
ಮುಲ್ಕಿ: “ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ಯಾರಿಗೂ ಬೇಡ. ಪ್ರತಿಭೆಯಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಇಂದು ದೇಶದ ಉನ್ನತ ಮಟ್ಟದಲ್ಲಿರುವ ಹಲವು ಗಣ್ಯ ವ್ಯಕ್ತಿಗಳು ಬಡತನದ ಹಿನ್ನೆಲೆಯಿಂದಲೇ ಬಂದವರಾಗಿದ್ದಾರೆ,” ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಇಲ್ಲಿನ ಸುರಭಿ ಎಲೆಕ್ಟ್ರಾನಿಕ್ಸ್ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಸುರಭಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
”ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ಮೂಡಿಬರಲು ಯಾವುದೇ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಸುರಭಿ ಎಲೆಕ್ಟ್ರಾನಿಕ್ಸ್ನ ಜೋನ್ ಕ್ವಾಡ್ರಸ್ ಅವರು ತಮ್ಮ ವ್ಯಾಪಾರದ ಲಾಭಾಂಶದಿಂದ ಕಳೆದ 4 ವರ್ಷಗಳಿಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಹಾಗೂ ಸಮವಸ್ತ್ರವನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ,” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಜೋನ್ ಕ್ವಾಡ್ರಸ್ ಮಾತನಾಡಿ, “ಕಳೆದ 4 ವರ್ಷಗಳಿಂದ ಕನ್ನಡ ಮಾಧ್ಯಮದ ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ ಬರುತ್ತಿರುವುದು ಒಂದು ಆದರ್ಶ ಕೆಲಸವಾಗಿದೆ. ಇದಕ್ಕೆ ಪರಮಾತ್ಮನ ದಯೆಯೂ ಇದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ಈ ಸಹಾಯ ಹಸ್ತ ನಿರಂತರವಾಗಿ ಮುಂದುವರಿಯಲಿದೆ,” ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಲ್ಕಿ ಕೋಸಸಾಂವ್ ಅಮ್ಮನವರ ಚರ್ಚ್ ಧರ್ಮಗುರು ರೇ.ಫಾ. ಅಂತೋನಿ ಶೇರಾ ಮತ್ತು ಶಕ್ತಿನಗರ ಸಿ.ಎಸ್.ಐ ಜೋಶಿಯಾ ಸ್ಮಾರಕ ಚರ್ಚ್ ಧರ್ಮಗುರು ವಂ. ಶಶಿಕಲಾ ಅಂಚನ್ ಅವರು ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಣ್ಣಂಗಾರ್ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್, ಹೊಸ ಅಂಗನ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವೆಗುತ್ತು ಹಾಗೂ ವಕೀಲ ರವೀಶ್ ಕಾಮತ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಲ್ಕಿ ಮತ್ತು ಕಾಪು ತಾಲೂಕಿನ 2026-27ನೇ ಸಾಲಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ 230 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು.
ವಾಸು ಪೂಜಾರಿ ಚಿತ್ರಾಪು ಸ್ವಾಗತಿಸಿದರು. ದಿನೇಶ್ ಶೆಟ್ಟಿ ಮತ್ತು ಪ್ರಾಪ್ತಿ ಆರ್. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಕರ್ಕೇರ ವಂದನಾರ್ಪಣೆ ಮಾಡಿದರು.




