
ಯಕ್ಷಗಾನ ಯಾವುದೇ ಭಾಷೆಯಲ್ಲಿ ಪ್ರಸ್ತುತಗೊಂಡರೂ ಕಲಾಭಿಮಾನಿಗಳು ಪ್ರೋತ್ಸಾಹಿಸುತ್ತಾರೆ: ನ್ಯಾ. ಪ್ರಕಾಶ್ ಶೆಟ್ಟಿ ಕಡಂದಲೆ ಪರಾರಿ.
ಮುಂಬಯಿ, ಮಾ. 16: ಶ್ರೀ ರಾಮಾಭಿವಂದ್ಯಾ ಯಕ್ಷ ಸೇವಾ ಬಳಗ ಮತ್ತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಸರಣಿ ತಾಳಮದ್ದಳೆಯ 3ನೆಯ ಕಂತು ‘ಶ್ರೀರಾಮ ವನಗಮನ’ ಎಂಬ ಕಥಾಭಾಗವು ಮಾರ್ಚ್ 15ರಂದು ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ತಾಳಮದ್ದಲೆ ಕಾರ್ಯಕ್ರಮದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್, ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ, ಮುಖ್ಯ ಅತಿಥಿಯಾಗಿ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಪರಾರಿ ಕಡಂದಲೆ ಹಾಗೂ ರತ್ನಾಕರ ಶೆಟ್ಟಿ ಐಕಳ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಕಾಶ್ ಶೆಟ್ಟಿ ಪರಾರಿ ಅವರು ಮಾತನಾಡಿ, “ಇದೊಂದು ಉತ್ತಮ ಸಂಸ್ಕಾರವನ್ನೀಯುವ, ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮವಾಗಿದೆ. ಶ್ರೀ ರಾಮಾಭಿವಂದ್ಯಾ ಯಕ್ಷ ಸೇವಾ ಬಳಗದವರು ಈ ಉತ್ತಮ ಕಾರ್ಯಕ್ರಮದೊಂದಿಗೆ ಹಿರಿಯ ಕಲಾವಿದರನ್ನು ಸಪತ್ನೀಕರಾಗಿ ಗೌರವಿಸಿದ್ದು ಶ್ಲಾಘನೀಯ. ಕಲಾವಿದ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಸಂಸಾರ ಅವರನ್ನು ಪ್ರೋತ್ಸಾಹಿಸದಿದ್ದಲ್ಲಿ ಕಲಾಸೇವೆ ಅಸಾಧ್ಯ. ದೇವರು ನಮಗೆ ಬಂದ ಕಷ್ಟಗಳನ್ನು ನೇರವಾಗಿ ಪರಿಹರಿಸುವುದಿಲ್ಲ; ನಮ್ಮ ನಮ್ಮ ಕರ್ಮಕ್ಕೆ ಅನುಗುಣವಾಗಿ ರೋಗ-ಸಂಕಷ್ಟಗಳನ್ನು ನಾವು ಎದುರಿಸಲೇಬೇಕಾಗುತ್ತದೆ. ಅದನ್ನೇ ಶ್ರೀರಾಮಕೃಷ್ಣರು ಭುವಿಯಲ್ಲಿ ಅವತರಿಸಿ ನಮಗೆಲ್ಲ ಆದರ್ಶವಾಗಿ ತೋರಿಸಿಕೊಟ್ಟಿದ್ದಾರೆ. ಯಕ್ಷಗಾನವು ಯಾವುದೇ ಭಾಷೆಯಲ್ಲಿ ಪ್ರಸ್ತುತಗೊಂಡರೂ ಜನರು ಸಂತೋಷದಿಂದ ನೋಡಿ ಹರ್ಷ ವ್ಯಕ್ತಪಡಿಸುತ್ತಾರೆ. ಇಂದಿನ ತಾಳಮದ್ದಲೆಯಲ್ಲಿ ಉತ್ತಮ ಅರ್ಥಧಾರಿಗಳಿದ್ದಾರೆ,” ಎಂದು ಹರ್ಷ ವ್ಯಕ್ತಪಡಿಸಿ ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸಿದರು.
ಇನ್ನೋರ್ವ ಅತಿಥಿ ರತ್ನಾಕರ ಶೆಟ್ಟಿ ಐಕಳ ಮಾತನಾಡಿ, “ನಾನು ಓರ್ವ ಹವ್ಯಾಸಿ ಕಲಾವಿದ. ಕಲಾವಿದರಿಗೆ ಇಂತಹ ಕಾರ್ಯಕ್ರಮಗಳು ಆನಂದವನ್ನು ನೀಡುತ್ತವೆ,” ಎಂದು ತಂಡಕ್ಕೆ ಶುಭಕೋರಿದರು.
