
ಮೀರಾ-ಭಾಯಂದರ್: ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೀರಾ-ಭಾಯಂದರ್ ಶಾಖೆಯು ಆಗಸ್ಟ್ 17ರಂದು, ಭಾನುವಾರ ಮೀರಾರೋಡ್ ಪೂರ್ವದ ಮಾಲಿ ಗ್ರಾಂಡ್ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ‘ಆಟಿಡೊಂಜಿ ಕೂಟ’ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಆರಂಭವು ಗಣಪತಿ ಸ್ತುತಿಯ ನೃತ್ಯದೊಂದಿಗೆ ಆಕರ್ಷಕವಾಗಿತ್ತು. ನಂತರ ದೀಪ ಬೆಳಗುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ, ಮಂಡಳಿಯ ಉಪಾಧ್ಯಕ್ಷ ಬಿ.ಕೆ. ಪ್ರಕಾಶ್, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದಾಮೋದರ್ ಪುತ್ರನ್, ಮತ್ತು ಜೊತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್ ಮುಂತಾದ ಗಣ್ಯರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಮಾರಂಭದಲ್ಲಿ ಮಂಡಳಿಯ ಗೌರವ ಕೋಶಾಧಿಕಾರಿ ದೇವರಾಜ್ ಕುಂದರ್ ಮತ್ತು ‘ಮೊಗವೀರ ಮಾಸಿಕ’ದ ಪ್ರಬಂಧಕ ಪ್ರಮೋದ್ ಪುತ್ರನ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕರ್ಕೇರ ಮತ್ತು ಮೀರಾ-ಭಾಯಂದರ್ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಅಮೀನ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಮೀರಾ-ಭಾಯಂದರ್ ಶಾಖೆಯ ಸಂಯೋಜಕ ಪ್ರಜ್ವಲ್ ಸಾಲ್ಯಾನ್ ಮಾತನಾಡಿ, ವಸೈ-ನಾಯ್ಗಾಂವ್-ವಿರಾರ್ ಪ್ರದೇಶದ ಐದು ಆಸ್ಪತ್ರೆಗಳಲ್ಲಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಇದರಿಂದ ಮೊಗವೀರ ಸಮುದಾಯದವರಿಗೆ ಉಚಿತ ಚಿಕಿತ್ಸೆ ಸಿಗಲಿದ್ದು, ಈ ಕುರಿತು ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಅಜಿತ್ ಸುವರ್ಣ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡಳಿಯ ಜೊತೆ ಕಾರ್ಯದರ್ಶಿ ದಯಾವತಿ ಸುವರ್ಣ, ಟ್ರಸ್ಟಿ ಪುರುಷೋತ್ತಮ್ ಕರ್ಕೇರ, ಲೀಗಲ್ ಕಮಿಟಿ ಕಾರ್ಯಾಧ್ಯಕ್ಷ ವರದರಾಜ ಶ್ರೀಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಕಿರಣ್ ಮೆಂಡನ್, ಮಹೇಂದ್ರ ಕಾಂಚನ್, ಸಂತೋಷ್ ಕೋಟ್ಯಾನ್, ಮತ್ತು ಮಂಡಳಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಿವೇದಿತ ಸಾಲಿಯನ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖೆಯ ಅಧ್ಯಕ್ಷ ಗಂಗಾಧರ್ ಬಂಗೇರ, ಸಂಘಟನೆಯ ಸ್ಥಾಪಕ ಹಿರಿಯರ ತ್ಯಾಗವನ್ನು ಸ್ಮರಿಸಿದರು. ಮೀರಾ-ಭಾಯಂದರ್ನಲ್ಲಿ ಮಿನಿ ಎಜುಕೇಶನ್ ಕ್ಯಾಂಪಸ್ ಪ್ರಾರಂಭಿಸುವ ತಮ್ಮ ಉದ್ದೇಶವನ್ನು ಅವರು ತಿಳಿಸಿ, ಇದು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಪ್ರಜ್ವಲ್ ಸಾಲ್ಯಾನ್ ಅವರ ‘ಯಶೋದೇವ್ ಫೌಂಡೇಶನ್’ ನ ಪ್ರಾಯೋಜಕತ್ವದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ, ಉಪಸ್ಥಿತರಿದ್ದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನೂ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಮಹಿಳಾ ವಿಭಾಗದ ಸದಸ್ಯರು ಮತ್ತು ಮಕ್ಕಳು ಪ್ರದರ್ಶಿಸಿದ ಜಾನಪದ ನೃತ್ಯಗಳು ಗಮನ ಸೆಳೆದವು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಅಮೀನ್ ಮತ್ತು ಅವರ ಬಳಗದ ‘ಆಟಿ ಕಳಂಜ’ ಕಾರ್ಯಕ್ರಮವು ವಿಶೇಷ ಮೆರುಗು ನೀಡಿತು.
ಮೀರಾ-ಭಾಯಂದರ್ ಶಾಖೆಯ ಕೋಶಾಧಿಕಾರಿ ರವಿ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಅಮೀನ್, ದೋಂಬಿವಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಮಯಂತಿ ಕೋಟ್ಯಾನ್, ನಾಯಿಗಾವ್-ವಿರಾರ್ ಶಾಖೆಯ ವೇದ ಸಾಲ್ಯಾನ್, ಮತ್ತು ವಸಾಯಿ ತಾಲೂಕಿನ ವಂದನಾ ಸಾಲಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೃತಾ ಸಾಲ್ಯಾನ್ ಮತ್ತು ಶೋಭಾ ರವಿರಾಜ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಅಮಿತಾ ಶ್ರೀಯಾನ್ ಪ್ರತಿಭಾ ಪುರಸ್ಕಾರದ ನಿರ್ವಹಣೆಯನ್ನು ನೋಡಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಆಟಿ ತಿಂಗಳ ಹಾಗೂ ತುಳುನಾಡಿನ ವಿಶೇಷ ಖಾದ್ಯಗಳಾದ ಪ್ರೀತಿ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು. ಗಂಗಾಧರ್ ಬಂಗೇರ ಅವರ ಮುಂದಾಳತ್ವದಲ್ಲಿ, ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರ ಪರಿಶ್ರಮದಿಂದ ಈ ಎರಡು ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು.




