July 23, 2026
Mumbai News Kannada
ಮುಂಬಯಿ

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ







ಸಂಸ್ಥೆಯು ಸಮಾಜ ಸೇವೆಗೆ ಮತ್ತು ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ – ರವಿ ಸನಿಲ್

ಚಿತ್ರ: ಧನಂಜಯ್ ಪೂಜಾರಿ,

​ಡೊಂಬಿವಲಿ, ನ. 9: ಮಹಾರಾಷ್ಟ್ರದ ‘ಮಿನಿ ತುಳುನಾಡು’ ಎಂದೇ ಪ್ರಖ್ಯಾತವಾದ ಡೊಂಬಿವಲಿಯಲ್ಲಿ, ತುಳು ವೆಲ್‌ಫೇರ್ ಎಸೋಸಿಯೇಶನ್‌ನ ಅಂಗ ಸಂಸ್ಥೆಯಾದ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವವು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿ ಸನಿಲ್ ಅವರ ನೇತೃತ್ವದಲ್ಲಿ ಶನಿವಾರ, ನವೆಂಬರ್ 8 ರಂದು ಅತ್ಯಂತ ಭಕ್ತಿ, ಸಡಗರ ಮತ್ತು ಸಂಭ್ರಮದಿಂದ ಸಂಪನ್ನಗೊಂಡಿತು.

​ಬೆಳಿಗ್ಗೆ ವಿವಿಧ ಸಂಘ-ಸಂಸ್ಥೆಗಳ ಮಹಿಳಾ ವಿಭಾಗದ ಪದಾಧಿಕಾರಿಗಳಾದ ​ಕರ್ನಾಟಕ ಸಂಘ, ಡೊಂಬಿವಲಿಯ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಎ. ಶೆಟ್ಟಿ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೃಷ್ಣ ಎಮ್. ಶೆಟ್ಟಿ, ​ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ, ಡೊಂಬಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕುಶಾ ಆರ್. ಸನಿಲ್, ​ಕುಲಾಲ ಸಂಘ, ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಚಿತಾ ಡಿ. ಬಂಜನ್, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಎಸ್. ಶೆಟ್ಟಿ, ​ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಶ್ರೀಮತಿ ಸುಧಾ ಎಚ್. ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಶುಭಾರಂಭ ಮಾಡಿದರು.

​ಬೆಳಿಗ್ಗೆ 8.30 ರಿಂದ ಸಂಜೆ 6.30 ರ ತನಕ, ಒಟ್ಟು 11 ಭಜನಾ ತಂಡಗಳು ಪಾಲ್ಗೊಂಡು ದಿನವಿಡೀ ನಿರಂತರ ಭಜನೆಯನ್ನು ನಡೆಸಿದವು. ಭಜನೆ ಕೇಳುತ್ತಾ ನೆರೆದಿದ್ದ ಭಕ್ತರು ಪಾವನರಾದರು ಮತ್ತು ಡೊಂಬಿವಲಿಯ ಪರಿಸರದಲ್ಲಿ ಭಕ್ತಿಯ ಕಂಪನ ಹರಡಿತು.

​ಸಭಾ ಕಾರ್ಯಕ್ರಮದ ನಂತರ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ತುಳು ವೆಲ್‌ಫೇರ್ ಎಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀ ರವಿ ಸನಿಲ್ ಅವರು, ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಹಿರಿಯರನ್ನು ಸ್ಮರಿಸಿದರು. ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾ ​”ತುಳು ವೆಲ್‌ಫೇರ್ ಎಸೋಸಿಯೇಶನ್ ಸ್ಥಾಪನೆಯಾದಂದಿನಿಂದ ಪ್ರತಿ ಶನಿವಾರ ಇಲ್ಲಿ ಭಜನೆ ನಡೆಯುತ್ತಿದೆ. ಡೊಂಬಿವಲಿ ಪರಿಸರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ನಮ್ಮ ಸಂಸ್ಥೆಯು ಜನಮನ್ನಣೆ ಗಳಿಸಿದೆ. ನಮ್ಮ ಸಂಸ್ಥೆಯು ಸಮಾಜ ಸೇವೆಗೆ ಮತ್ತು ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ. ಮಕ್ಕಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ನಾವು ಉಚಿತ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದೇವೆ ಮತ್ತು ಈಗ ಅದರಲ್ಲಿ 50ಕ್ಕಿಂತ ಅಧಿಕ ಮಂದಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಕ್ರೆಡಿಟ್ ಸೊಸೈಟಿಯ ಮೂಲಕ ಆರ್ಥಿಕವಾಗಿ ಅವಶ್ಯಕತೆ ಇರುವವರು ಅದರ ಪ್ರಯೋಜನ ಪಡೆಯಬೇಕು.” ಎಂದು ರವಿ ಸನಿಲ್ ಅವರು ತಿಳಿಸುತ್ತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

