ಮುಂಬೈ: ಮಹಾನಗರದ ಪ್ರತಿಷ್ಠಿತ ಭಜನಾ ತಂಡಗಳಲ್ಲಿ ಒಂದಾದ ಜರಿಮರಿಯ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿಯ ಭುವಾಜಿ ರವೀಂದ್ರ ಶಾಂತಿ ಅವರ ನೇತೃತ್ವದ 25 ಸದಸ್ಯರ ತಂಡವು ಸತತ 11ನೇ ವರ್ಷದ ತಿರುಪತಿ ಯಾತ್ರೆಗೆ ಸಜ್ಜಾಗಿದೆ. ಜನವರಿ 17, 18 ಮತ್ತು 19ರಂದು ತಿರುಪತಿ-ತಿರುಮಲದಲ್ಲಿ ನಡೆಯಲಿರುವ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಭಜನ ಸೇವೆಯನ್ನು ಸಮರ್ಪಿಸಲಿದೆ.
ಏಳು ದಶಕಗಳ ಭಕ್ತಿ ಪಯಣ
ಕಳೆದ 70 ವರ್ಷಗಳಿಂದ ಮುಂಬೈನಲ್ಲಿ ಹರಿನಾಮ ಸಂಕೀರ್ತನೆಯ ದೀಪವನ್ನು ಪ್ರಜ್ವಲಿಸುತ್ತಿರುವ ಈ ಮಂಡಳಿಯು, ದಾಸ ಸಾಹಿತ್ಯ ಪ್ರಾಜೆಕ್ಟ್ ಅಡಿಯಲ್ಲಿ ನೋಂದಣಿಯಾದ ಮಹಾನಗರದ ಪ್ರಥಮ ಭಜನಾ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಲಿಯುಗದಲ್ಲಿ ನಾಮಸ್ಮರಣೆಯೇ ಮೋಕ್ಷಕ್ಕೆ ಸುಲಭ ದಾರಿ ಎಂಬ ಜ್ಞಾನಿಗಳ ವಾಣಿಯಂತೆ, ಈ ತಂಡವು ತಿರುಪತಿ ಮಾತ್ರವಲ್ಲದೆ ಮಂತ್ರಾಲಯ ಹಾಗೂ ಕೇರಳದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಗಳಲ್ಲಿಯೂ ಭಜನ ಸೇವೆ ಸಲ್ಲಿಸಿ ಶ್ಲಾಘನೆಗೆ ಒಳಗಾಗಿದೆ.
ಸಾಂಸ್ಕೃತಿಕ ಮತ್ತು ಸಾಮಾಜಿಕ ಕೊಡುಗೆ
ಭುವಾಜಿ ರವೀಂದ್ರ ಶಾಂತಿ ಅವರ ಸಂಘಟನಾ ಚಾತುರ್ಯದಿಂದಾಗಿ ಮುಂಬೈನಲ್ಲಿ ಧರ್ಮಸ್ಥಳ ಭಜನಾ ಪರಿಷತ್ತಿನ ಘಟಕ ಸ್ಥಾಪನೆಯಾಗಿದ್ದು, ಮಂಡಳಿಯ ಸದಸ್ಯರು ಧರ್ಮಸ್ಥಳದ ಭಜನಾ ಕಮ್ಮಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕಲಾವಿದರ ಪರಿಷತ್ತು ಆಯೋಜಿಸಿದ್ದ ಕುಣಿತ ಭಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದಿರುವ ಈ ತಂಡವು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಮತ್ತು ಕೇರಳದಾದ್ಯಂತ ತನ್ನ ಭಜನಾ ಕಂಪನ್ನು ಹರಡಿದೆ.
ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಅಶಕ್ತರಿಗೆ ಶೈಕ್ಷಣಿಕ ಮತ್ತು ವೈದ್ಯಕೀಯ ನೆರವು ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನೂ ಮಂಡಳಿ ಮೆರೆದಿದೆ.
ಹೊಸ ಪೀಳಿಗೆಗೆ ಸಂಸ್ಕಾರದ ಪಾಠ
ಮಂಡಳಿಯಲ್ಲಿ ಪ್ರಸ್ತುತ 20 ಪುರುಷರು, 15 ಮಹಿಳೆಯರು ಹಾಗೂ 12 ಮಕ್ಕಳು ಸೇರಿದಂತೆ ಒಟ್ಟು 40ಕ್ಕೂ ಅಧಿಕ ಸದಸ್ಯರಿದ್ದಾರೆ. ವಿಶೇಷವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಇಂದಿನ ಮಕ್ಕಳಿಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಭಜನೆ ಹಾಗೂ ಕುಣಿತ ಭಜನೆಯ ತರಬೇತಿ ನೀಡುವ ಮೂಲಕ ಹೊಸ ಪೀಳಿಗೆಯನ್ನು ಭಕ್ತಿ ಮಾರ್ಗಕ್ಕೆ ಸೆಳೆಯುತ್ತಿರುವುದು ರವೀಂದ್ರ ಶಾಂತಿ ಅವರ ತಂಡದ ವಿಶೇಷ ಸಾಧನೆಯಾಗಿದೆ. ಪ್ರಸ್ತುತ ಮನೆ ಮನೆಗಳಲ್ಲಿ ಸುಖ-ಶಾಂತಿ ನೆಲೆಸಲೆಂಬ ಉದ್ದೇಶದಿಂದ ‘ಮನೆ ಮನೆಯಲ್ಲಿ ಭಜನೆ’ ಎಂಬ ಉಚಿತ ಕಾರ್ಯಕ್ರಮವನ್ನೂ ತಂಡ ಹಮ್ಮಿಕೊಳ್ಳುತ್ತಿದೆ.
ತಿರುಮಲದಲ್ಲಿ ಜ. 17ರಿಂದ 19ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಬಳಿಕ ಮಾಸಾಂತ್ಯದ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಈ ತಂಡಕ್ಕೆ ಮಂದಿರದ ಮೊಕ್ತೇಸರರಾದ ಶ್ರೀಮತಿ ಲಲಿತ ಬಿ. ಕೆ. ಶೀನ, ಪ್ರಧಾನ ಅರ್ಚಕ ಎಸ್. ಎನ್. ಉಡುಪ ಹಾಗೂ ಹಿರಿಯರಾದ ಬಿ. ಎನ್. ಶೆಟ್ಟಿ ಅವರು ಯಶಸ್ಸು ಕೋರಿ ಶುಭ ಹಾರೈಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

