
ಚಿತ್ರ ವರದಿ: ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ, ಸೆಪ್ಟೆಂಬರ್ 28: ಮಹಾರಾಷ್ಟ್ರದ ಮಣ್ಣಿನಲ್ಲಿ ತುಳುನಾಡಿನ ವೈಭವವನ್ನು ಹೊತ್ತು ಬಂದಂತಿರುವ ಡೊಂಬಿವಲಿ, ನವರಾತ್ರಿಯ ನಾದದಿಂದಲೇ ನಾದಿಸುತ್ತಿದೆ. ಡೊಂಬಿವಲಿಯ ತುಳು-ಕನ್ನಡಿಗರ ಅತ್ಯಂತ ಪ್ರಾಚೀನ ಹಾಗೂ ಶ್ರದ್ಧಾಸ್ಪದ ಸಂಸ್ಥೆಯಾದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ತನ್ನ ವೈಭವದ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ.

ನಿತ್ಯ ಸುರಿಯುವ ಕುಂಭದ್ರೋಣ ಮಳೆಯೂ ಇಲ್ಲಿನ ಭಕ್ತರ ಭಕ್ತಿ ಪ್ರವಾಹವನ್ನು ತಡೆಯಲಾರದು. ಪ್ರತಿ ದಿನ ಸಾವಿರಾರು ಮಂದಿ ಭಕ್ತರು ದೇವಿಯ ದರ್ಶನ ಪಡೆದು ಮಹಾ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. ಮಧ್ಯಾಹ್ನ ಐದುರಿಂದ ಆರು ಸಾವಿರ ಭಕ್ತರು, ರಾತ್ರಿ ಸಹ ಐದುರಿಂದ ಆರು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ದೇವಿಯ ಕೃಪಾಪಾತ್ರರಾಗುತ್ತಿದ್ದಾರೆ.
ಈ ನವರಾತ್ರಿಯ ವೈಭವದ ಹಿಂದೆ ಕಳೆದ 61 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷ ಗೋಪಾಲ ಕೆ. ಶೆಟ್ಟಿ ಹಾಗೂ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿಯವರ ನಿಸ್ವಾರ್ಥ ನೇತೃತ್ವವಿದೆ. ಇವರ ಮಾರ್ಗದರ್ಶನದಲ್ಲಿ ಮಹಿಳಾ ವಿಭಾಗ, ಯುವ ವಿಭಾಗ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಭಕ್ತರು ಜಾತಿ-ಮತ-ಭೇದ ಮರೆತು ಭಕ್ತಿಪರ ಸೇವೆಯಲ್ಲಿ ತೊಡಗಿದ್ದಾರೆ.
ಮಹಿಳಾ ವಿಭಾಗದ ಭಕ್ತೆಯರು ಪ್ರತಿನಿತ್ಯ ದೇವಿಯ ಪೂಜೆಗೆ ಹೂ ಕಟ್ಟುವ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುತ್ತಿದ್ದು, ಯುವ ವಿಭಾಗದ ಉತ್ಸಾಹಿ ಕಾರ್ಯಕರ್ತರು ಅನ್ನಸಂತರ್ಪಣೆ ನಿರ್ವಹಣೆಯನ್ನು ಶ್ರದ್ಧೆ ಮತ್ತು ಶ್ರಮದಿಂದ ಯಶಸ್ವಿಗೊಳಿಸುತ್ತಿದ್ದಾರೆ.

ಮಳೆಯ ಮಂಪರು, ಗಾಳಿಯ ಘೋಷ, ಇವೆಲ್ಲವನ್ನೂ ಲೆಕ್ಕಿಸದೆ ಡೊಂಬಿವಲಿ, ಕಲ್ಯಾಣ್, ವಸಯಿ, ನವಿ ಮುಂಬಯಿ ಹಾಗೂ ಮಹಾನಗರದ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಹರಿದು ಬಂದು ಉತ್ಸವದಲ್ಲಿ ತೊಡಗಿದ್ದಾರೆ. ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು ತಮ್ಮ ತನು-ಮನ-ಧನಗಳಿಂದ ಸಹಕಾರ ನೀಡಿ ಈ ನವರಾತ್ರಿ ಉತ್ಸವವನ್ನು ಇನ್ನಷ್ಟು ವೈಭವಯುತಗೊಳಿಸುತ್ತಿದ್ದಾರೆ.
ದೇವಿಯ ಪುಷ್ಪಲಂಕಾರದ ಮನೋಹರ ವೈಭವ, ಭಜನಾ-ಸಂಕೀರ್ತನೆಯ ಮಧುರ ನಾದ, ಮಂಗಳಾರತಿ ಹೊತ್ತ ಹೊಳೆಯುವ ದೀಪಗಳ ಕಿರಣಗಳು — ಇವೆಲ್ಲ ಸೇರಿ ಡೊಂಬಿವಲಿಯ ನವರಾತ್ರಿಯನ್ನು ಭಕ್ತಿ, ಭಾವ, ಭವ್ಯತೆಗಳ ಸಮನ್ವಯದ ಅಪರೂಪದ ಸಂಭ್ರಮವನ್ನಾಗಿಸಿದೆ.
ಡೊಂಬಿವಲಿಯ ಈ ನವರಾತ್ರಿ ಉತ್ಸವವು ಕೇವಲ ಆಚರಣೆಯಲ್ಲ, ಇದು ಸಮುದಾಯದ ಏಕತೆ, ಭಕ್ತಿಯ ಶ್ರದ್ಧಾ, ಹಾಗೂ ದೈವಾನುಗ್ರಹದ ಸಂಕೇತವಾಗಿ ಕಂಗೊಳಿಸುತ್ತಿದೆ.




