29 C
Mumbai
March 7, 2026
Mumbai News Kannada
ತುಳುನಾಡು

ಉಡುಪಿ: ವಿಶ್ವ ಗೀತಾ ಪರ್ಯಾಯದ ವೈಭವ; ಶ್ರೀಕೃಷ್ಣ ಮಠದಲ್ಲಿ 2 ಕೋಟಿ ರೂ. ವೆಚ್ಚದ ‘ಸ್ವರ್ಣ ಭಗವದ್ಗೀತೆ’ ಲೋಕಾರ್ಪಣೆ





​ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಅಂಗವಾಗಿ, ಅತ್ಯಂತ ಅಪರೂಪದ ಹಾಗೂ ಕಲಾತ್ಮಕವಾಗಿ ಸಿದ್ಧಗೊಂಡಿರುವ ‘ಹೊನ್ನಿನ ಭಗವದ್ಗೀತೆ’ ಯು ಗುರುವಾರ ಸಂಜೆ ಶ್ರೀಕೃಷ್ಣ ಸನ್ನಿಧಿಯಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.



​ದೆಹಲಿಯ ಶ್ರೀಕೃಷ್ಣ ಭಕ್ತರಾದ ಹಾಗೂ ಕೇಂದ್ರ ಗೃಹ ಖಾತೆಯ ನಿವೃತ್ತ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣನ್ ಅವರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುವರ್ಣ ಗ್ರಂಥವನ್ನು ಸಿದ್ಧಪಡಿಸಿ ಮಠಕ್ಕೆ ಅರ್ಪಿಸಿದ್ದಾರೆ. ಪರ್ಯಾಯ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ದ ಸಂಕಲ್ಪಕ್ಕೆ ಪೂರಕವಾಗಿ ಈ ಅಭೂತಪೂರ್ವ ಕೊಡುಗೆಯನ್ನು ನೀಡಲಾಗಿದೆ.



​ಈ ಸುವರ್ಣ ಭಗವದ್ಗೀತೆಯು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ, ತಾಂತ್ರಿಕವಾಗಿಯೂ ಗಮನ ಸೆಳೆಯುತ್ತಿದೆ:
​ನಿರ್ಮಾಣ: ತಾಮ್ರದ ಹಾಳೆಗಳಿಗೆ ಸಂಪೂರ್ಣ ಚಿನ್ನದ ಲೇಪನ (Gold Coating) ಮಾಡಿ ಇದನ್ನು ರೂಪಿಸಲಾಗಿದೆ.ಒಟ್ಟು 122 ಚಿನ್ನದ ಹಾಳೆಗಳಲ್ಲಿ ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಅತ್ಯಂತ ಸುಂದರವಾಗಿ ಮುದ್ರಿಸಲಾಗಿದೆ.ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾದ ಈ ಗ್ರಂಥವು ಜಲನಿರೋಧಕವಾಗಿದ್ದು, ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿರಲಿದೆ.

​ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, “ಸಮಾಜ ಮತ್ತು ದೇವರ ಸೇವೆ ಮಾಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಭಗವದ್ಗೀತೆಯ ತತ್ವಗಳು ಅಳವಡಿಕೆಯಾಗಬೇಕು. ಈ ಹೊನ್ನಿನ ಗೀತೆಯು ಜಗತ್ತಿಗೆ ಶಾಂತಿ ಮತ್ತು ಜ್ಞಾನದ ಬೆಳಕನ್ನು ನೀಡಲಿ” ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿದ್ದರು.
​ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಉಡುಪಿಗೆ ಆಗಮಿಸಿದ್ದರು.
​ಹೊನ್ನಿನ ಭಗವದ್ಗೀತೆ ಹೊತ್ತಗೆಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಕೃಷ್ಣ ಸಾನ್ನಿಧ್ಯಕ್ಕೆ ತಂದು, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಇಸ್ರೋ ನಿವೃತ್ತ ಉಪ ನಿರ್ದೇಶಕ ಡಾ| ಎಸ್. ವಿ. ಶರ್ಮಾ, ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಪಂಡರಾಪುರ ಶ್ರೀ ವಿಠಲ ರುಕ್ಮಿಣಿ ಮಂದಿರ ಸಮಿತಿಯ ಸಹ ಅಧ್ಯಕ್ಷ ಸದ್ಗುರು ಗಹನಿನಾಥ್ ಜ್ಞಾನೇಶ್ವರ ಮಹಾರಾಜ್ ಜೈಸೆಕರ್, ಆಳಂದ ಶ್ರೀ ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜ್ ಪೀಠದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ, ಲೆಕ್ಕ ಪರಿಶೋಧಕ ಹರಿಕೃಷ್ಣ ಚೆನ್ನೈ, ಬೆಂಗಳೂರಿನ ಅಶ್ವಿನ್ ಶ್ರೀನಿವಾಸ, ಮುಂಬಯಿಯ ಹಿಮಾಂಶು, ನಟರಾಜ್ ಅವರು ಸನ್ಮಾನ ಸ್ವೀಕರಿಸಿದರು.
​ಡಾ| ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣ ಮಠದ ತೀರ್ಥ ಮಂಟಪದಲ್ಲಿ ಸುವರ್ಣ ಗೀತಾ ಗ್ರಂಥಕ್ಕೆ ಆರತಿ ಬೆಳಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
​ಪಾರಾಯಣದೊಂದಿಗೆ ರಾಜಾಂಗಣದಲ್ಲಿ ಶ್ರೀ ಕೃಷ್ಣನ ಪ್ರತಿಮೆ ಎದುರು ಭಗವದ್ಗೀತೆಯ ಕೃತಿಯನ್ನು ತೊಟ್ಟಿಲಿನಲ್ಲಿ ಇರಿಸಲಾಯಿತು. ಅನಂತರ ಸಭಾ ಕಾರ್ಯಕ್ರಮ ನಡೆಯಿತು.



Related posts

ವಿಶ್ವ ಗಾಣಿಗರ ಚಾವಡಿ ಮಂಗಳೂರು – ಉಚಿತ ವೈದ್ಯಕೀಯ ಶಿಬಿರ

Mumbai News Desk

ಉಡುಪಿಯಲ್ಲಿ ನಡೆದ ಕುಣಿತ ಭಜನಾ ಸೇವೆಯಲ್ಲಿ ಎಲ್ಲರ ಗಮನ ಸೆಳೆದ ಲಕ್ಷ್ಮಿ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ತಂಡದ ಪುಟಾಣಿಗಳು

Mumbai News Desk

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭ

Mumbai News Desk