
ಡೊಂಬಿವಲಿ: “ಒಂದು ಜಾತಿ, ಒಂದು ಮತ, ಒಬ್ಬನೇ ದೇವರು” ಎಂಬ ತತ್ವವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ – ಡೊಂಬಿವಲಿ ಸ್ಥಳೀಯ ಕಚೇರಿ ವತಿಯಿಂದ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್ 7ರ ಭಾನುವಾರದಂದು ನಡೆಯಲಿರುವ ಈ ಪವಿತ್ರ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ವಿನಂತಿಸಿಕೊಂಡಿದ್ದಾರೆ.
ಬೆಳಿಗ್ಗೆ 9.00 ಗಂಟೆಯಿಂದಲೇ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಇಡೀ ದಿನ ಡೊಂಬಿವಲಿ ಪ್ರದೇಶದ ವಿವಿಧ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ಹಾಗೂ ಭಕ್ತಿಗೀತೆಗಳ ಮೇಳ ಜರುಗಲಿದೆ. ಸಂಜೆ 7.00ಕ್ಕೆ ಮಹಾಮಂಗಳಾರತಿ ನೆರವೇರಿಸಿ, ಪವಿತ್ರ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಾದ ಶ್ರೀಮತಿ ಹಾಗೂ ಶ್ರೀ ಸಿ. ಕೆ. ಪೂಜಾರಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಗುವುದು. ಬಳಿಕ ರಾತ್ರಿ 7.30ರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.
ಈ ಸುಂದರ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಬಿಲ್ಲವರ್ ಅಸೋಸಿಯೇಶನ್ ಮುಂಬಯಿಯ ಗೌರವ ಅಧ್ಯಕ್ಷ ಎಲ್.ವಿ. ಅಮೀನ್, ಅಧ್ಯಕ್ಷ ಹರೀಶ್ ಜಿ. ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯನ್, ಗೌರವ ಖಜಾಂಚಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟಿಯನ್, ಧಾರ್ಮಿಕ ಉಪಸಮಿತಿ ಕಾರ್ಯಾಧ್ಯಕ್ಷ ಧರ್ಮಪಾಲ ಜಿ. ಆಂಚನ್, ಕಾರ್ಯದರ್ಶಿ ಸದಾಶಿವ ಯ. ಕೋಟಿಯನ್, ಕೇಂದ್ರ ಕಚೇರಿ ಇಂಚರ್ಜ್ ಪುರುಷೋತ್ತಮ ಕೋಟ್ಯಾನ್, ಕೇಂದ್ರ ಕಚೇರಿಯ ಪ್ರತಿನಿಧಿ ನವೀನ್ ಎಲ್. ಬಂಗೇರ ಸೇರಿದಂತೆ ಕೇಂದ್ರ ಸಮಿತಿಯ ಎಲ್ಲ ಪ್ರತಿನಿಧಿಗಳು.
ಅದೇ ರೀತಿ, ಡೊಂಬಿವಲಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಮಂಜಪ್ಪ ಕೆ. ಪೂಜಾರಿ, ಕಾರ್ಯಾಧ್ಯಕ್ಷ ಶ್ರೀಧರ ಬಿ. ಅಮೀನ್, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ ಎಸ್. ಪಾಲನ್ ಮತ್ತು ಸಚಿನ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಜಗದೀಶ್ ಜೆ. ಕೋಟ್ಯಾನ್ ಹಾಗೂ ಗೌರವ ಖಜಾಂಚಿ ಆನಂದ ಡಿ. ಪೂಜಾರಿ, ಸಮಿತಿಯ ಸದಸ್ಯರು, ವಿಶೇಷ ಆಹ್ವಾನಿತರು, ಮಹಿಳಾ ವಿಭಾಗ ಮತ್ತು ಯುವಕರ ವಿಭಾಗದ ಎಲ್ಲ ಸಕ್ರಿಯ ಕಾರ್ಯಕರ್ತರ ಸಹಕಾರದೊಂದಿಗೆ ಈ ಮಹೋತ್ಸವವು ಭವ್ಯವಾಗಿ ನಡೆಯಲಿದ್ದು, ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಸಂಘಟಕರು ಪ್ರೀತಿಯಿಂದ ವಿನಂತಿಸಿಕೊಂಡಿದ್ದಾರೆ.




