
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ.ಎಸ್. ಕೆ. ಬಿ. ಎಸೋಸಿಯೇಶನ್ ಸಹಯೋಗದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷ ಬಲಿ ಪಾಡ್ಯದಿಂದ ಉತ್ಥಾನದ್ವಾದಶಿ ತನಕ ತುಳಸಿ ಪೂಜೆಯು ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಮಂಗಳವಾರ ದಿನಾಂಕ ೧೪. ೧೧. ೨೦೨೩ ರಿಂದ ದಿನಾಂಕ ೨೩. ೧೧. ೨೦೨೩ ಗುರುವಾರದ ವರೆಗೆ ಸಂಜೆ ೫ ಗಂಟೆಯಿಂದ ವಿವಿಧ ಕಲಾವಿದರಿಂದ ದೇವರ ನಾಮ, ಭಜನೆ, ಭರತನಾಟ್ಯ, ತಾಳ ವಾದ್ಯ ಕಚೇರಿ, ಕೊಳಲು, ಸ್ಯಾಕ್ಸೋಫೋನ್ ವಾದನ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂತರ ತುಳಸಿ ಪೂಜೆ ಹಾಗೂ ಗೋಕುಲದ ಮತ್ತು ವಿವಿಧ ಮಠಗಳ ಪುರೋಹಿತ ವರ್ಗದವರೊಂದಿಗೆ ನೆರೆದ ಭಕ್ತಾದಿಗಳಿಂದ ತುಳಸಿ ಸಂಕೀರ್ತನೆ ಜರಗಿತು.
.
ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ ಹಾಗೂ ಪೌರಾಣಿಕ ಮಹತ್ವವುಳ್ಳ ಶ್ರೀ
ಕೃಷ್ಣ ತುಳಸೀವಿವಾಹದ ದಿನವಾದ ಶುಕ್ರವಾರ ದಿನಾಂಕ ೨೪. ೧೧. ೨೦೨೩ ಉತ್ಥಾನದ್ವಾದಶಿ ಪರ್ವಕಾಲದಲ್ಲಿ, ಬೆಳಿಗ್ಗೆ ನಿತ್ಯಪೂಜೆಯ ನಂತರ ಮಂದಿರದ ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್ ರವರು ತುಳಸೀ ಪೂಜೆ, ಸಂಕೀರ್ತನೆ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.




ಸಂಜೆ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ/ಮೂ. ಶ್ರೀನಿವಾಸ್ ಉಡುಪರವರು ವೇದಮೂರ್ತಿ ಗಣೇಶ್ ಭಟ್ ರವರ ಸಹಕಾರದೊಂದಿಗೆ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ಪುಷ್ಪ ಹಾರ ಮತ್ತು ಸ್ವರ್ಣ ಹಾರಗಳಿಂದ ಅಲಂಕರಿಸಿದ್ದರು. ಅಲಂಕೃತ ತುಳಸಿ ವೃಂದಾವನದಲ್ಲಿ ತುಳಸಿ ದೇವಿಯ ಸುಂದರ ಮೂರ್ತಿಯನ್ನು ಶಾಲಿನಿ ಉಡುಪರವರು ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ರಾತ್ರಿ ಪೂಜೆ ಜರಗಿದ ಬಳಿಕ ವೈಭವದ ಶ್ರೀ ಕೃಷ್ಣ ತುಳಸೀ ವಿವಾಹ, ಕ್ಷೀರಾಬ್ಧಿ ಮಹೋತ್ಸವವು ಮಂದಿರದ ಪ್ರಧಾನ ಅರ್ಚಕರಾದ ದರೆಗುಡ್ಡೆ ಶ್ರೀನಿವಾಸ್ ಭಟ್ರವರ ನೇತೃತ್ವದಲ್ಲಿ ಡಾ. ಸುರೇಶ್ ಎಸ್ ರಾವ್ ಯಜಮಾನತ್ವದಲ್ಲಿ ವೇದಮೂರ್ತಿ ಗಣೇಶ್ ಭಟ್ ರವರು ನೆರವೇರಿಸಿದರು. ತದನಂತರ ಸಾಂಪ್ರದಾಯಿಕ ತುಳಸಿ ಸಂಕೀರ್ತನೆ, ತೀರ್ಥ-ಪ್ರಸಾದ ವಿತರಣೆ, ಲಘು ಉಪಹಾರದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿಯಿಂದ ಭಜನೆ, ಉಡುಪಿ ಶ್ರೀ ಕೃಷ್ಣ ಮಠದ ನಿಲಯ ಗಾಯಕರು ಹಾಗೂ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ರವರ ಶಿಷ್ಯರಾದ ವಿದ್ವಾನ್ ಮಧೂರು ನಾರಾಯಣ ಶರಳಾಯರಿಂದ “ದಾಸ ಸಂಕೀರ್ತನೆ” ಪ್ರಸ್ತುತಗೊಂಡಿತು ಪಕ್ಕವಾದ್ಯದಲ್ಲಿ ರಾಘವೇಂದ್ರ ಬಾಳಿಗಾ ಕೀ ಬೋರ್ಡ್, ಪದ್ಮರಾಜ್ ಉಪಾಧ್ಯಾಯ ತಬಲಾ ಹಾಗೂ ನಿತಿನ್ ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು. . ಡಾ. ಸುರೇಶ್ ಎಸ್ ರಾವ್ ರವರು ಗಾಯಕರನ್ನು ಶಾಲು ಹೊದಿಸಿ ಗೌರವಿಸಿದರು. ಅತ್ಯಂತ ವೈಭವದಿಂದ ಜರಗಿದ ಶ್ರೀ ಕೃಷ್ಣ ತುಳಸಿ ಕಲ್ಯಾಣೋತ್ಸವದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಸದಸ್ಯರು, ಧಾರ್ಮಿಕ ಸಮಿತಿ ಸದಸ್ಯರು, ಬಿ. ಎಸ್ ಕೆ. ಬಿ. ಎಸೋಸಿಯೇಶನ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಬಾಂಧವರು ಮಾತ್ರವಲ್ಲದೆ ಮುಂಬಯಿಯಾದ್ಯಂತದ ಸುಮಾರು ೩೦೦ ಕ್ಕಿಂತಲೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.