
ಚಿತ್ರ,ವರದಿ: ಉಮೇಶ್ ಕೆ ಅಂಚನ್
ಮುಂಬಯಿ, ಜ.17: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ಇದರ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ತುಳು ಸಮ್ಮೇಳನದ ಪೂರ್ವಭಾವಿ ಸಭೆಯು ಜ. 11ರಂದು ಮೀರಾ ರೋಡ್ ಪೂರ್ವದ ಎಮ್ ಟಿ ಎನ್ ಎಲ್ ರಸ್ತೆಯಲ್ಲಿರುವ ನಾರಾಯಣ ಗುರು ಸಭಾಗ್ರಹದಲ್ಲಿ ಡಾ.ರವಿರಾಜ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಮ್ಮೇಳನವನ್ನು ಫೆ.21ರಂದು ಮೀರಾ ರೋಡ್ ಪೂರ್ವದ ಸ್ಟೇಶನ್ ರಸ್ತೆ, ಸಹಕಾರಿ ಭಂಡಾರದ ಎದುರಿನಲ್ಲಿರುವ ಆರ್.ಕೆ.ಲಾನ್-2 ಸಭಾಂಗಣದಲ್ಲಿ ಜರುಗಿಸಲು ನಿಶ್ಚಯಿಸಲಾಯಿತು.
ಅಂದು ಮಧ್ಯಾಹ್ನ 2 ಗಂಟೆಯಿಂದ ತುಳು ಜಾನಪದ ನೃತ್ಯ ಸ್ಪರ್ಧೆಯೊಂದಿಗೆ ಕಾರ್ಯಕ್ರಮವು ದೀಪ ಪ್ರಜ್ವಲಿಸಿ ಚಾಲನೆ ಗೊಳ್ಳಲಿದೆ. ತದನಂತರ ಯಕ್ಷಗಾನ ನೃತ್ಯ ರೂಪಕ, ಹಾಸ್ಯ, ಹಾಡು ಹಾಗೂ ತುಳು ನಾಟಕ ಸಾದರಗೊಳ್ಳಲಿದ್ದು ರಾತ್ರಿ 8ರಿಂದ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ.
ತುಳು ಜಾನಪದ ಸ್ಪರ್ಧೆಯಲ್ಲಿ ಭಾಗವಹಿಸಲು ಕೇವಲ ಹತ್ತು ತಂಡಗಳಿಗೆ ಅವಕಾಶವಿದ್ದು ಸ್ಪರ್ಧೆಯ ನಿಯಮಗಳು, ಹೆಸರು ನೊಂದಾವಣೆ ಹಾಗೂ ಹೆಚ್ಚಿನ ವಿವರಗಳಿಗೆ ಶಾಂತ ಆಚಾರ್ಯ 7977766959 ಅಥವಾ ಅಮಿತಾ ಶೆಟ್ಟಿ 8850274225 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಸಭೆಯಲ್ಲಿ ತುಳುನಾಡ ಸೇವಾ ಸಮಾಜದ ಉಪಾಧ್ಯಕ್ಷರುಗಳಾದ ಪುತ್ತಿಗೆ ನಾರಾಯಣ ಗೌಡ, ವಸಂತ್ ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಮುಖ್ಯ ಸಲಹೆಗಾರ ಜಿ.ಕೆ.ಕೆಂಚನಕೆರೆ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸರ್ವ ತುಳು ಕನ್ನಡಿಗರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ತುಳುನಾಡ ಸೇವಾ ಸಮಾಜದ ಸರ್ವ ಪದಾಧಿಕಾರಿಗಳು,ಸದಸ್ಯರು ವಿನಂತಿಸಿದ್ದಾರೆ.




