30.5 C
Mumbai
June 8, 2026
Mumbai News Kannada
ಸುದ್ದಿ

ಅನಿತಾ ಪಿ. ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ





ಧರ್ಮಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶಾಂತಿರಾಜ ಕಾಲೋನಿ ಪುಚ್ಚಮೊಗರು (ರಿ.) ಇವರ ವತಿಯಿಂದ ಆಗಸ್ಟ್ 27ರ ಗಣೇಶ ಚತುರ್ಥಿಯ ಪ್ರಯುಕ್ತ ಭವ್ಯವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಪ್ರತಿಭಾವಂತ ಕವಯತ್ರಿ, ಕಥೆಗಾರ್ತಿ, ಅಂಕಣಕಾರ್ತಿ ಅನಿತಾ ಪಿ. ತಾಕೊಡೆ ಅವರಿಗೆ ಭಾವಪೂರ್ಣ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು.

ಸಮಾಜ ಸೇವಕರಾದ ಯೋಗೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಊರಿನ ಪ್ರತಿಷ್ಠಿತ ಗಣ್ಯರು ಹಾಗೂ ಗಣಪತಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು. ಅರ್ಪಿತಾ ಶೆಟ್ಟಿ ಅವರ ಧಾರ್ಮಿಕ ಉಪನ್ಯಾಸ ಸಭಿಕರನ್ನು ಆಕರ್ಷಿಸಿತು. ಊರಿನ ಸದಸ್ಯರ ಒಗ್ಗೂಡುವಿಕೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು, ಸಮಿತಿಯ ಕಳೆದ 23 ವರ್ಷಗಳ ಸತತ ಸೇವೆಯ ಪರಂಪರೆಗೂ ಅದ್ಭುತ ಪೂರಕವಾಯಿತು. ಪ್ರತಿ ವರ್ಷ ಗಣೇಶೋತ್ಸವದ ಅಂಗವಾಗಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಸಮಿತಿ ಸಮಾಜದಲ್ಲಿ ಅಸಾಮಾನ್ಯ ಪ್ರೇರಣೆಯ ಕೇಂದ್ರವಾಗಿದೆ.

ಅನಿತಾ ಪಿ. ತಾಕೊಡೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದವರು. ಕವಯತ್ರಿ, ಕಥೆಗಾರ್ತಿ, ಅಂಕಣಕಾರ್ತಿ ಎಂಬ ನಾನಾ ಮುಖಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ ಇವರು, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‌ನೊಂದಿಗೆ ಪಡೆದು, ಎಂ.ಬಿ. ಕುಕ್ಯಾನ್ ಬಂಗಾರದ ಪದಕಕ್ಕೆ ಅರ್ಹರಾದರು. 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಸಾಹಿತ್ಯಲೋಕದ ಗಮನ ಸೆಳೆದರು.

ಇವರ ಒಟ್ಟು ಎಂಟು ಕೃತಿಗಳು ಲೋಕಾರ್ಪಣೆಗೊಂಡಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನ ಪಡೆದಿವೆ. “ಸುವರ್ಣಯುಗ” ಎಂಬ ಶೋಧಪ್ರಬಂಧವನ್ನು ಜಯ ಸಿ. ಸುವರ್ಣರ ಕುರಿತು ಪಿಎಚ್.ಡಿ ಕೋರ್ಸ್ ವರ್ಕ್ ಸಲುವಾಗಿ ಸಿದ್ಧಪಡಿಸಿದ ಇವರು, ಅದಕ್ಕಾಗಿ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧಕಿ ಡಾ. ಲೀಲಾ ಬಿ. ನೀಡಿದ “ಶೋಧಸಿರಿ” ಪುರಸ್ಕಾರ ಹಾಗೂ ಡಾ. ವಿಶ್ವನಾಥ ಪ್ರತಿಷ್ಠಾನದಿಂದ “ವಿಕಾಸ ಪುಸ್ತಕ” ಬಹುಮಾನ ಪಡೆದಿದ್ದಾರೆ.

