27.07.2026
..

ಸುದ್ದಿ ವಿವರ :ಪಿ.ಆರ್.ರವಿಶಂಕರ್
22 ನೇ ಜುಲೈ.2026 ರಂದು ಆರಂಭವಾಗಿ ಸುಮಾರು 50 ಗಂಟೆಗಳ ಕಾಲ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಜಲಾವೃತಗೊಂಡು ಸಂಕಷ್ಟಗೊಳಗಾಗಿದ್ದ ಡಹಾಣೂ ಪರಿಸರವು ಇದೀಗ ಚೇತರಿಸಿಕೊಂಡು ಮರಳಿ ಸಹಜ ಸ್ಥಿತಿಯತ್ತ ಸಾಗುತ್ತಿದೆ.
ಅಂಗಡಿಮುಗ್ಗಟ್ಟುಗಳು ತಮ್ಮ ವ್ಯಾಪಾರವನ್ನು ಪುನಃ ಆರಂಭಿಸಿವೆ.
ಶಾಲಾ ಕಾಲೇಜುಗಳು ಸೋಮವಾರದಿಂದ ಆರಂಭಗೊಂಡಿವೆ. ಕಂಕ್ರಾಡಿ ರೈಲ್ವೇ ಸೇತುವೆ ಬಳಿಯಿಂದ ನೇರವಾಗಿ ನಗರದ ಮಧ್ಯ ಭಾಗದಿಂದ ಹಾದು ಹೋಗುವ ನಾಲೆಯಲ್ಲಿ ಸತತ ಮಳೆಯಿಂದಾಗಿ ನೀರು ಉಕ್ಕೇರಿ ಅತೀ ರಭಸದ ಪ್ರವಾಹದ ಸ್ಥಿತಿ ಉಂಟಾಗಿತ್ತು .

ಪ್ರವಾಹದ ನೀರು ನಗರದೆಲ್ಲೆಡೆ ನುಗ್ಗಿ ವಸತಿ ಸಂಕುಲಗಳು , ,ಕಛೇರಿಗಳು ಹೋಟೆಲ್ ಗಳ ಒಳನುಗ್ಗಿ ಒಳಗಿದ್ದ ಯಂತ್ರ ಸಾಮಗ್ರಿಗಳಿಗೆ ಬಹಳಷ್ಟು ಹಾನಿ ಉಂಟಾಗಿತ್ತು. ಪ್ರವಾಹದ ನೀರು ಇಳಿದ ಬಳಿಕ ರಸ್ತೆಯಲ್ಲಿ ಅಲ್ಲಲ್ಲಿ ಜಮಾಗೊಂಡ ಕಸ ಹಾಗೂ ದವಸಧಾನ್ಯ , ಬಟ್ಟೆಯಂಗಡಿಯಂತಹ ವ್ಯಾಪಾರಿಗಳು ಹೊರಗೆಸೆದ ತ್ಯಾಜ್ಯವನ್ನು ನಗರಪಾಲಿಕೆಯು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಿದೆ.
ಶಹರದಲ್ಲಿ ಹೆಚ್ಚಿನ ಸ್ಥಳದಲ್ಲಿ ಜಲಾವೃತಗೊಂಡ ಕಾರಣ
ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ಸೇವೆಗಳ ಮೊಬೈಲ್ ನೆಟ್ವರ್ಕ್ ಸಂಪರ್ಕವೂ ಇಲ್ಲದ ಕಾರಣ ಜನರು ಗೊಂದಲಕ್ಕೀಡಾಗಿದ್ದರು.
2002 ರಲ್ಲಿ ಇದೇ ರೀತಿ ನೆರೆ ನೀರು ಬಂದಿದ್ದರೂ ಆನಂತರದ ಪ್ರತೀ ಮಳೆಗಾಲದಲ್ಲಿಯೂ ಒಂದಷ್ಟು ನೀರು ತುಂಬಿದರೂ ಶೀಘ್ರದಲ್ಲಿಯೇ ಇಳಿದು ಹೋಗುತ್ತಿದ್ದ ಕಾರಣ ಜುಲೈಯಲ್ಲಿ ಈ ರೀತಿ ಆಗಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಒಮ್ಮೆಲೇ ಏರಿದ್ದರಿಂದ ಜಲಾವೃತಗೊಂಡ ತಮ್ಮ ವ್ಯಾಪಾರ ಸ್ಥಳಗಳಲ್ಲಿ ಆಗಿರುವ ನಷ್ಟವನ್ನು ಅಂದಾಜಿಸುವಲ್ಲಿ ಇದೀಗ ಜನರು ತೊಡಗಿದ್ದಾರೆ.
ಸರೋವರ್ ಹೋಟೆಲ್ ಬಳಿಯ ಸೇತುವೆಯ ಮಟ್ಟದಿಂದ ನೀರು ಹರಿದಿದ್ದು ರಸ್ತೆಯೂ ಅಲ್ಲಲ್ಲಿ ಕಿತ್ತು ಹೋಗಿತ್ತು.
ಪ್ರವಾಹದ ನೀರಿನ ಸೆಳೆತಕ್ಕೆ ಸ್ಕೂಟರ್, ಬೈಕ್ , ಕಾರುಗಳು ಹಾನಿಗೀಡಾಗಿವೆ.
ದಹಾಣು ಚಿಕ್ಲೆ ಬೀಚ್ ರಸ್ತೆಯಂತಹ ಕೆಲವು ಪ್ರದೇಶಗಳಲ್ಲಿ ಸಣ್ಣ ಹಳೆಯ ಸೇತುವೆಗಳು ಕೊಚ್ಚಿಹೋಗಿವೆ.
ಇಂಟಿಗ್ರೇಟೆಡ್ ಯುನಿಟ್ ಪ್ರದೇಶದ ಆದಿವಾಸಿಗಳು ತಮ್ಮ ಕಾಲೋನಿಯಲ್ಲಿ ನೀರು ತುಂಬಿದ್ದಾಗ ಸುರಕ್ಷಿತ ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಂಡರೂ
ಆಹಾರ ಮತ್ತು ನೀರಿಲ್ಲದೆ ಪರದಾಡುವಂತಾಗಿತ್ತು.
ಇತ್ತೀಚೆಗೆ ಕಂಡು ಕೇಳರಿಯದಂತಹ ಜಲಪ್ರಳಯದ ಆಘಾತದಿಂದ ಡಹಾಣೂ ಶಹರ ಪುನಃ ಚೇತರಿಸಿಕೊಳ್ಳುತ್ತಿದೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್
ಡಹಾಣೂ ರೋಡ್
8483980035
.
.





