
ಒಳ್ಳೆಯ ಶಿಕ್ಷಣದಿಂದ ವ್ಯಕ್ತಿ* *ಸುಸಂಸ್ಕೃತನಾಗಲು ಸಾಧ್ಯ –ಶ್ರೀನಿವಾಸ ಸಾಪಲ್ಯ.
ಮುಂಬಯಿ ಅ 24, ಉತ್ತಮ ಶಿಕ್ಷಣ ದೊರೆತಾಗ ವ್ಯಕ್ತಿಯು ಸುಸಂಸ್ಕೃತನಾಗಿ ರೂಪುಗೊಂಡು ಸಮಾಜದ ಬೆಳವಣಿಗೆಗೆ ಕಾರಣೀಭೂತನಾಗುತ್ತಾನೆ. ನಮ್ಮ ಸಪಳಿಗ ಸಮಾಜದ ಏಳಿಗೆಗಾಗಿ ಸಂಘದ ಕಾರ್ಯಕಾರಿ ಸಮಿತಿಯು ಕೆಲವು ಯೋಜನೆಗಳನ್ನು ಹಮ್ಮಿಕೊಂಡು ಅದರ ಮುಖೇನ ಸಮಾಜ ಸದೃಢವಾಗಲು ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಂಘದ ಉದ್ದೇಶವನ್ನು ಜನರಿಗೆ ಮುಟ್ಟಿಸುವಲ್ಲಿ ಸಫಲತೆಯನ್ನು ಪಡೆದಿದೆ.
ಸಾಫಲ್ಯ ಭಾಗ್ಯ ಯೋಜನೆಯ ಮುಖಾಂತರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಹೊಲಿಗೆ ತರಬೇತಿಯನ್ನು ನೀಡಿದೆ. ಸಾಫಲ್ಯ ಸಂಜೀವಿನಿ ಯೋಜನೆಯ ಮೂಲಕ ಅನಾರೋಗ್ಯದಿಂದ ಬಳಲುವ ಹಿರಿಯರಿಗೆ ಉಚಿತ ಮೆಡಿಕಲ್ ಟೂಲ್ಸ್, ವೀಲ್ ಚೇಯರ್ಸ್ ಒದಗಿಸಿದೆ. ನಾದಸ್ವರ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಪೂರ್ಣ ವರ್ಷದ ಶಿಕ್ಷಣ ಶುಲ್ಕ ( Fees for the entire year) ಸಾಫಲ್ಯ ಶಿಕ್ಷಣ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಗಣಕಯಂತ್ರ ತರಬೇತಿ ವೆಚ್ಚ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ. ಸಾಫಲ್ಯ ಜ್ಯೋತಿ ಯೋಜನೆಯ ಮೂಲಕ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಮತ್ತು ವೃದ್ಧಾಶ್ರಮದಲ್ಲಿರುವವರಿಗೆ ಹಳೆಯ ಬಟ್ಟೆ ಪೂರೈಕೆ, ವೈದ್ಯಕೀಯ ಸವಲತ್ತುಗಳ ಪೂರೈಕೆ, ಅಡುಗೆ ಸಾಮಾಗ್ರಿ ಪೂರೈಕೆ ಹಾಗೂ ಆರ್ಥಿಕ ಸಹಾಯವನ್ನು ಒದಗಿಸುತ್ತಾ ಬಂದಿದೆ. ಸಾಫಲ್ಯ ಪ್ರಾಣಿ ಸಂಕುಲ** ಯೋಜನೆಯ ಮೂಲಕ ಪ್ರಾಣಿ ಸಂಗ್ರಹಾಲಯಕ್ಕೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದೆ.
