ಕೊಳತ್ತಮಜಲು ನಿವಾಸಿ ಅಬ್ದುಲ್ ರಹೀಂ ಹತ್ಯೆ ಬಳಿಕ ದ. ಕ.ಜಿಲ್ಲೆಯಲ್ಲಿ ಹಿಂದೂ ನಾಯಕರನ್ನು ಗುರಿಯಾಗಿಸಿ ಧ್ವನಿ ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದ್ದು, ಪರಿಣಾಮ
ಹಿಂದೂ ಕಾರ್ಯಕರ್ತರ ಮನೆಯಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಬೆಂಗಳೂರಿನ ಪೊಲೀಸ್ ಪ್ರಧಾನ ಕಛೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಎಮ್ .ಎ. ಸಲೀಮ್ ಅವರನ್ನು ಭೇಟಿಯಾದ ಸಮಸ್ತ
ಹಿಂದೂ ಸಂಘಟನೆಗಳ ಒಕ್ಕೂಟದ ನಿಯೋಗ ಮನವಿ ನೀಡಿತು.
ಪೊಲೀಸರು ಕಾನೂನು, ನಿಯಮಗಳನ್ನು ಮೀರಿ, ರಾತ್ರೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ತೆರಳಿ, ಕಾರ್ಯಕರ್ತರ ಪೋಟೋ ತೆಗೆಯುವುದು, ಮನೆಗೆ ಜಿಪಿಎಸ್ ಅಳವಡಿಸುವುದು. ನೋಟೀಸ್ ನೀಡದೆ ಠಾಣೆಗೆ ಕರೆಯುವಂತಹ ಕಾನೂನು ಬಾಹಿರ ಕೃತ್ಯಗಳನ್ನು ಮಾಡುತ್ತಿರುವುದರಿಂದ ಹಿಂದೂ ಕಾರ್ಯಕರ್ತರ ಮನೆಯಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಕಳೆದ ರಾತ್ರಿ 15 ಹಿಂದೂ ನಾಯಕರು, ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿವೆ. ಹಲವು ನಾಯಕರಿಗೆ ಗಡಿಪಾರು ನೋಟೀಸ್ ನೀಡಲಾಗಿದೆ. ಆದರೆ ದ್ವೇಷ ಭಾಷಣವನ್ನು ಮಾಡುವ ಎಸ್ಡಿಪಿಐ ಮುಖಂಡರ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ.
ಕೋಮು ಹಿಂಸಾಚಾರ ತಡೆ ದಳವನ್ನು ಕೇವಲ ಹಿಂದೂ ಸಂಘಟನೆಗಳ ವಿರುದ್ಧ ಮಾತ್ರ ಪ್ರಯೋಗಿಸಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡುವ ಅನ್ಯ ಸಮುದಾಯದ ಮುಖಂಡರ ವಿರುದ್ಧ ದೂರು ನೀಡಿದರೂ, ಕೇಸು ನೊಂದಣಿಯಾಗುವುದಿಲ್ಲ, ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಅವರ ಮೇಲೆ ಪ್ರಕರಣವನ್ನು ದಾಖಲಿಸಿ, ಹಿಂದೂಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತದೆ. ಈ ಎಲ್ಲ ಘಟನೆಗಳಲ್ಲಿ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ ನಡೆಸುತ್ತಿದೆ. ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣದಲ್ಲಿ ನಿಷೇಧಿತ ಪಿಎಫ್ಐನ ಅನೇಕ ಸದಸ್ಯರು ಭಾಗಿಯಾಗಿರುವ ಶಂಕೆಯಿದೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದೇ ಮುಸ್ಲಿಂ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಒತ್ತಡದಿಂದ ಹಿಂದೂ ನಾಯಕರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೇ 28 ರಂದು ಬಂಟ್ವಾಳದಲ್ಲಿ ನಡೆದ ಅಬ್ದುಲ್ ರೆಹಮಾನ್ ಅಂತಿಮ ಯಾತ್ರೆ ವೇಳೆ, ದುಷ್ಕರ್ಮಿಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಹಾಗೂ ಅಂಗಡಿಗಳಿಗೆ ಕಲ್ಲು ತೂರಾಟ ನಡೆದಿದ್ದರೂ ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಲಿಲ್ಲ. ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿ ಕೇವಲ ಏಕಮುಖವಾಗಿ ಹಿಂದೂ ನಾಯಕರ ವಿರುದ್ದ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ದ.ಕ.ಜಿಲ್ಲೆಯ ಅನೇಕ ಹಿಂದೂ ನಾಯಕರಿಗೆ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ವಾಟ್ಸ್ ಆಪ್ ಆಡಿಯೋ ಮೂಲಕ ಬೆದರಿಕೆಕರೆಗಳು ಬರುತ್ತಿದೆ. ಇಂತಹ ಬೆದರಿಕೆಗಳು ಹತ್ಯೆಗೆ ಮುನ್ನ ಸುಹಾಸ್ ಶೆಟ್ಟಿಯವರಿಗೂ ಬಂದಿದ್ದು, ನಂತರ ಅವರ ಹತ್ಯೆಯಾಗಿತ್ತು. ಇದು ಅತ್ಯಂತ ಗಂಭೀರ ವಿಷಯವಾಗಿದೆ, ಪಿಎಫ್ಐ ಸದಸ್ಯರು ಈಗಲೂ ಸಕ್ರಿಯವಾಗಿದ್ದು, ಎಸ್ಡಿಪಿಐ ಮೂಲಕ ಕಾರ್ಯ ಮಾಡುತ್ತಿದ್ದಾರೆ. ಸರಕಾರವು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಕೀಲರಾದ ಅಮೃತೇಶ ಎನ್ ಪಿ, ಪುನೀತ ಕೆರೆಹಳ್ಳಿ, ಸಂತೋಷ ಕೆಂಚಾಂಬ, ಭಜರಂಗದಳದ ಪ್ರಾಂತ ಸಹ ಸಂಯೋಜಕರಾದ ಗೋವರ್ಧನ್ ಸಿಂಗ್, ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಿ, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಾಜಣ್ಣ, ಸೇರಿದಂತೆ ಹಿಂದೂ ಕಾರ್ಯಕರ್ತರು ಮತ್ತು ಪ್ರಮುಖರು ಉಪಸ್ಥಿತರಿದ್ದರು