ಇವರ “ನಿವಾಳಿಸಿಬಿಟ್ಟ ಕೋಳಿ” ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 2022ನೇ ಸಾಲಿನ ಕೆ. ವಸುದೇವಾಚಾರ್ಯ ದತ್ತಿ ಪ್ರಶಸ್ತಿ, ಹಾಗೆಯೇ ಮಾಣಿಕ್ಯ ಪ್ರಕಾಶನ, ಹಾಸನದಿಂದ “ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ” ದೊರೆತಿದೆ. “ಮೋಹನ ತರಂಗ” ಕೃತಿಗೆ 2019-20ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ದೊರೆತಿದೆ.

“ಅಂತರಂಗದ ಮೃದಂಗ” ಕವನ ಸಂಕಲನಕ್ಕೆ ಜಗಜ್ಯೋತಿ ಕಲಾವೃಂದ, ಮುಂಬಯಿ (ರಿ.) ವತಿಯಿಂದ “ಶ್ರೀಮತಿ ಸುಶೀಲಾ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ” ಹಾಗೂ “ಜನಸ್ಪಂದನ ಟ್ರಸ್ಟ್ (ರಿ.), ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಇವರಿಂದ “ಅಲ್ಲಮ ಸಾಹಿತ್ಯ ಪ್ರಶಸ್ತಿ” ದೊರೆತಿದೆ. ಇತ್ತೀಚೆಗೆ, 2025ರಲ್ಲಿ ಚೆಂಬೂರು ಕರ್ನಾಟಕ ಸಂಘ (ರಿ.) ವತಿಯಿಂದ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ” ಲಭಿಸಿದೆ. ಅದೇ ವರ್ಷ, ಇವರ “ಮೇಣಕ್ಕಂಟಿದ ಬತ್ತಿ” ಹೊಸ ಕವನ ಸಂಕಲನದ ಹಸ್ತಪ್ರತಿಗೆ “ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ” ದೊರೆತಿದೆ.

ಸಾಹಿತ್ಯ ಕ್ಷೇತ್ರದ ಸಾಧನೆಗಳ ಜೊತೆಗೆ, ಇವರು ಪ್ರಸ್ತುತ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಸಮಿತಿಯ ಗೌರವದಿಂದ ಅನಿತಾ ಪಿ. ತಾಕೊಡೆ ಅವರಿಗೆ ಲಭಿಸಿದ ಈ ಹುಟ್ಟೂರ ಸನ್ಮಾನವು, ಅವರ ಕೃತಿಗಳ ಬಲ, ಸಾಹಿತ್ಯ ಸೇವೆಯ ಮೌಲ್ಯ ಹಾಗೂ ಮುಂದಿನ ಸಂಶೋಧನಾ ಕಾರ್ಯಗಳಿಗೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.



Related posts

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಗೆ ಸ್ಪಂದನೆ : ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಆರಂಭ

Mumbai News Desk

ಕರ್ನಾಟಕ : ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್

Mumbai News Desk

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಅಮೃತ ವರ್ಷಿಣಿ ” ಉದ್ಘಾಟನೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಾಸ್ಯಾ ಶಂಕರ ಶೆಟ್ಟಿ ಶೇ. 90.80, ಲಿಖಿತ್ ಶಂಕರ್ ಶೆಟ್ಟಿಗೆ ಶೇ. 85 ಅಂಕ.

Mumbai News Desk

ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವರ್ಲ್ಡ್ ಪೇಜೆಂಟ್ 2024, ಪ್ರಭಾ ಸುವರ್ಣ ಟೂರಿಸಂ ಎಂಬಾಸಿಡರ್ ಆಗಿ ಆಯ್ಕೆ

Mumbai News Desk

ಕತಾರ್ ಬಂಟರ ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದಿಂದ ಗೌರವ. 

Mumbai News Desk