ಮಹಾರಾಷ್ಟ್ರದಲ್ಲಿಯ ಗ್ರಾಮೀಣ ವಿಭಾಗದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯವನ್ನು ನಡೆಸುತ್ತಾ ಬಂದಿದೆ. ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಬಡಬಗ್ಗರ ಸಂಕಷ್ಟಗಳಿಗೆ ನಮ್ಮ ಸಾಫಲ್ಯ ಸೇವಾ ಸಂಘವು ಬಹಳ ಶಿಸ್ತಿನಿಂದ ಸದಾ ಸ್ಪಂದಿಸುತ್ತಾ ಬಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.
ಸಂಘದ ಮೆಡಿಕಲ್ ಕಾರ್ಪಸ್ ಹೆಚ್ಚಿಸುವಲ್ಲಿ ಮತ್ತು ಪ್ರತಿ ವರ್ಷ ಸಂಘದ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಈ ಕಾರ್ಯಕಾರಿ ಸಮಿತಿಯು ಪಡುವ ಶ್ರಮ ಮೆಚ್ಚುವಂತದ್ದು. ಮಹಿಳಾ ವಿಭಾಗ ಮತ್ತು ಯುವ ವಿಭಾಗವು ಪ್ರತಿ ವರ್ಷ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಜನರನ್ನು ಒಟ್ಟುಗೂಡಿಸುವಲ್ಲಿ ಮತ್ತು ಅವರ ನಡುವಿನ ಸಂಪರ್ಕವನ್ನು ಸುಗಮವಾಗಿಸುವಲ್ಲಿ
ನಿರಂತರ ಪ್ರಯತ್ನಶೀಲರಾಗಿದ್ದಾರೆ ‘ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಸಾಪಲ್ಯರು ನುಡಿದರು.
ಅವರು ತಾ.18/08/2024 ರಂದು ಪೇಜಾವರ ಮಠ, ಸಾಂತಾಕ್ರೂಜ್ ಇಲ್ಲಿ ನಡೆದ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಅವರು ಮುಂದುವರಿಯುತ್ತಾ ಸಂಘದ ಮುಂಬರುವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರಲ್ಲದೆ
ಸಭಿಕರ ಸವಾಲುಗಳಿಗೆ ಸಮರ್ಪಕವಾದ ಉತ್ತರ ಗಳನ್ನು ನೀಡುತ್ತಾ , ಸಂಘದ ಏಳಿಗೆಗಾಗಿ ದಾನಿಗಳ ಸಹಾಯ ಮತ್ತು ಸದಸ್ಯರ ಸಂಘದ ಮೇಲಿನ ಅಭಿಮಾನ ಸಂಘದ ಉನ್ನತಿಗೆ ಕಾರಣೀಭೂತ ವಾಗಬಹುದು ಎನ್ನುವ ಸಂದೇಶವನ್ನು ನೀಡಿದರು.

ಪ್ರಾರಂಭದಲ್ಲಿ ಗೌ.ಪ್ರ.ಕಾರ್ಯದರ್ಶಿ ಶ್ರೀ ಭಾಸ್ಕರ್ ಟಿ ಸಪಳಿಗ ಅವರು ಸಭಿಕರನ್ನು ಸ್ವಾಗತಿಸಿದರು ಹಾಗೂ ಶ್ರೀಮತಿ ಲಕ್ಷ್ಮಿ ಮೆಂಡನ್, ಉಷಾ ಸಪಳಿಗ ಮತ್ತು ಅನುಸೂಯ ಸೋಮೇಶ್ವರ ಇವರುಗಳು ಪ್ರಾರ್ಥನೆಗೈದರು.
ಬಳಿಕ ಕಾರ್ಯದರ್ಶಿಯವರು ಕಳೆದ ವರ್ಷದ ವಾರ್ಷಿಕ ಮಹಾಸಭೆಯ ವರದಿಯನ್ನು ಮಂಡಿಸಿದರು ಮತ್ತು ಅದು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು.
