
ಮುಂಬೈ: ಕರ್ನಾಟಕ ಮೂಲದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ‘ಮಿಸ್ಟರ್/ ಮಿಸ್/ ಮಿಸೆಸ್ ಕರ್ನಾಟಕ ಸ್ಟೈಲ್ ಐಕಾನ್–2025’ ಸೀಸನ್ 6 ರ ಗ್ರ್ಯಾಂಡ್ ಫಿನಾಲೆಯು ಡಿ. 18 ರಂದು ಮುಂಬೈನಲ್ಲಿ ನಡೆಯಲಿದೆ.
ದಹಿಸರ್ ಚೆಕ್ನಾಕಾ ಸಮೀಪದ ಲತಾ ಮಂಗೇಶ್ಕರ್ ಆಡಿಟೋರಿಯಂನಲ್ಲಿ ಸಂಜೆ 5 ಗಂಟೆಗೆ ಈ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸ್ಟೈಲ್ ಐಕಾನ್ನ ಸ್ಥಾಪಕಿ ಮತ್ತು ನಿರ್ದೇಶಕಿ, ಭಾರತ್ ಬ್ಯಾಂಕ್ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರ ಧರ್ಮಪತ್ನಿ ನಿಶಿತಾ ಸೂರ್ಯಕಾಂತ್ ಸುವರ್ಣ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ವೇದಿಕೆಯು ಕರ್ನಾಟಕ ಮೂಲದ ಪುರುಷರು, ಮಹಿಳೆಯರು ಮತ್ತು ವಿವಾಹಿತ ಮಹಿಳೆಯರಿಗೆ ತಮ್ಮ ವ್ಯಕ್ತಿತ್ವ, ಶೈಲಿ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತಿದೆ.
ಕಳೆದ ಆರು ವರ್ಷಗಳಿಂದ ಮಂಗಳೂರು, ಬೆಂಗಳೂರು, ಮೈಸೂರು ಮತ್ತು ಮುಂಬೈನಲ್ಲಿ ಯಶಸ್ವಿಯಾಗಿ ಈ ಸ್ಪರ್ಧೆಯನ್ನು ನಡೆಸಲಾಗಿದೆ. ಶ್ರೀಮಂತ– ಬಡ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ವೇದಿಕೆ ಒದಗಿಸುವ ಉದ್ದೇಶದಿಂದ ಇದು ರೂಪುಗೊಂಡಿದೆ. ಇದು ಕೇವಲ ಒಂದು ಸ್ಪರ್ಧೆಯಾಗಿರದೆ, ಕರ್ನಾಟಕದ ವಿಶಿಷ್ಟ ಶೈಲಿಯ ಪರಂಪರೆ, ಸಂಸ್ಕೃತಿ ಮತ್ತು ಫ್ಯಾಷನ್ ಉತ್ಸಾಹಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದು ನಿಶಿತಾ ಸೂರ್ಯಕಾಂತ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ನ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಲವ ಮಹಾ ಮಂಡಳದ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಸಿನಿಮಾ ನಟಿ ಮನ್ನಾರಾ ಚೋಪ್ರಾ ಉಪಸ್ಥಿತರಿದ್ದು, ವಿಜೇತರಿಗೆ ಕಿರೀಟ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಮೀರಾ–ಭಾಯಂದರ್ ಶಾಸಕ ನರೇಂದ್ರ ಎಲ್. ಮೆಹ್ತಾ, ಥಾಣೆ ನಗರದ ಮಾಜಿ ಮೇಯರ್ ಶ್ರೀಮತಿ ಮೀನಾಕ್ಷಿ ಶಿಂಧೆ, ಮೀರಾ–ಭಾಯಂದರ್ ಮಾಜಿ ಕಾರ್ಪೊರೇಟರ್ ಅರವಿಂದ ಆನಂದ ಶೆಟ್ಟಿ, ಬ್ರೈಟ್ ಔಟ್ಡೋರ್ ಮೀಡಿಯಾ ಲಿಮಿಟೆಡ್ನ ಸಿಎಂಡಿ ಯೋಗೇಶ್ ಲಖಾನಿ, ಬಂಟರ ಸಂಘ ಮುಂಬೈ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ, ತೆಲ್ಲಾರ್, ಸೇಂಟ್ ಆಗ್ನೆಸ್ ಇಂಗ್ಲಿಷ್ ನೈಟ್ ಶಾಲೆಯ ಸಿಎಂಡಿ ಬಿಳಿಯೂರು ಗುತ್ತು ಡಾ. ಅರುಣೋದಯ ರೈ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜೊತೆಗೆ, ಬಂಟರ ಸಂಘ ಮುಂಬೈ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪ್ಪಾಡಿ, ಕರ್ನಾಟಕ ಮಹಾಮಂಡಲದ ಮಹಿಳಾ ವಿಭಾಗದ ಅಧ್ಯಕ್ಷೆ ಸುಮಂಗಲಾ ಕಣಂಜಾರು, ಶ್ರೀ ನಾರಾಯಣ ಗುರು ಭಜನ ಮಂಡಳಿಯ ಕಾರ್ಯದರ್ಶಿ ಮಾಲತಿ ಆರ್. ಬಂಗೇರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಲಿದ್ದಾರೆ.
ಗಣ್ಯರು, ಉದ್ಯಮಿಗಳು, ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಪ್ರಾಯೋಜಕರು ಹಾಗೂ ಅನೇಕ ಕಲಾಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧಾರ್ಥಿಗಳಿಗೆ ಇದು ಮಹತ್ವದ ಪ್ರೇರಣೆಯ ವೇದಿಕೆಯಾಗಲಿದೆ. ತುಳು– ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ನಿಶಿತಾ ಸೂರ್ಯಕಾಂತ್ ಸುವರ್ಣ ಮತ್ತು ಅವರ ತಂಡ ವಿನಂತಿಸಿದೆ.




