
ಚಿತ್ರ: ಯೋಗೇಶ್ ಪುತ್ರನ್, ವರದಿ: ಇನ್ನಂಜೆ ಜಯರಾಮ್
ಮುಂಬೈ: ಮಹಾನಗರದ ಬೋರಿವಲಿ ಪಶ್ಚಿಮದಲ್ಲಿರುವ ಗ್ಯಾಂಗ್ ಸಾಗರ್ ಹಂಪಿ ಥಿಯೇಟರ್ನಲ್ಲಿ ‘ತುಳು ಸಂಘ ಬೋರಿವಲಿ’ಯ 16ನೇ ವಾರ್ಷಿಕೋತ್ಸವವು ಏಪ್ರಿಲ್ 25ರಂದು ಅತ್ಯಂತ ವೈಭವದಿಂದ ನೆರವೇರಿತು. ಸಂಘದ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವು ತುಳುವರ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯಿತು.
ಸಂಘದ ಅಧ್ಯಕ್ಷ ಹರೀಶ್ ಮೈಂದನ್ ಅವರು ಎಲ್ಲರನ್ನು ಸ್ವಾಗತಿಸಿ, ಸಂಘದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. “ನಮ್ಮ ಸಂಘವು ಕೇವಲ ವಾರ್ಷಿಕೋತ್ಸವಕ್ಕೆ ಸೀಮಿತವಾಗದೆ, ಬೋರಿವಲಿಯಿಂದ ಕಾಂದಿವಲಿವರೆಗೆ ಹಮ್ಮಿಕೊಂಡಿದ್ದ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಮಹಾನಗರ ಪಾಲಿಕೆ ಹಾಗೂ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಈ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿದೆ,” ಎಂದು ಹೆಮ್ಮೆಯಿಂದ ತಿಳಿಸಿದರು. ಅಲ್ಲದೆ, ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಯುವ ವಿಭಾಗದಿಂದ ಹಮ್ಮಿಕೊಂಡ ಕ್ರೀಡಾ ಕೂಟಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ. ಸಾಫಲ್ಯ ಅವರು ಮಾತನಾಡಿ, “ಮುಂಬೈನಂತಹ ನಗರದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಇಂತಹ ಸಂಘ ಸಂಸ್ಥೆಗಳ ಅಗತ್ಯವಿದೆ. ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಸೊಗಡನ್ನು ದಾಟಿಸುವುದು ನಮ್ಮೆಲ್ಲರ ಕರ್ತವ್ಯ,” ಎಂದರು. ಗೌರವ ಅತಿಥಿಗಳಾದ ಶಿವಸಾಗರ್ ಫುಡ್ಸ್ ಎಂ ಡಿ ಎನ್.ಟಿ. ಪೂಜಾರಿ ಮತ್ತು ಗೋಕುಲ್ ಎಂಟರ್ಪ್ರೈಸಸ್ ಎಂ ಡಿ ಗೋಪಾಲಕೃಷ್ಣ ಜಿ. ಗಾಣಿಗ ಅವರು ಸಂಘದ ಸಾಮಾಜಿಕ ಕೆಲಸಗಳನ್ನು ಶ್ಲಾಘಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ವಿರಾರ್ ಶಂಕರ್ ಬಿ. ಶೆಟ್ಟಿ ಅವರು, “ತುಳು ಸಂಘವು ಜಾತಿ-ಮತ ಭೇದವಿಲ್ಲದೆ ಎಲ್ಲ ತುಳುವರನ್ನು ಒಗ್ಗೂಡಿಸುವ ವೇದಿಕೆಯಾಗಬೇಕು. ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಲಿ,” ಎಂದು ಆಶಯ ವ್ಯಕ್ತಪಡಿಸಿದರು.




ದಿವಾಕರ್ ಕರ್ಕೇರ (ಗೌರವ ಕೋಷಾಧಿಕಾರಿ), ಕೃಷ್ಣರಾಜ್ ಸುವರ್ಣ (ಪ್ರಧಾನ ಕಾರ್ಯದರ್ಶಿ), ಚಂದ್ರಹಾಸ್ ಬೆಲ್ಚಡ (ಮಾಜಿ ಕೋಷಾಧಿಕಾರಿ), ಸವಿತಾ ಸಿ. ಶೆಟ್ಟಿ (ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ) ಸಂಘದ ಏಳಿಗೆಗಾಗಿ ನಿರಂತರ ಶ್ರಮಿಸಿದ ಇವರುಗಳನ್ನು ಸನ್ಮಾನಿಸಲಾಯಿತು. ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಂ ವೈದ್ಯ, ಜೊತೆ ಕೋಷಾಧಿಕಾರಿ ಟಿ.ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರಾಘವ್ ಎಂ., ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಉಪಸ್ಥಿತರಿದ್ದರು.ನ್ಯಾಯವಾದಿ ರಾಘವ್ ಎಂ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಕೃಷ್ಣರಾಜ್ ಸುವರ್ಣ ವಂದಿಸಿದರು.

ಕಾರ್ಯಕ್ರಮವು ಶೈಲಜಾ ಹೆಗಡೆ ಮತ್ತು ತಂಡ, ನಾಲಸೋಪಾರ ತುಳು ಸಂಘ, ಚಿನ್ನರ ಬಿಂಬ ಹಾಗೂ ಬಿಲ್ಲವರ ಅಸೋಸಿಯೇಶನ್ ಸದಸ್ಯರಿಂದ ಮೂಡಿಬಂದ ಆಕರ್ಷಕ ನೃತ್ಯ ಪ್ರದರ್ಶನಗಳೊಂದಿಗೆ ಆರಂಭವಾಯಿತು. ಸಭಾ ಕಾರ್ಯಕ್ರಮದ ಬಳಿಕ ಕರುಣಾಕರ್ ಕಾಪು ಅವರ ನಿರ್ದೇಶನದಲ್ಲಿ ಹಾಗೂ ಯು.ಆರ್. ಚಂದರ್ ಅವರ ಲೇಖನಿಯಲ್ಲಿ ಮೂಡಿಬಂದ ‘ಕೋರ್ದರ್ಪು ತನ್ನಿಮಾನಿಗ’ ತುಳು ನಾಟಕವು ಪ್ರದರ್ಶನಗೊಂಡು ಜನರ ಮನ ಗೆದ್ದಿತು.




