
ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ ಇದರ ಡೊಂಬಿವಲಿ ಶಾಖೆಯು ಡೊಂಬಿವಲಿ (ಪೂರ್ವ)ದ ಸಾಯಿ ಜ್ಯೋತ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಉಚಿತ ಡಯಾಲಿಸಿಸ್ ಯಂತ್ರ (ಉಡುಪಿಯ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಡಿ) ಮತ್ತು ರಿಯಾಯಿತಿ ದರದ ಆರೋಗ್ಯ ಸೇವೆಗಳ ಭವ್ಯ ಉದ್ಘಾಟನಾ ಸಮಾರಂಭವು ಮುಂಬರುವ ಶನಿವಾರ, ದಿನಾಂಕ 13-06-2026 ರಂದು ಬೆಳಗ್ಗೆ 11:00 ಗಂಟೆಗೆ ಡೊಂಬಿವಲಿ ಪೂರ್ವದ ಆರ್. ಪಿ. ರಸ್ತೆಯಲ್ಲಿರುವ ಲೆವಾ ಭವನದ ಹತ್ತಿರದ ‘ಸುಚಿತ್ ಸ್ಕ್ವೇರ್’ನ ಮೊದಲ ಮಹಡಿಯಲ್ಲಿ ಜರುಗಲಿದೆ.
ದಿ ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ ಇದರ ಅಧ್ಯಕ್ಷರಾದ ಗಣೇಶ್ ಕಾಂಚನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈನ ದಿವ್ಯ ಶಿಪ್ಪಿಂಗ್ ಮತ್ತು ಕ್ಲಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ವೇದಪ್ರಕಾಶ್ ಶ್ರಿಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಇವರೊಂದಿಗೆ ಬಾಗ್ವಾಡಿ ಹೋಬಳಿಯ ಮೊಗವೀರ ಮಹಾಜನ ಸೇವಾ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಸುರೇಶ್ ಕಾಂಚನ್, ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್, ಪ್ರಸ್ತುತ ಅಧ್ಯಕ್ಷರಾದ ಸಂತೋಷ್ ಪುತ್ರನ್ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈನ ಮಾಜಿ ಅಧ್ಯಕ್ಷರಾದ ಅಜಿತ್ ಸುವರ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಂಬೈನ ಪ್ರಸಿದ್ಧ ವೈದ್ಯರುಗಳಾದ ಡಾ. ವಿಶಾಲ್ ಚೌಧರಿ (M.B.B.S, F.C.P.S, ಮೆಡಿಸಿನ್) ಹಾಗೂ ಡಾ. ಸುಮೇಧಾ ವಿಶಾಲ್ ಚೌಧರಿ (M.B.B.S, MD, ಮೈಕ್ರೋಬಯಾಲಜಿ) ಮತ್ತು ಸಾಯಿ ಜ್ಯೋತ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈನ ಉಪಾಧ್ಯಕ್ಷರುಗಳಾದ ಬಿ. ಕೆ. ಪ್ರಕಾಶ್, ದಯಾವತಿ ಸುವರ್ಣ, ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ದಿಲೀಪ್ಕುಮಾರ್ ಮುಲ್ಕಿ, ಗೌರವಾನ್ವಿತ ಕೋಶಾಧಿಕಾರಿ ದೇವರಾಜ್ ಕುಂದರ್ ಹಾಗೂ ಡೊಂಬಿವಲಿ ಶಾಖೆಯ ಸಂಯೋಜಕರಾದ ರಾಜೇಶ್ ಪುತ್ರನ್ ಶ್ರಮಿಸುತ್ತಿದ್ದಾರೆ. ಡೊಂಬಿವಲಿ ಶಾಖೆಯ ಅಧ್ಯಕ್ಷರಾದ ಯದುವೀರ್ ಪುತ್ರನ್, ಕಾರ್ಯದರ್ಶಿ ಉಮೇಶ್ ಮೆಂಡನ್ ಮತ್ತು ಕೋಶಾಧಿಕಾರಿ ಕೇಶವ್ ಬಂಗೇರ ಅವರು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.




