
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ನಿವಾರಣೆಗಾಗಿ ಭಾನುವಾರ ನಡೆದ ಭಕ್ತರ ಸಭೆಯಲ್ಲಿ ಆಗಸ್ಟ್ 31ರಂದು ಮುಷ್ಟಿ ಕಾಣಿಕೆ ಸಮರ್ಪಿಸಲು ನಿರ್ಣಯಿಸಲಾಗಿದೆ.
ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಜಾತ್ರಾ ಮಹೋತ್ಸವದಂದು ರಥದ ಅವಘಡ ಹಿನ್ನೆಲೆ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನ ಚಿಂತನೆ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಚಿಂತನೆಯಲ್ಲಿ ಪ್ರಸ್ತಾಪಗೊಂಡ ಧಾರ್ಮಿಕ ಹಾಗೂ ಅಭಿವೃದ್ಧಿ ಸಂಬಂಧಿತ ವಿಷಯಗಳ ಕುರಿತಾಗಿ ಮುನ್ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸುವ ಉದ್ದೇಶದಿಂದ ಮೂಲ್ಕಿ ಸೀಮೆಯ ಭಕ್ತರ ಸಮಲೋಚನೆ ಸಭೆಯು ಭಾನುವಾರ ಬಪ್ಪನಾಡು ದೇವಸ್ಥಾನ ಜ್ಞಾನ ಮಂದಿರದಲ್ಲಿ ನಡೆಯಿತು.
ಅಗಸ್ಟ್ 20 ಮತ್ತು 21 ರಂದು ಕೇರಳದ ವಾಸು ತಜ್ಞರಾದ ಚಿತ್ರಬಾನು ನಂಬೂದಿರಿ ಕ್ಷೇತ್ರದ ವಾಸ್ತುಗಳ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 31 ರಂದು ಸಮಗ್ರ ಅಭಿವೃದ್ಧಿಗಾಗಿ ಬೆಳ್ಳಿಗೆ 9:00ಗೆ ಮುಷ್ಟಿ ಕಾಣೆಕೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.




ಸಮಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಲ್ಕಿ ಸೀಮೆಯ ಅರಸರು ಮತ್ತು ಕ್ಷೇತ್ರದ ಅನುವಂಶಿಕ ಮೋಕ್ತೆಸರ ದುಗ್ಗಣ್ಣ ಸಾವಂತರು ಮಾತನಾಡಿ ಎಲ್ಲಾ ಸಮಾಜದ ಮುಖಂಡರನ್ನು ಒಗ್ಗೂಡಿಸಿ ಅಭಿವೃದ್ಧಿ ಸಮಿತಿ ಮುಖಾಂತರ ಕ್ಷೇತ್ರದ ಜೀರ್ಣೋದ್ಧಾರ ನಡೆಯಬೇಕಾಗಿದೆ. ಸಮಗ್ರ ಅಭಿವೃದ್ಧಿಗೆ ಸುಮಾರು 20 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.
ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಯದು ನಾರಾಯಣಶೆಟ್ಟಿ,ಕ್ಷೇತ್ರದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರದ ಬಗ್ಗೆ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ, ವೇದಮೂರ್ತಿ ವಾದಿರಾಜ ಉಪಾಧ್ಯಾಯ, ಮುಲ್ಕಿ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅತುಲ್ ಕುಡ್ವ, ಮೊಗವೀರ ಮುಂದಾಳು ಅಶೋಕ್ ಸುವರ್ಣ ಮುಂಬೈ, ವಿಶ್ವನಾಥ ಬಪ್ಪನಾಡು, ಉದಯ್ ಪೈ ಮತ್ತಿತರರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ನಿರೂಪಿಸಿದರು, ದೇವಳದ ಕಾರ್ಯನಿರ್ವಾಹಣಾಧಿಕಾರಿ ಶ್ವೇತ ಪಳ್ಳಿ ಸ್ವಾಗತಿಸಿದರು.ಸರ್ವ ಸಮಾಜದ ಗೌರವಾನ್ವಿತ ಗುರಿಕಾರರು, ಹಾಗೂ ಗುತ್ತು ಬಾವ ಮನೆತನದ ಪ್ರತಿನಿಧಿಗಳು, ದೇವಸ್ಥಾನ ಹಾಗೂ ದೇವಸ್ಥಾನಗಳ ಆಡಳಿತ ಮಂಡಳಿ, ಸಮಿತಿಯ ಸದಸ್ಯರು ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.