ಕೋಶಾಧಿಕಾರಿ ಶ್ರೀ ಹೇಮಂತ್ ಸಪಳಿಗ ಅವರು ಕಳೆದ ವರ್ಷದ ಆಯವ್ಯಯ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು ಮತ್ತು ಅದು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಸಾಫಲ್ಯರ ಹಸ್ತದಿಂದ ಆದಾಯ ತೆರಿಗೆ 80 G ವಿನಾಯಿತಿ ಪ್ರಮಾಣ ಪತ್ರ ಮತ್ತು CSR ನೋಂದಾವಣೆ ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಆರ್ಯಾಷ್ ಫೈನಾನ್ಸಿಯಲ್ ಸರ್ವಿಸಸ್ ನ ಶ್ರೀ ಮಹೇಶ ಬಂಗೇರ ಅವರು ‘ ಹಣಕಾಸು ಹೂಡಿಕೆ ಮತ್ತು ಗಳಿಕೆ ‘ ಯ ಬಗ್ಗೆ ಉಪನ್ಯಾಸ ನೀಡಿದರು.
ಬಳಿಕ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ, ಗಣಕಯಂತ್ರದ ತರಬೇತಿ ಶುಲ್ಕ, ಗರಿಷ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ, ನಾದಸ್ವರ ಯೋಜನೆಯ ವತಿಯಿಂದ ಹಲವು ಮಕ್ಕಳಿಗೆ ವಾರ್ಷಿಕ ಶಿಕ್ಷಣ ಶುಲ್ಕ, ದಿವಂಗತ ಶ್ರೀ ಕೆ.ಟಿ ಕುಂದರ್ ಸ್ಮರಣಾರ್ಥ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಶುಲ್ಕ ಇತ್ಯಾದಿ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಅಂದು ನಡೆದ ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ಮತ್ತು ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ತೀರ್ಪುಗಾರರಾಗಿ ಶ್ರೀಮತಿ ರೇಷ್ಮಾ ಆಚಾರ್ಯ, ರವಿ ಕರ್ಕೇರ ಹಾಗೂ ಡಾ.ಜಿ.ಪಿ.ಕುಸುಮಾ ಆಗಮಿಸಿದ್ದರು.
ಗೌರವ ಧನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಕು. ಐಶ್ವರ್ಯ, ರತಿಕಾ ಸಾಫಲ್ಯ, ಕು. ಸಮೀಕ್ಷಾ ಬಂಗೇರ ಅವರುಗಳು ನಡೆಸಿಕೊಟ್ಟರು. ಬಹುಮಾನ ವಿತರಣೆಯ ಕಾರ್ಯವನ್ನು ಕು.ಶ್ರೇಯ ಪುತ್ರನ್ ನಡೆಸಿಕೊಟ್ಟರು. ಮಹೇಶ್ ಬಂಗೇರ ಅವರನ್ನು ಶ್ರೀಮತಿ ಕಲಾ ಬಂಗೇರ ಅವರು ಪರಿಚಯಿಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ, ಉಪಾಧ್ಯಕ್ಷ ರಾದ ಕೃಷ್ಣಕುಮಾರ್ ಬಂಗೇರ ,ಕೋಶಾಧಿಕಾರಿ ಹೇಮಂತ್ ಸಪಳಿಗ ಹಾಗೂ ಗೌ.ಪ್ರ.ಕಾರ್ಯದರ್ಶಿ ಭಾಸ್ಕರ ಟಿ.ಸಪಳಿಗ ಅವರುಗಳು ಉಪಸ್ಥಿತರಿದ್ದರು.
ಉಷಾ ಸಪಳಿಗ ಅವರು ಕಾರ್ಯಕ್ರಮ ನಿರೂಪಿಸಿದರೆ ಗೌ. ಪ್ರ. ಕಾರ್ಯದರ್ಶಿ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯಗೊಂಡಿತು.
ತದನಂತರ ಭಜನಾ ಕಾರ್ಯಕ್ರಮ, ಸತ್ಯನಾರಾಯಣ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾದ ಬಳಿಕ ಅನ್ನಸಂತರ್ಪಣೆ ನಡೆಯಿತು.