
ದೇಶದ ಪ್ರತಿಷ್ಠಿತ ಮಲ್ಟಿ-ಸ್ಟೇಟ್ ಶೆಡ್ಯೂಲ್ಡ್ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನಲ್ಲಿ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ಹಿರಿಯ ಸಿಬ್ಬಂದಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಗೋರೆಗಾವ್ ಪೂರ್ವದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಬ್ಯಾಂಕಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಜೂನ್ 30, 2026 ರಂದು ನಿವೃತ್ತರಾದ ಸಿಬ್ಬಂದಿ ಶ್ರೀ ಹರೀಶ್ ಜಿ. ಕೋಟ್ಯಾನ್ ಮತ್ತು ಶ್ರೀ ಉದಯ ಆರ್. ಅಂಚನ್ ಅವರಿಗೆ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜೆ. ಸುರ್ವಣರು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು ಹಾಗೂ ಅವರ ಕಠಿಣ ಪರಿಶ್ರಮ, ನಿಷ್ಠೆ ಹಾಗೂ ಕೊಡುಗೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಈ ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ನ್ಯಾಯವಾದಿ ಶ್ರೀ ಸೋಮನಾಥ್ ಬಿ. ಅಮೀನ್, ನಿರ್ದೇಶಕರುಗಳಾದ ಶ್ರೀ ನಿರಂಜನ್ ಎಲ್. ಪೂಜಾರಿ ಮತ್ತು ಶ್ರೀ ಗಣೇಶ್ ಡಿ. ಪೂಜಾರಿ ಉಪಸ್ಥಿತರಿದ್ದು ನಿವೃತ್ತ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.
ಅಲ್ಲದೆ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆದ ಶ್ರೀ ವಿದ್ಯಾನಂದ ಎಸ್. ಕರ್ಕೇರ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿನೇಶ್ ಬಿ. ಸಾಲ್ಯಾನ್, ಮಹಾಪ್ರಬಂಧಕರಾದ ಶ್ರೀ ಜನಾರ್ಧನ ಎಂ. ಪೂಜಾರಿ ಹಾಗೂ ಶ್ರೀಮತಿ ಮಂಜುಳಾ ಎನ್. ಸುವರ್ಣ, ಮತ್ತು ಉಪ ಮಹಾಪ್ರಬಂಧಕರು, ಸಹಾಯಕ ಮಹಾಪ್ರಬಂಧಕರು ಸೇರಿದಂತೆ ಬ್ಯಾಂಕಿನ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,
ಸೇವಾ ನಿವೃತ್ತಿ ಹೊಂದಿದ ಶ್ರೀ ಹರೀಶ್ ಜಿ. ಕೋಟ್ಯಾನ್ ಮತ್ತು ಶ್ರೀ ಉದಯ ಆರ್. ಅಂಚನ್ ಅವರು ತಮ್ಮ ಸುದೀರ್ಘ ಸೇವಾ ಅವಧಿಯ ಮಧುರ ಸ್ಮೃತಿಗಳನ್ನು ಹಂಚಿಕೊಳ್ಳುತ್ತಾ, ತಮ್ಮ ವೃತ್ತಿಜೀವನದುದ್ದಕ್ಕೂ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳಿಂದ ದೊರೆತ ಪ್ರೋತ್ಸಾಹ, ಪ್ರೀತಿ ಹಾಗೂ ಬೆಂಬಲಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಎಂಪ್ಲಾಯೀಸ್ ಯೂನಿಯನ್ ಮತ್ತು ಸ್ಟಾಫ್ ವೆಲ್ಫೇರ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಸನ್ಮಾನಿತರಿಗೆ ಮುಂದಿನ ನಿವೃತ್ತ ಜೀವನವು ಆರೋಗ್ಯಕರ, ಸುಖಕರ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸಿ ಜಂಟಿಯಾಗಿ ಶುಭ ಕೋರಿದರು.




