ಮುಂಬಯಿ/ಮೂಡಬಿದ್ರೆ: ಸರಳ ಸಜ್ಜನಿಕೆಯ ವ್ಯಕ್ತಿತ್ವದ, ಎಲ್ಲರಿಗೂ ಸದಾ ಪರೋಪಕಾರವನ್ನು ಬಯಸುತ್ತಿದ್ದ ಗುಣವಂತ, ಮುಂಬಯಿ ಭಾಯಂದರ್ ನಿವಾಸಿ ಹಾಗೂ ಕಡಂದಲೆ ಬೋಳಂತೇಮನೆ ಮೂಲದ ಶ್ರೀ ಕೃಷ್ಣ ಶೀನ ಸಾಲಿಯಾನ್ (58 ವರ್ಷ) ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಅಪಾರ ಬಂಧು-ಮಿತ್ರರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಮೃತರು ಮುಂಬಯಿ ಜಿಮ್ಖಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಈ ವರ್ಷದ ಮಧ್ಯಭಾಗದಲ್ಲಿ ನಿವೃತ್ತಿ ಹೊಂದುವವರಿದ್ದರು. ಮೃತರು ಓರ್ವ ಮಗ ಕೌಶಿಕ್ ಸಾಲಿಯಾನ್, ಪತ್ನಿ ಸುಜಾತಾ ಸಾಲಿಯಾನ್, ಸಹೋದರ ಶೇಖರ ಸಾಲಿಯಾನ್, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಕೃಷ್ಣ ಸಾಲಿಯಾನ್ ಅವರು ಶ್ರೀ ರಜಕ ಸಂಘ ಮುಂಬಯಿ ಹಾಗೂ ಕೋಟೆ ಮುಂಬಯಿ ವಿಭಾಗದ ಕನ್ನಡ ಕಲಾ ಸಮಾಜದ ಅಜೀವ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ತಮ್ಮ ಅಮೂಲ್ಯವಾದ ಸಮಯವನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಪಾರ ಸೇವೆ ಸಲ್ಲಿಸುತ್ತಾ ಬಂದವರಾಗಿದ್ದರು. ಇವರ ಅಕಾಲಿಕ ಅಗಲಿಕೆಗೆ ಶ್ರೀ ರಜಕ ಸಂಘದ ಅಧ್ಯಕ್ಷರಾದ ಸಿಎ ವಿಜಯ ಕುಂದರ್, ಕನ್ನಡ ಕಲಾ ಸಮಾಜದ ಕಾರ್ಯದರ್ಶಿ ವಸಂತ್ ಬುನ್ನಾನ್, ನಾಲಾಸೋಪಾರದ ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಸ್ಥಾಪಕ ಮುಖ್ಯಸ್ಥ ಸದಾಶಿವ ಕರ್ಕೇರಾ, ಬೊಂಬೆ ಜಿಮ್ಖಾನದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಅಪಾರ ತುಳು-ಕನ್ನಡಿಗರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಮತ್ತು ಅವರ ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.




