
ಕಳೆದ 12 ವರ್ಷಗಳಿಂದ ಪವೈಯ ಎಸ್.ಎಮ್.ಶೆಟ್ಟಿ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದು ಅದೇ ಸಮಯದಲ್ಲಿ ಮುಂಬಯ ಕನ್ನಡ ಸಂಘವು ಕನ್ನಡೇತರಿಗಾಗಿ ನಡೆಸುತ್ತಿದ್ದ ಕನ್ನಡ ತರಗತಿಗಳಲ್ಲಿಯೂ 8 ವರ್ಷ ಶಿಕ್ಷಿಕಿಯಾಗಿ ಸೇವೆ ಸಲ್ಲಿಸಿ ಇದೀಗ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲೆಯಾಗಿ ನಿಯುಕ್ತಿಗೊಂಡ ಸುಲುವಾಗಿ ಅರ್ಚನಾ ಪೂಜಾರಿಯವರನ್ನು ದಿನಾಂಕ 18/1/2025 ರಂದು ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ಸನ್ನಾನಿಸಲಾಯ್ತು. ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ವಿ.ಪೈಯವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಅರ್ಚನಾ ಪೂಜಾರಿಯವರನ್ನು ಗೌರವಿಸಿದರು.

ಆರಂಭದಲ್ಲಿ ಸಂಘದ ಅಧ್ಯಕ್ಷರಾದ ಗುರುರಾಜ ಎಸ್.ನಾಯಕ್ ಸ್ವಾಗತಿಸಿ 8 ವರ್ಷಗಳಿಂದ ಅರ್ಚನಾ ಪೂಜಾರಿಯವರು ಸಂಘದ ಕನ್ನಡ ತರಗತಿಗಳಲ್ಲಿ ಶಿಕ್ಷಕಿಯಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದು ಸಂಘಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರರು, ಶಿಕ್ಷಕಿಯಾಗಿ, ರಂಗ ಹಾಗೂ ಟೆಲಿವಿಷನ್ ಸೀರಿಯಲ್ ನಟಿಯಾಗಿ , ಲೇಖಕಿಯಾಗಿ, ವಾಗ್ಮಿಯಾಗಿ ಬಹುಮುಖ ಪ್ರತಿಭಾ ಸಂಪನ್ನೆಯಾಗಿರುವ ಅರ್ಚನಾ ಪೂಜಾರಿಯವರ ಕಿರು ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ರಜನಿ ವಿ. ಪೈಯವರು ಮಾತನಾಡುತ್ತಾ, ಮುಂಬಯಿ ಕನ್ನಡ ಸಂಘದ ಹಿಂದೆ ಯಾವುದೋ ಒಂದು ಮಹಾನ್ ಶಕ್ತಿ ಇದೆ ಹಾಗಾಗಿ ಇಲ್ಲಿ ಸೇವೆಸಲ್ಲಿಸುವವರು ಜೀವನದಲ್ಲಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ ಅದಕ್ಕೆ ನಾನೇ ಒಂದು ಉತ್ತಮ ಉದಾಹರಣೆ ಎಂದು ತನಗೂ ಹಾಗೂ ಮುಂಬಯಿ ಕನ್ನಡ ಸಂಘಕ್ಕೂ ಇರುವ ನಂಟಿನ ಬಗ್ಗೆ ವಿವರಿಸಿರು.
ಸನ್ಮಾನಕ್ಕೆ ಉತ್ತರಿಸುತ್ತಾ ಅರ್ಚನಾ ಪೂಜಾರಿಯವರು, “ ಶಿಕ್ಷಣ ಕ್ಷೇತ್ರವು ನನ್ನ ಅಚ್ಚುಮೆಚ್ಚಿನದ್ದಾಗಿದೆ . ಇಲ್ಲಿ ಸೇವೆ ಸಲ್ಲಿಸುವುದು ನನಗೆ ತುಂಬಾ ಸಮಾಧಾನ ನೀಡುತ್ತಿದೆ. ನಾನಿಂದು ಉಪ ಪ್ರಾಂಶುಪಾಲೆಯ ಸ್ಥಾನಕ್ಕೆ ಏರಿರುವುದಕ್ಕೆ ಗುರುಗಳಾಗಿದ್ದ ಡಾ. ಸಂಜೀವ ಶೆಟ್ಟಿ ಮತ್ತು ಡಾ.ಎಸ್.ಕೆ,ಭವಾನಿಯವರ ಆಶೀರ್ವಾದ ಮತ್ತು ಪ್ರೋತ್ಸಾಹವೇ ಮುಖ್ಯ ಕಾರಣ. ಅವರು ಹಾಕಿಕೊಟ್ಟಿರುವ ದಾರಿಯಲ್ಲೇ ನಾನಿಂದು ಸಾಗುತ್ತಿದ್ದೇನೆ. ಜೀವನದಲ್ಲಿ ಪ್ರಾಮಾಣಿಕವಾಗಿ ಕಠಿಣ ಪರಿಶ್ರಮ ಮಾಡಿದವರಿಗೆ ಇಂದಲ್ಲ ನಾಳೆ ಉತ್ತಮ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇದು ನನ್ನ ಅನುಭವದ ಮಾತು. ಮುಂಬಯಿ ಕನ್ನಡ ಸಂಘದ ವತಿಯಿಂದ ನನಗೆ ಏರ್ಪಡಿಸಲಾದ ಸನ್ಮಾನದಿಂದ ನಾನು ಪುಳಕಿತಗೊಂಡಿದ್ದೇನೆ. ಸಂಘದ ಸದಸ್ಯರ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದರು.
ಕೊನೆಗೆ ವಂದನಾಪ್ರಣೆಗೈಯಲಾಗಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಸೋಮನಾಥ ಎಸ್.ಕರ್ಕೇರ, 9819321186