ವೇ| ಮೂ| ಹರಿದಾಸ ಭಟ್ ಪೆರ್ಣಂಕಿಲ ಮಾತನಾಡಿ, “ಶ್ರೀ ರಾಮಾಭಿವಂದ್ಯಾ ಯಕ್ಷ ಸೇವಾ ಬಳಗ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ಈ ಸರಣಿ ತಾಳಮದ್ದಲೆ ಕಾರ್ಯಕ್ರಮದಲ್ಲಿ ‘ಶ್ರೀ ರಾಮ ಕಥಾ ಹೃದಯಂ’ ಪ್ರಸಂಗವು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ನೀಡುತ್ತದೆ. ಪಿತೃವಾಕ್ಯ ಪರಿಪಾಲನೆಯಿಂದ ನಮ್ಮ ಜೀವನ ಸಂಸ್ಕರಣಗೊಂಡು ದೇಶಕ್ಕೆ, ರಾಜ್ಯಕ್ಕೆ ಸೇವೆ ಸಲ್ಲಿಸುವ ಅವಕಾಶ ಬರುತ್ತದೆ. ತಂದೆ-ತಾಯಿಯೇ ದೇವರು, ಅವರ ಮಾತನ್ನು ಪಾಲಿಸಲೇಬೇಕು. ಇಂತಹ ಸಂಸ್ಕಾರ ನೀಡುವ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತನ್ನಿ. ಸರಣಿ ತಾಳಮದ್ದಳೆ ಸಮಾರೋಪದ ಹಂತಕ್ಕೆ ತಲುಪುವಾಗ ಶೋತೃಗಳಿಂದ ಈ ಪ್ರಾಂಗಣ ತುಂಬಿ ರಾಮರಾಜ್ಯದ ಕನಸು ನನಸಾಗಲಿ,” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮುಂಬೈ ಮಹಾನಗರದ ಹಿರಿಯ ಸವ್ಯಸಾಚಿ ಕಲಾವಿದರಾದ ಟಿ. ಆರ್. ಶೆಟ್ಟಿ ದಂಪತಿ ಹಾಗೂ ನಿಗರ್ವಿ ಮದ್ದಲೆ ವಾದಕ ಹರೀಶ್ ನಾರಾಯಣ ಸಾಲ್ಯಾನ್ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ. ಆರ್. ಶೆಟ್ಟಿ, “ಯಕ್ಷಗಾನ ಸರಸ್ವತಿಯ ಸೇವೆಯನ್ನು ಸರಿಸುಮಾರು 55 ವರ್ಷಗಳಿಂದ ಮುಂಬೈನಲ್ಲಿ ಸಲ್ಲಿಸುತ್ತಾ ಬಂದಿದ್ದೇನೆ. ಇಂದು ಪತಿ-ಪತ್ನಿಯರಾಗಿ ಈ ಗೌರವ ಸ್ವೀಕರಿಸಿದ್ದು ತುಂಬಾ ಸಂತೋಷ ನೀಡಿದೆ,” ಎಂದು ಧನ್ಯವಾದ ಅರ್ಪಿಸಿದರು.
ಕನ್ನಡ ಭವನದ ಪ್ರಾಂಶುಪಾಲರಾದ ಅಮೃತಾ ಶೆಟ್ಟಿ ಸ್ವಾಗತಿಸಿ ಅತಿಥಿಗಳ ಪರಿಚಯ ನೀಡಿದರು. ಸಿ.ಎ. ರಾಜಶ್ರೀ ಜೆ. ಶೆಟ್ಟಿ ಹಾಗೂ ಅಮೃತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ಸಂಯೋಜಕರಲ್ಲಿ ಒಬ್ಬರಾದ ವಾಸುದೇವ ಮಾರ್ನಾಡ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ತಾಳಮದ್ದಲೆಯಲ್ಲಿ:
- ಅರ್ಥಧಾರಿಗಳು: ವಾಸುದೇವ ಮಾರ್ನಾಡ್ (ಮಂಥರೆ), ಸುರೇಶ ಶೆಟ್ಟಿ ನಂದ್ರೊಳ್ಳಿ (ಕೈಕೇಯಿ), ಅಶೋಕ್ ಪಕ್ಕಳ (ದಶರಥ), ಸುಜಾತ ಶೆಟ್ಟಿ (ಶ್ರೀರಾಮ-1), ರವೀಂದ್ರ ಉಚ್ಚಿಲ್ (ಶ್ರೀರಾಮ-2), ಮಾನಸ್ ಶೆಟ್ಟಿ (ಲಕ್ಷ್ಮಣ).
- ಹಿಮ್ಮೇಳ: ಭಾಗವತರಾಗಿ ಸುಬ್ರಾಯ ಹೆಬ್ಬಾರ್ ಬಲಗೋಣು ಮತ್ತು ರಾಘವೇಂದ್ರ ಭಟ್ ಮಾಳ. ಚೆಂಡೆ-ಮದ್ದಲೆಯಲ್ಲಿ ಅಕ್ಷಯ ಪ್ರಭು ಮಾಸ್ತಿಕಟ್ಟೆ ಮತ್ತು ಸಚಿನ್ ಆಚಾರ್ಯ ಕುಂಭಾಶಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಹಾಗೂ ರಂಗನಟ ಮೋಹನ್ ಶೆಟ್ಟಿ ಮಾರ್ನಾಡ್ ಮುಂತಾದವರು ಉಪಸ್ಥಿತರಿದ್ದರು.




