
ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಹಾಗೂ ಮುಂಬೈ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆಯಾದ ‘ಕಲಾ ಸೌರಭ’ ತನ್ನ 34ನೇ ವರ್ಷದ ಸರಣಿ ಕಾರ್ಯಕ್ರಮ “ಸಂಸ್ಕಾರ 2026” ರ 5ನೇ ವಿಶಿಷ್ಟ ಆವೃತ್ತಿಯನ್ನು ಆಯೋಜಿಸಿದೆ. ಈಗಾಗಲೇ ಮುಂಬೈ ಹಾಗೂ ಮಂಗಳೂರಿನಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಜನಮನ್ನಣೆ ಗಳಿಸಿರುವ ಎನ್ ಸಂಸ್ಥೆಯು, ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿಯ ಶುಭ ದಿನದಂದು ಚಾಲನೆಗೊಂಡ ಈ ಸರಣಿಯ ಮುಂದಿನ ಭಾಗವಾಗಿ “ಸ್ವರ ಸಂಗೀತ ಗಾನಾಮೃತ – ನುಡಿ ನಮನ” ಸಾಂಸ್ಕೃತಿಕ ಪಯಣವನ್ನು ಹಮ್ಮಿಕೊಂಡಿದೆ.
ಈ ಅರ್ಥಪೂರ್ಣ ಕಾರ್ಯಕ್ರಮವು ಭಗವಂತನ ಪಾದಕಮಲಗಳಲ್ಲಿ ಐಕ್ಯರಾದ ಗಾನಲೋಕದ ಧ್ರುವತಾರೆಗಳಾದ ದಿ| ಎಸ್. ಜಾನಕಿ, ದಿ| ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಹಾಗೂ ದಿ| ವಾಣಿ ಜಯರಾಮ್ ಅವರ ಸ್ಮರಣಾರ್ಥವಾಗಿ ನಡೆಯಲಿದೆ. ಕಲಾ ಸೌರಭ ತಂಡದ ರೂವಾರಿ, ಸಂಘಟಕ ಹಾಗೂ ಸಂಗೀತ ನಿರ್ದೇಶಕರಾದ ಪದ್ಮನಾಭ ಸಸಿಹಿತ್ಲು ಅವರ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವು ಬರುವ ಬುಧವಾರ, 26/08/2026 ರಂದು ಅಪರಾಹ್ನ 3:00 ಗಂಟೆಗೆ ಮುಂಬೈನ ಸಾಂತಾಕ್ರೂಸ್ (ಪೂರ್ವ) ನ ಬಿಲ್ಲವ ಭವನದ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜರುಗಲಿದೆ.
ಮುಂಬೈ, ಬೆಂಗಳೂರು ಮತ್ತು ಮಂಗಳೂರು ನಗರಗಳ ಸರಿಸುಮಾರು 50 ರಿಂದ 70 ರಷ್ಟು ಸುಪ್ರಸಿದ್ಧ ಗಾಯನ ಹಾಗೂ ನರ್ತನ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಿ, ವೈವಿಧ್ಯಮಯ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ವಿವಿಧ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ವೃಂದ ಗಾಯನದ ಮೂಲಕ ಈ ಅಮರ ಗಾಯಕರಿಗೆ ಭಾವಪೂರ್ಣ ನುಡಿನಮನ ಹಾಗೂ ಪುಷ್ಪಾರ್ಪಣೆ ಸಲ್ಲಿಕೆಯಾಗಲಿದೆ.
ಸಂಪೂರ್ಣ ಶಿಸ್ತುಬದ್ಧ ಹಾಗೂ ಸಂಗೀತಮಯವಾಗಿ ಜರುಗಲಿರುವ ಈ ಸಮಾರಂಭದಲ್ಲಿ ಪ್ರಾರ್ಥನೆ, ಉದ್ಘಾಟನೆ, ದೀಪಾರ್ಪಣೆ, ಪುಷ್ಪಾರ್ಪಣೆ, ನುಡಿ ನಮನ, ಸಂಸ್ಮರಣಾ ಗಾನಾರ್ಪಣೆ ಹಾಗೂ ಗೌರವ ವಂದನಾರ್ಪಣೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ನೆರವೇರಲಿವೆ. ಕಲಾ ಪೋಷಕರು ಹಾಗೂ ಸಾಧಕರು ಈ ಐತಿಹಾಸಿಕ ವೇದಿಕೆಯಲ್ಲಿ ಮುಖ್ಯ ಗೌರವಾನ್ವಿತರಾಗಿ ಉಪಸ್ಥಿತರಿದ್ದು, ತನು-ಮನ-ಧನದ ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.




