
ಸಾಲ ಪಡೆಯುವಾಗ ಇರುವ ಪ್ರಾಮಾಣಿಕತೆ ಅದನ್ನು ಹಿಂದಿರುಗಿಸುವಾಗ ಇರುವುದಿಲ್ಲ: – ಜಿ.ಟಿ. ಆಚಾರ್ಯ
ಮುಂಬೈ, ಸೆಪ್ಟೆಂಬರ್ 20: ಸಹಕಾರಿ ಸಂಸ್ಥೆಗಳ ಮುಖ್ಯ ಉದ್ದೇಶವೇ ಸದಸ್ಯರು ಪರಸ್ಪರ ಸಹಾಯ ಮಾಡಿಕೊಳ್ಳುವುದು. ಇದರ ಸದುಪಯೋಗವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕು ಎಂದು ದಹಿಸರ್ ಪೂರ್ವದ ಗೋಕುಲಾನಂದ ಹೊಟೇಲ್ ಸಭಾಂಗಣದಲ್ಲಿ ಸೆಪ್ಟೆಂಬರ್ 14ರಂದು ನಡೆದ ಶ್ರೀ ಬಾಲಾಜಿ ಕೋ-ಆಪರೇಟಿವ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ಜಿ.ಟಿ. ಆಚಾರ್ಯ ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸೊಸೈಟಿಯನ್ನು ನಡೆಸುವುದೇ ಕಷ್ಟವಾಗಿದೆ. ಸಾಲ ತೆಗೆದುಕೊಳ್ಳುವಾಗ ಇರುವ ಪ್ರಾಮಾಣಿಕತೆ ಅದನ್ನು ಹಿಂದಿರುಗಿಸುವಾಗ ಇರುವುದಿಲ್ಲ. ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಸಾಲದ ಕಂತನ್ನು ಕಟ್ಟಿದರೆ, ಹೆಚ್ಚಿನ ಲಾಭಾಂಶವನ್ನು ಸದಸ್ಯರಿಗೆ ಹಿಂದಿರುಗಿಸಬಹುದು. ಸೊಸೈಟಿಯ ಪ್ರಗತಿಗೆ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದರು.
ದಹಿಸರ್ ಗೋಕುಲಾನಂದ ಹೊಟೇಲ್ನ ಮಾಲೀಕರಾದ ಕೃಷ್ಣ ವಿ. ಆಚಾರ್ಯ ಹಾಗೂ ಹಿರಿಯ ಸದಸ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಸಭೆಯು ಆರಂಭವಾಯಿತು. ಕಾರ್ಯದರ್ಶಿ ಲತಾ ಆಚಾರ್ಯ ಅವರು 35ನೇ ವಾರ್ಷಿಕ ವರದಿಯನ್ನು, ಮತ್ತು ಕೋಶಾಧಿಕಾರಿ ಮಾಧವ ಎಸ್. ಆಚಾರ್ಯ ಅವರು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 2025-26ರಿಂದ 2030-31ರ ಅವಧಿಗೆ ಮುಂದಿನ ಐದು ವರ್ಷಗಳ ನೂತನ ನಿರ್ದೇಶಕ ಮಂಡಳಿಯನ್ನು ಸಭೆಗೆ ಪರಿಚಯಿಸಲಾಯಿತು. ನೂತನ ಮಂಡಳಿಯಲ್ಲಿ ಜಿ.ಟಿ. ಆಚಾರ್ಯ – ಕಾರ್ಯಾಧ್ಯಕ್ಷರು, ಅರುಣ್ ಪಿ. ಆಚಾರ್ಯ – ಉಪಕಾರ್ಯಾಧ್ಯಕ್ಷರು, ಉಪೇಂದ್ರ ಎ. ಆಚಾರ್ಯ – ಕಾರ್ಯದರ್ಶಿ, ಮಾಧವ ಎಸ್. ಆಚಾರ್ಯ – ಕೋಶಾಧಿಕಾರಿ; ನಿರ್ದೇಶಕರುಗಳಾಗಿ ಕೆ.ಪಿ. ಚಂದ್ರಯ ಆಚಾರ್ಯ, ಸಿ.ಎ. ಪ್ರಭಾಕರ ಬಿ. ಶೆಟ್ಟಿ, ರಮೇಶ್ ಬಿ. ಆಚಾರ್ಯ, ಗಣೇಶ್ ಕುಮಾರ್ ಕೆ, ಚಂದ್ರಕಾಂತ ಸೋನಾವನೆ, ಶಮಿತಾ ಪಿ. ಆಚಾರ್ಯ, ಮತ್ತು ಶ್ವೇತಾ ಪಿ. ಆಚಾರ್ಯ ಅವರು ಇದ್ದಾರೆ.
2024-25ನೇ ಸಾಲಿಗೆ ಶೇಕಡ 6ರಷ್ಟು ಡಿವಿಡೆಂಡ್ ಅನ್ನು ಮಂಜೂರು ಮಾಡಲಾಯಿತು. ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಸುಧೀರ್ ಜೆ. ಆಚಾರ್ಯ ಮತ್ತು ಬಾಬುರಾಜ್ ಎಮ್. ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು. ಬಾಹ್ಯ ಲೆಕ್ಕಪರಿಶೋಧಕರಾಗಿ ಮೆ. ಸಂಜಯ್ ಚವ್ಹಾಣ ಮತ್ತು ಅಸೋಸಿಯೇಟ್ಸ್ ಅವರನ್ನು ನೇಮಕ ಮಾಡಲಾಯಿತು.
ಮಹಾಬಲ ಎ. ಆಚಾರ್ಯ, ತುಕಾರಾಮ ಮಡಿವಾಳ, ಶಂಕರ ಕುಂದರ್, ಸದಾನಂದ ಎನ್. ಆಚಾರ್ಯ, ಹರೀಶ್ ಜಿ. ಆಚಾರ್ಯ, ಅರುಣ್ ಪಿ. ಆಚಾರ್ಯ, ಭುಜಂಗ ಆರ್. ಶೆಟ್ಟಿ, ಗಣೇಶಕುಮಾರ್ ಕೆ, ವಿಜಯ ಮುಲ್ಕಿ ಮುಂತಾದ ಸದಸ್ಯರು ಸಲಹೆ-ಸೂಚನೆಗಳನ್ನು ನೀಡಿದರು.
ಕೊನೆಯಲ್ಲಿ, ಕಾರ್ಯದರ್ಶಿ ಉಪೇಂದ್ರ ಎ. ಆಚಾರ್ಯ ಅವರು ಧನ್ಯವಾದ ಸಮರ್ಪಣೆ ಮಾಡಿದರು.




