
ನಾಡಿನ ಸಂಸ್ಕೃತಿ, ಕಲೆ, ಬಾಷೆ ಉಳಿಸುವ ಮಕ್ಕಳಿಗೆ ನಾವು ಪ್ರೋತ್ಸಾಹಿಸೋಣ- ಹರೀಶ್ ಮೈಂದನ್
ಮುಂಬಯಿ : ಕನ್ನಡ ಬಾಷೆಯನ್ನು ಈ ಮಹಾನಗರದಲ್ಲಿ ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಕೊಡುಗೆ ಅಪಾರ. ಅಂತಹ ಮಕ್ಕಳಿಗೆ ನಮ್ಮ ತುಳು ಸಂಘ ಸದಾ ಪ್ರೋತ್ಸಾಹಿಸುತ್ತಿದೆ ಎಂದು ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ನುಡಿದರು.
ಜು. 1 ರಂದು ತುಳು ಸಂಘ ಬೊರಿವಲಿಯ ವತಿಯಿಂದ ಬೊರಿವಲಿ ಪಶ್ಚಿಮ ಸೋಡಾವಾಲ ಲೇನ್ ಮನಪಾ ಕನ್ನಡ ಶಾಲೆಯ ಮಕ್ಕಳಿಗೆ ನೋಟು ಪುಸ್ತಕ ಪೆನ್ ಸೆಟ್, ಬಿಸ್ಕೇಟ್ ವಿತರಿಸಿ ಮಾತನಾಡಿದ ಅವರು ನಮ್ಮ ಸಂಘವು ತುಳು ಬಾಷೆ, ಸಂಸ್ಕೃತಿ, ಕಲೆ ಯನ್ನು ಉಳಿಸುವ ಪ್ರಯತ್ನದೊಂದಿಗೆ ನಮ್ಮ ನಾಡಿನ ಅರ್ಹ ಮಕ್ಕಳಿಗೆ ಈ ರೀತಿಯ ಸಹಾಯ ನೀಡುದರೊಂದಿಗೆ ನಾಡಿನ ಬಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಮ್ಮದು ಎಂದರು.

ತುಳು ಸಂಘ ಬೊರಿವಲಿ ಯ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಮಾತನಾಡುತ್ತಾ 2025-26 ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಕನ್ನಡ ವಿಭಾಗದಲ್ಲಿ, ಪಬ್ಲಿಕ್ ಪರೀಕ್ಷೆಯಲ್ಲಿ ಶೇಖಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೂ ತುಳು ಸಂಘ ಬೋರಿವಿಲಿ ಯ ವತಿಯಿಂದ ವಿಶೇಷ ನಗದು ಬಹುಮಾನವನ್ನು ಘೋಷಿಸಿದರು. ಇದನ್ನು ತರಗತಿಯಲ್ಲಿ ಘೋಷಿಸಿ ಮಕ್ಕಳು ಹೆಚ್ಚು ಹೆಚ್ಚು ಶೈಕ್ಷಣಿಕವಾಗಿ ಮುಂದುವರೆಯುವಂತೆ ಪ್ರೋತ್ಸಾಹಿಸಬೇಕಾಗಿ ಶಾಲಾ ಶಿಕ್ಷರಲ್ಲಿ ವಿನಂತಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ವಾಸು ಪುತ್ರನ್, ಪ್ರಧಾನ ಕಾರ್ಯದರ್ಶಿ ಕೃಷ್ಣ ರಾಜ್ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ, ಸಂಘದ ಜೊತೆ ಕೋಶಾಧಿಕಾರಿ ಟಿವಿ ಪೂಜಾರಿ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಕನ್ನಡ ಶಾಲೆಯ 150ಕ್ಕೂ ಅಧಿಕ ಮಕ್ಕಳು ಸಂಘದ ಈ ಯೋಜನೆಯ ಪ್ರಯೋಜನವನ್ನು ಪಡೆದರು.




