ಮಂಗಳೂರು ವಕೀಲರ ಸಂಘಕ್ಕೆ ಶನಿವಾರ ನಡೆದ 2026-28ರ ಸಾಲಿನ ಚುನಾವಣೆಯಲ್ಲಿ ಹಿರಿಯ ನ್ಯಾಯವಾದಿ ಜಗದೀಶ ಕೆ. ಶೇಣವ ಅವರು ನೂತನ ಅಧ್ಯಕ್ಷರಾಗಿ ಭರ್ಜರಿ ಜಯ ಗಳಿಸಿ ಚುನಾಯಿತರಾಗಿದ್ದಾರೆ.
ಶನಿವಾರ ನಡೆದ ಬಿರುಸಿನ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 1246 ಮತಗಳ ಪೈಕಿ ಜಗದೀಶ ಕೆ. ಶೇಣವ ಅವರು ಒಟ್ಟು 673 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ್ದಾರೆ. ಸಂಘದ ಇತಿಹಾಸದಲ್ಲಿಯೇ ಈ ಬಾರಿ ಅತ್ಯಂತ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ವಕೀಲರು ಅತಿ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದ್ದರು.
ಉಳಿದಂತೆ ಸಂಘದ ಪ್ರಮುಖ ಪದಾಧಿಕಾರಿಗಳ ಸ್ಥಾನಗಳಿಗೂ ತೀವ್ರ ಪೈಪೋಟಿ ನಡೆದಿದ್ದು, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಅದ್ಯಪಾಡಿ ಅವರು ಆಯ್ಕೆಯಾಗಿದ್ದಾರೆ. ಸಂಘದ ಅತ್ಯಂತ ಜವಾಬ್ದಾರಿಯುತ ಸ್ಥಾನವಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗೌತಮ್ ಬಿ. ಪಿ. ಅವರು ಚುನಾಯಿತರಾಗಿದ್ದಾರೆ.
ಅದೇ ರೀತಿ ಜೊತೆ ಕಾರ್ಯದರ್ಶಿಯಾಗಿ ರವಿ ಕುಮಾರ್ ವಿ. ಹಾಗೂ ಕೋಶಾಧಿಕಾರಿಯಾಗಿ ರೇಖಾ ಕೆ. ಅವರು ವಿಜಯಶಾಲಿಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಜಗದೀಶ ಕೆ. ಶೇಣವ ಹಾಗೂ ಅವರ ತಂಡವನ್ನು ಮಂಗಳೂರಿನ ನ್ಯಾಯವಾದಿಗಳು ಮತ್ತು ವಿವಿಧ ಗಣ್ಯರು ಅಭಿನಂದಿಸಿದ್ದಾರೆ. ಕರಾವಳಿ ಭಾಗದ ವಕೀಲರ ಹಿತರಕ್ಷಣೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ನೂತನ ಆಡಳಿತ ಮಂಡಳಿಯು ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.




