ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕಾವಧಿ ಜಾತ್ರೆ ಏ. 1ರಿಂದ 8ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆ ಪೂರ್ವಭಾವಿಯಾಗಿ ಮಾ. 17ರಂದು ಬಲಿ ಉತ್ಸವದೊಂದಿಗೆ ಆರಂಭಗೊಂಡು ಮಾ. 7ರವರೆಗೆ ಬಲಿ ಉತ್ಸವಗಳು ನಡೆಯಲಿದೆ. ಮಾ. 31ರಂದು ಅಂಕುರಾರೋಹಣ , ಏ. 1ರಂದು ಬೆಳಗ್ಗೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು 11.30ಕ್ಕೆ ಶ್ರೀದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯವರ ಐತಿಹಾಸಿಕ ಭೇಟಿಯೊಂದಿಗೆ ಧ್ವಜಾರೋಹಣ, ರಾತ್ರಿ 7 ಗಂಟೆಗೆ ಉತ್ಸವ ಬಲಿ, ಏ. 2ರಂದು ರಾತ್ರಿ 7 ಗಂಟೆಗೆ ಉತ್ಸವ ಬಲಿ, ಏ. 3ರಂದು ರಾತ್ರಿ 7ಕ್ಕೆ ಪೇಟೆ ಸವಾರಿ, ಏ. 4ರಂದು ರಾತ್ರಿ 7 ಗಂಟೆಗೆ ಕೊಪ್ಪಲ ಸವಾರಿ, ಏ. 5ರಂದು ರಾತ್ರಿ 7 ಗಂಟೆಗೆ ಬಾಕಿಮಾರು ದೀಪೋತ್ಸವ, ಏ. 6ರಂದು ರಾತ್ರಿ 7ಕ್ಕೆ ಕೆರೆ ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ತಿಳಿಸಿದರು.
ಏ. 7ರಂದು ಮಧ್ಯಾಹ್ನ 12 ಗಂಟೆಗೆ ಹಗಲು ರಥೋತ್ಸವ, ರಾತ್ರಿ 7.30ರಿಂದ ಉತ್ಸವ ಬಲಿ, ವೈಭವದ ಶಯನೋತ್ಸವ, ಏ. 8ರಂದು ಬೆಳಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಸಂಜೆ 7ರಿಂದ ಉತ್ಸವ ಬಲಿ, ಓಕುಳಿ, ಶ್ರೀದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯವರ ಭೇಟಿ, ಮಹಾ ರಥೋತ್ಸವ, ಅವಭೃತ ಧ್ವಜಾವರೋಹಣ, ಏ. 9ರಂದು ಊರ ಪರವೂರ ಭಕ್ತಾದಿಗಳಿಂದ ಹಣ್ಣು ಕಾಯಿ ಸಮರ್ಪಣೆ ಸೇವಾದಿಗಳು, ಏ. 10ರ ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ ಎಂದರು. ಏ. 12ರಂದು ದೇವಸ್ಥಾನಕ್ಕೆ ಸಂಬಂಧ ಪಟ್ಟ ಕೋಳಚ್ಚಿಂಬಲ ಶ್ರೀ ಜಾರಂದಾಯ ದೈವದ ನೇಮ ನಡೆಯಲಿದೆ.
ಕಳೆದ ವರ್ಷ ಸಂಭವಿಸಿದ ರಥ ಅಪಘಾತದ ಹಿನ್ನೆಲೆಯಲ್ಲಿ ಈ ಬಾರಿ ಪ್ರಶ್ನಾ ಚಿಂತನೆ ಅನುಸಾರ ಹಳೆ ರಥವನ್ನು ದುರಸ್ತಿಗೊಳಿಸಿ ಮಹೋತ್ಸವದಂದು ದೇವರ ರಥಾರೋಹಣ ಭಕ್ತಾದಿಗಳ ಕೂಡುವಿಕೆಯೊಂದಿಗೆ ನಡೆಯಲಿದೆ. ಸಾಂಕೇತಿಕ ರಥ ಎಳೆದ ಬಳಿಕ ದೇವಳ ವಿಮಾನ ರಥದ ಮೂಲಕ ರಥ ಪ್ರದಕ್ಷಿಣೆ ನಡೆಯಲಿದೆ ಎಂದು ಎಂ. ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ.




