ಮುಂಬೈ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಬಿಲ್ಲವರ ಅಸೋಸಿಯೇಷನ್ನ ಮಾಜಿ ಅಧ್ಯಕ್ಷರು ಹಾಗೂ ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಸ್ಥಾಪಕ ಕಾರ್ಯಾಧ್ಯಕ್ಷರಾದ ವರದ ಉಳ್ಳಾಲ್ (87) ಅವರು ಅಲ್ಪಕಾಲದ ಅನಾರೋಗ್ಯದಿಂದ ಏಪ್ರಿಲ್ 6ರಂದು ನಿಧನರಾದರು. ಕಳೆದ 94 ವರ್ಷಗಳ ಸುದೀರ್ಘ ಇತಿಹಾಸವಿರುವ ಬಿಲ್ವವರ ಅಸೋಸಿಯೇಷನ್ ಅನ್ನು 1971-72 ಮತ್ತು 1974-78ರ ಅವಧಿಯಲ್ಲಿ ಅಧ್ಯಕ್ಷರಾಗಿ ಮುನ್ನಡೆಸಿದ್ದ ಇವರು, ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ಶ್ರಮಿಸಿದ ಧೀಮಂತ ನಾಯಕರಾಗಿದ್ದರು. ಬಿಲ್ಲವ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದ್ದ ಕಾಲಘಟ್ಟದಲ್ಲಿ ಅವರಿಗೆ ನೆರವಾಗಲು ಸ್ವಂತ ಬ್ಯಾಂಕ್ ಒಂದರ ಅಗತ್ಯವನ್ನು ಮನಗಂಡ ಉಳ್ಳಾಲ್ ಅವರು, ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್’ ಸ್ಥಾಪಿಸಿ ಅದರ ಮೊದಲ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ದೂರದೃಷ್ಟಿಯ ಫಲವಾಗಿ ಇಂದು ಈ ಬ್ಯಾಂಕ್ ಮಹತ್ತರವಾದ ಬೆಳವಣಿಗೆಯನ್ನು ಕಂಡಿದೆ.
ಮೃತರು ಪತ್ನಿ ಜಯಂತಿ ಜೆ. ಉಳ್ಳಾಲ್, ಪುತ್ರಿಯರಾದ ಸೋನಾಲಿ ಮತ್ತು ಮೊನಾಲಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಿಲ್ಲವ ಸಮಾಜದ ಮುಖಂಡರು, ಸಮಾಜದ ಗಣ್ಯರು, ಸಮಾಜ ಬಾಂದವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮೃತರ ಅಂತಿಮ ಯಾತ್ರೆಯು ಏಪ್ರಿಲ್ 7ರ ಮಂಗಳವಾರ ಬೆಳಿಗ್ಗೆ 10:30ಕ್ಕೆ ಪ್ರಾರ್ಥನಾ ಸಮಾಜ ರಸ್ತೆಯ ಅವರ ಸ್ವಗೃಹ ‘ಜೈಶ್ರೀ’ಯಿಂದ ಹೊರಟು ವಿಲೆಪಾರ್ಲೆ ಪೂರ್ವದ ಸ್ಮಶಾನದವರೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಮುದಾಯದ ಏಳಿಗೆಗಾಗಿ ಅವರು ನೀಡಿದ ನಿಸ್ವಾರ್ಥ ಸೇವೆ ಹಾಗೂ ಮಾರ್ಗದರ್ಶನವು ಸದಾ ಸ್ಮರಣೀಯವಾಗಿದ್ದು, ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
previous post





