ಮುಂಬಯಿನಿಂದ ಮಂಗಳೂರಿಗೆ ಬರುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಪ್ರತ್ಯೇಕ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಇಬ್ಬರು ಮಹಿಳಾ ಪ್ರಯಾಣಿಕರ ಅಮೂಲ್ಯ ವಸ್ತುಗಳಿದ್ದ ಬ್ಯಾಗ್ ಕಳವಾಗಿದೆ. ಗೋವಾದ ಮಡಗಾಂವ್ ರೈಲು ನಿಲ್ದಾಣದಲ್ಲಿ ಹತ್ತು ನಿಮಿಷಗಳ ಕಾಲ ರೈಲು ನಿಲ್ಲಿಸಿದ್ದ ವೇಳೆ ಮೂಲ್ಕಿ ಮೂಲದ ರಜನಿ ಶೆಟ್ಟಿ ಹಾಗೂ ಸುರತ್ಕಲ್ ಮೂಲದ ವಿನಯ ಶೆಟ್ಟಿ ಎಂಬಿಬ್ಬರ ಬ್ಯಾಗ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಬೋಗಿ ಸಂಖ್ಯೆ ಎಸ್-3 ರಲ್ಲಿ ಬಾಗಿಲ ಪಕ್ಕದ ಸೀಟಿನಲ್ಲಿ ಮುಂಜಾನೆ ಸುಮಾರು 4 ಗಂಟೆಗೆ ಮಲಗಿದ್ದ ಮಹಿಳೆಯ ಬ್ಯಾಗ್ನ್ನು ಎಳೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಎಸ್-3 ರಲ್ಲಿ ಮಲಗಿದ್ದ ಮಹಿಳೆ ಬ್ಯಾಗ್ ಎಳೆಯುವ ವೇಳೆ ಜೋರಾಗಿ ಬೊಬ್ಬೆ ಹಾಕಿ ಆತನ ಹಿಂದೆ ಓಡಿ ಹೋಗಿ ಹಿಡಿಯಲು ಪ್ರಯತ್ನ ಮಾಡಿದರಾದರೂ ಸಾಧ್ಯವಾಗಿಲ್ಲ. ಇನ್ನು ಎಸ್-5 ಬೋಗಿಯಲ್ಲಿದ್ದ ಮಹಿಳೆಯ ಬ್ಯಾಗನ್ನು ಕೂಡ ಇದೇ ಮಾದರಿಯಲ್ಲಿ ಎಗರಿಸುವ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರಚಿದಾಗ, ಹತ್ತಿರದ ಯುವಕರು ನೋಡುತ್ತಿದ್ದಂತೆಯೇ ಕಳ್ಳ ರೈಲಿನಿಂದ ಹಾರಿ ಓಡಿ ನಿಲ್ದಾಣದ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಮಹಿಳೆಯರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಪೊಲೀಸರಿಗೆ ಆನ್ಲೈನ್ ಮೂಲಕ ದೂರು ನೀಡಲಾಗಿದ್ದು, ಸುಮಾರು ಒಂದು ಗಂಟೆಗಳ ಬಳಿಕ ಪ್ರಕರಣದ ಬಗ್ಗೆ ರೈಲ್ವೇ ಇಲಾಖೆಯ ಟಿ.ಟಿ.ಸಿ.ಯವರು ಮಾಹಿತಿ ಪಡೆದಿದ್ದಾರೆ. ತದನಂತರ ರೈಲ್ವೇ ಪೊಲೀಸರು ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆಯು ರೈಲು ಪ್ರಯಾಣಿಕರಲ್ಲಿ, ವಿಶೇಷವಾಗಿ ಒಂಟಿಯಾಗಿ ಅಥವಾ ರಾತ್ರಿ ವೇಳೆ ಪ್ರಯಾಣಿಸುವ ಮಹಿಳೆಯರಲ್ಲಿ ಸುರಕ್ಷತೆಯ ಬಗೆಗಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಚಲಿಸುವ ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಮತ್ತು ಭದ್ರತಾ ಸಿಬ್ಬಂದಿಯ ಗಸ್ತನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ತುರ್ತು ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ಪ್ರಯಾಣಿಕರು ಕೂಡ ಮುಂಜಾನೆಯ ಅವಧಿಯಲ್ಲಿ ಹಾಗೂ ಬಾಗಿಲುಗಳ ಬಳಿ ಆಸನವಿದ್ದಾಗ ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವುದು ಅತ್ಯಗತ್ಯವಾಗಿದೆ.




