September 6, 2026
Mumbai News Kannada
ಮುಂಬಯಿ

ಮುಂಬಯಿ : ರಸಿಕರಿಗೆ ರಸದೌತಣ ನೀಡಿದ ದಿ.ಲಕ್ಷ್ಮೀ ಸುಧೀಂದ್ರ ಸ್ಮಾರಕ ಸಂಗೀತ ಕಛೇರಿ





ಕರ್ನಾಟಕ ಸಂಘದ ಕಲಾಭಾರತಿ ವಿಭಾಗ ಮತ್ತು ಭವಾನಿ ಮಿರ್ಮಿರಾ ಪರಿವಾರದ ಸಂಯುಕ್ತ ಆಶ್ರಯದಲ್ಲಿ 19/2/2026 ರಂದು ಬೆಳಗ್ಗೆ ಗಂಟೆ 9.30 ಕ್ಕೆ ಮಾಟುಂಗಾದ ಮೈಸೂರು ಅಸೋಸಿಯೇಷನ್‌ನಲ್ಲಿ ಸೌ. ಲಕ್ಷ್ಮೀ ಸುಧೀಂದ್ರರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮವು ಸಂಗೀತ ಪ್ರೇಮಿಗಳ ಮನ ಸೂರೆಗೊಂಡಿತು. ಲಕ್ಷ್ಮೀ ಸುಧೀಂದ್ರರ ಪತಿ ಡಾ. ಎಸ್‌.ಕೆ ಭವಾನಿಯವರ ಮೇಲ್ವಿಚಾರಣೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಸುರಮಣಿ ವಿದೂಷಿ ಶೀಲಾ ಜೋಷಿ ಮತ್ತು ಡಾ.ಪಂಡಿತ್‌ ಅರುಣ್‌ ದ್ರಾವಿಡ್‌ರ ಶಿಷ್ಯೆ ವಿದೂಷಿ ಜೂಯಿ ಧೈಗುಡೆ-ಪಾಂಡೆ ಹಾಗೂ ಪದ್ಮಶ್ರೀ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಮತ್ತು ಡಾ.ಅರವಿಂದ ಥತ್ತೆ ಹಾಗೂ ಡಾ.ಮಿಲಿಂದ್‌ ಮಾಲ್ಶೆಯವರ ಶಿಷ್ಯೆ
ವಿದೂಷಿ ಸಾನಿಯಾ ಪಾಟನ್‌ಕರ್‌ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ತಬಲಾದಲ್ಲಿ ಮಂದಾರ್‌ ಪುರಾಣಿಕ್‌ ಮತ್ತು ಹಾರ್ಮೋನಿಯಂನಲ್ಲಿ ಅನಂತ ಜೋಶಿ ಸಹಕರಿಸಿದರು. ಆಶಾ ಭವಾನಿಯವರು ಕಲಾಕಾರರನ್ನು ಪುಷ್ಟಗುಚ್ಛ ನೀಡಿ ಗೌರವಿಸಿದರು,


ಕಾರ್ಯಕ್ರಮಕ್ಕೆ ಮೊದಲು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಡಾ.ಎಸ್‌.ಕೆ ಭವಾನಿಯವರು ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿಹೊಂದಿದ್ದ ತಮ್ಮ ಧರ್ಮಪತ್ನಿ ಲಕ್ಷ್ಮೀಯವರ ನೆನಪಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮವನ್ನು ಕಳೆದ 11 ವರ್ಷಗಳಿಂದ ನಿರಂತರವಾಗಿ ನಡೆಸಲಾಗುತ್ತಿದೆ. ಪ್ರತೀ ವರ್ಷವೂ ಹೆಸರಾಂತ ಕಲಾಕಾರರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಮಾತ್ರವಲ್ಲದೆ ಇದಕ್ಕೆ ಸಂಗೀತ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಯೂ ದೊರಕುತ್ತಿದೆ ಎಂದರು.


ಲಕ್ಷ್ಮೀ ಸುಧೀಂದ್ರರು ಸಂಗೀತ ಮಾತ್ರವಲ್ಲದೆ ನಾಟಕ, ನೃತ್ಯ, ಮುಂತಾದ ರಂಗಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದವರು. ಕರ್ನಾಟಕ ಸಂಘದಲ್ಲಿ ಕನ್ನಡ-ಮರಾಠಿ ತರಗತಿಗಳು ಮತ್ತು ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದಲ್ಲಿ ಕನ್ನಡ ತರಗತಿಗಳಲ್ಲಿ ಶಿಕ್ಷಕಿಯಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದು ಸಾವಿರಾರು ಅನ್ಯ ಭಾಷಿಕ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಮರಾಠಿ ಭಾಷೆಯ ಕಂಪನ್ನು ಹರಡಿಸಿದ್ದಾರೆ. ರಂಗಭೂಮಿಯ ಬಗ್ಗೆ ತುಂಬಾ ಆಸಕ್ತಿಹೊಂದಿದ್ದ ಅವರು ಕರ್ನಾಟಕ ಸಂಘದ ವತಿಯಿಂದ ನಡೆಸಲಾಗುತ್ತಿದ್ದ ರಾಷ್ಟ್ರಮಟ್ಟದ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಒಟ್ಟು ಏಳು ನಾಟಕಗಳನ್ನು ನಿರ್ದೇಶಿಸಿ ಸಾದರಪಡಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಲಕ್ಷ್ಮೀಯವರು ಸಲ್ಲಿಸಿರುವ ಸೇವೆಯನ್ನು ಗಮನಿಸಿ ಅವರಿಗೆ ಕರ್ನಾಟಕ ಸಂಘವು ಕೊಡ ಮಾಡುವ ವರದರಾಜ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ.


ಸಂಗೀತ ಕಾರ್ಯಕ್ರಮದಲ್ಲಿ ನಗರದ ಸಂಗೀತ ಪ್ರೇಮಿಗಳಲ್ಲದೆ ಕರ್ನಾಟಕ ಸಂಘ ಮಾಟುಂಗಾ, ಮುಂಬಯಿ ಕನ್ನಡ ಸಂಘ, ಡಾ. ಎಸ್‌.ಕೆ,ಭವಾನಿಯವರ ಹಳೇ ವಿದ್ಯಾರ್ಥಿಗಳು, ಸೊಮಯಾ ಫ್ರೆಂಡ್ಸ್‌ ಫಾರ್‌ ಎವರ್‌ ಗ್ರೂಪ್‌ನ ಸದಸ್ಯರು ಮುಂತಾದವರು ಭಾಗವಹಿಸಿದ್ದರು. ಡಾ. ಭವಾನಿಯವರು ವಂದನಾರ್ಪಣೆಗೈದರು. ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸೋಮನಾಥ ಎಸ್‌. ಕರ್ಕೇರ, ಪೋನ್‌: 9819321186



Related posts

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk

ಮೊಗವೀರ ಬ್ಯಾಂಕ್ ಕೇಂದ್ರ ಕಚೇರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳ ಭೇಟಿ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ- ಮುಂಬಯಿ: ಸಂಘದ ಗೌ.ಅಧ್ಯಕ್ಷ ಸುರೇಶ್ ಎಸ್ ಪೂಜಾರಿ ಪಡುಕೋಣೆಯವರಿಗೆ ನುಡಿ ನಮನ

Mumbai News Desk

ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಆದಿವಾಸಿ ಶಾಲೆಗೆ ಭೇಟಿ, ಪುಸ್ತಕ, ಇತರ ಸಾಮಗ್ರಿ ವಿತರಣೆ

Mumbai News Desk