ಉಡುಪಿ, ಸೆಪ್ಟೆಂಬರ್ 22: ಉಡುಪಿಯ ದೊಡ್ಡಣ್ಣ ಗುಡ್ಡೆಯಲ್ಲಿರುವ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವತಿಯಿಂದ ಶರನ್ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಮಹೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಿರಂತರ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಮಹೋತ್ಸವದ ಅಂಗವಾಗಿ ಪ್ರತಿದಿನ ಭಕ್ತರ ಸೇವಾರೂಪದಲ್ಲಿ ಜೋಡಿ ಚಂಡಿಕಾಯಾಗ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮ ಅರ್ಚನೆ, ರಂಗಪೂಜೆ, ದೀಪಾರಾಧನೆ, ತುಲಾಭಾರ ಸೇವೆ ಮತ್ತು ವಿದ್ಯಾರಂಭಗಳು ನೆರವೇರಲಿವೆ.
- ಸೆಪ್ಟೆಂಬರ್ 24: ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿ ಸನ್ನಿಧಾನದಲ್ಲಿ ಲಕ್ಷ್ಮಿ ಸಹಸ್ರನಾಮ ಮಹಾಯಾಗ ನಡೆಯಲಿದೆ.
- ಸೆಪ್ಟೆಂಬರ್ 27 (ಲಲಿತಾ ಪಂಚಮಿ): ಶ್ರೀ ಲಲಿತಾ ಸಹಸ್ರ ಕದಳೀ ಯಾಗ ನಡೆಯಲಿದೆ.
- ಅಕ್ಟೋಬರ್ 2 (ವಿಜಯದಶಮಿ): ಸಾಮೂಹಿಕವಾಗಿ ತ್ರಿಶಕ್ತಿ ಮಹಾಯಾಗ, ಸಂಜೆ ಬಲಿ ಉತ್ಸವದ ಜೊತೆಗೆ ಆರಾಧನಾ ರಂಗಪೂಜಾ ಮಹೋತ್ಸವ, ಮಹಾ ಸಂಪ್ರೋಕ್ಷಣೆ ಮತ್ತು ಮಹಾ ಮಂತ್ರಾಕ್ಷತೆ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾನ, ನಾಟ್ಯ ಹಾಗೂ ನಾದಪ್ರಿಯರಾದ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ವಿವಿಧ ಕಲಾವಿದರಿಂದ ನಾಟ್ಯ ಸೇವೆ, ಸಂಗೀತ ಸೇವೆ ಮತ್ತು ನಾದ ಸೇವೆಗಳು ಸಮರ್ಪಿತವಾಗಲಿವೆ. ಈ ಬಗ್ಗೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರು ಮಾಹಿತಿ ನೀಡಿದ್ದಾರೆ.




