to Metro Man Of India Padmavibhushana Dr. E. Shreedaran

Mumbai News Desk