ಮುಂಬಯಿ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿ ತೀವ್ರ ಆತಂಕ ಸೃಷ್ಟಿಸಿದ್ದ ವಿರಾರ್ ನಿವಾಸಿ ನಿಶಾಂತ್ ಬಂಗೇರ ಅವರು ಇಂದು ಭಾನುವಾರ (ಮಾರ್ಚ್ 8) ಸುರಕ್ಷಿತವಾಗಿ ಪತ್ತೆಯಾಗಿದ್ದು, ಇದರೊಂದಿಗೆ ಅವರ ಹೆತ್ತವರ, ಸಂಬಂದಿಕರ ಮತ್ತು ಹಿತೈಷಿಗಳ ಏಳು ದಿನಗಳ ಸುದೀರ್ಘ ಕಾಯುವಿಕೆಗೆ ಸುಖಾಂತ್ಯ ಸಿಕ್ಕಂತಾಗಿದೆ.
ವಿರಾರಿನ ನಿವಾಸಿಯಾಗಿರುವ ನಿಶಾಂತ್ ಬಂಗೇರ ಅವರು ಕಳೆದ ಮಾರ್ಚ್ 2ರ ಸೋಮವಾರ ಬೆಳಿಗ್ಗೆ 7:30ರ ಸುಮಾರಿಗೆ ಗೋರೆಗಾಂವ್ ರೈಲು ನಿಲ್ದಾಣದ ಬಳಿಯಿಂದ ಕಾಣೆಯಾಗಿದ್ದರು. ಅಂದಿನಿಂದ ಅವರ ಯಾವುದೇ ಸುಳಿವು ಸಿಗದೆ ಹೆತ್ತವರು, ಅವರ ತಂದೆ -ತಾಯಿಯ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಅವರ ಪತ್ತೆಗಾಗಿ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಆನಂದ ಕುಲಾಲ್, ಸುಕುಮಾರ್ ಸಾಲ್ಯಾನ್, ಪತ್ರಕರ್ತ ದಿನೇಶ್ ಕುಲಾಲ್, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಸುವರ್ಣ ಮತ್ತು ಸಿಬ್ಬಂದಿ ವರ್ಗ, ಬೊರಿವಲಿ ನಗರಸೇವಕ ಶಿವಶೆಟ್ಟಿ ಕಳೆದ ಒಂದು ವಾರದಿಂದ ಮುಂಬಯಿಯ ಮೂಲೆ ಮೂಲೆಯಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದರು. ಸೋಶಿಯಲ್ ಮೀಡಿಯಾ ಹಾಗೂ ಸಮಾಜದ ವಿವಿಧ ಸ್ತರಗಳ ಮೂಲಕ ಮಾಹಿತಿ ಕಲೆಹಾಕಲು ನಡೆಸಿದ ಸತತ ಪ್ರಯತ್ನ ಹಾಗೂ ದೈವಕೃಪೆಯಿಂದಾಗಿ ಇಂದು ಮಧ್ಯಾಹ್ನ ಮುಂಬಯಿ ಪಶ್ಚಿಮ ರೈಲ್ವೆಯ ಚರ್ನಿ ರೋಡ್ ನಿಲ್ದಾಣದಲ್ಲಿ ಅವರು ಪತ್ತೆಯಾಗಿದ್ದಾರೆ.
ನಿಶಾಂತ್ ನಾಪತ್ತೆಯಾಗಲು ನಿಖರವಾದ ಕಾರಣಗಳು ಸದ್ಯಕ್ಕೆ ಬಹಿರಂಗಗೊಂಡಿಲ್ಲವಾದರೂ, ಮಗ ಸುಕ್ಷೇಮವಾಗಿ ಮರಳಿರುವ ಸಂಗತಿ ಹೆತ್ತವರ ಪಾಲಿಗೆ ದೊಡ್ಡ ಸಮಾಧಾನ ತಂದಿದೆ. ಸಮಾಜ ಬಾಂಧವರ ಮತ್ತು ಹಿತೈಷಿಗಳ ಶ್ರಮಕ್ಕೆ ಇದೀಗ ಫಲ ಸಿಕ್ಕಂತಾಗಿದ್ದು, ಕುಟುಂಬದಲ್ಲಿ ಮತ್ತೆ ಸಂತಸದ ವಾತಾವರಣ ನೆಲೆಸಿದೆ.