​ಇದೇ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣ್ ಪರಿಸರದ ಖ್ಯಾತ ಉದ್ಯಮಿ ಹಾಗೂ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಶ್ರೀ ಸುಬ್ಬಯ್ಯ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯು ಆರ್ಥಿಕ ನೆರವಿನ ಜೊತೆಗೆ, ಮಾನಸಿಕ ಸದೃಢತೆಗೆ ಭಜನೆಯ ಮೂಲಕ ಕೊಡುಗೆ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಭಜನೆಯಿದ್ದಲ್ಲಿ ವಿಭಜನೆಯಿಲ್ಲ ಎಂಬುದು ಇಂದಿನ ಕಾರ್ಯಕ್ರಮದಿಂದ ಸತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

​ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷರಾದ ಶ್ರೀ ಸೋಮನಾಥ ಪೂಜಾರಿ ಅವರು ಮಾತನಾಡಿ, ಭಜನೆ ಹಾಡಿದಾಗ ಮತ್ತು ಕೇಳಿದಾಗ ಮನಸ್ಸು ಹಿಡಿತಕ್ಕೆ ಬಂದು ಗೊಂದಲಗಳು ನಿವಾರಣೆಯಾಗುತ್ತದೆ. ‘ನಾನು ಮತ್ತು ನಾವು’ ಇದರ ಅಂತರವನ್ನು ಅರಿತಾಗ ನಿಜವಾದ ಜ್ಞಾನೋದಯವಾಗುತ್ತದೆ ಎಂದು ಹೇಳಿದರು.

​ಕರ್ನಾಟಕ ಸಂಘ ಡೊಂಬಿವಲಿಯ ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ರಾಜೀವ್ ಭಂಡಾರಿ ಮಾತನಾಡಿ, ಭಜನೆಯಿಂದ ನಾವು ಕಳೆದುಕೊಂಡ ಸಂತೋಷವನ್ನು ಪುನಃ ಕಂಡುಕೊಳ್ಳಬಹುದು. ಭಜನೆಯು ಮನಸ್ಸನ್ನು ಶುದ್ಧೀಕರಿಸಿ ಆರೋಗ್ಯವಂತರನ್ನಾಗಿ ಮಾಡುತ್ತದೆ. ಸಂಸ್ಥೆಯ ಉತ್ತಮ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

​ವೇದಿಕೆಯ ಮೇಲೆ ​ಕಲ್ಯಾಣ್ ಪರಿಸರದ ಖ್ಯಾತ ಉದ್ಯಮಿ, ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಶ್ರೀ ಸುಬ್ಬಯ್ಯ ಎ. ಶೆಟ್ಟಿ, ​ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷರು ಶ್ರೀ ಸೋಮನಾಥ ಪೂಜಾರಿ, ​ಕರ್ನಾಟಕ ಸಂಘ ಡೊಂಬಿವಲಿಯ ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷರು ಶ್ರೀ ರಾಜೀವ್ ಎಂ. ಭಂಡಾರಿ,
​ಕರ್ನಾಟಕ ಸಂಘ ಡೊಂಬಿವಲಿಯ ಉಪಾಧ್ಯಕ್ಷರು ಶ್ರೀ ದೇವದಾಸ ಕುಲಾಲ್, ​ತುಳು ವೆಲ್ಫೇರ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯ ಗೌರವ ಅಧ್ಯಕ್ಷರು ಶ್ರೀ ಯು. ಲಕ್ಷ್ಮಣ್ ಸುವರ್ಣ,
​ ಅಧ್ಯಕ್ಷರು ಶ್ರೀ ರವಿ ಸನಿಲ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮಣ ಸಿ. ಮೂಲ್ಯ, ಗೌರವ ಕೋಶಾಧಿಕಾರಿ ಶ್ರೀ ಪ್ರಕಾಶ್ ವಿ ಅಮೀನ್, ಉಪಸ್ಥಿತರಿದ್ದರು.

​ಕಾರ್ಯಕ್ರಮವನ್ನು ಶ್ರೀ ವಸಂತ ಸುವರ್ಣ ಅವರು ನಿರೂಪಿಸಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮಣ ಮೂಲ್ಯ ಅವರು ವಂದನಾರ್ಪಣೆ ಸಲ್ಲಿಸಿದರು.

ನಂತರ ಮಹಾಮಂಗಳಾರತಿ ನಡೆಯಿತು. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

​ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಭಾಸ್ಕರ ಕೋಟ್ಯಾನ್, ತಾರಾನಾಥ್ ಜಿ ಕುಂದರ್, ಸುನಂದಾ ಆರ್. ಶೆಟ್ಟಿ, ಗಂಗಾಧರ್ ವಿ ಶೆಟ್ಟಿಗಾರ್, ಮಹಿಳಾ ಮಂಡಳಿಯ ವಿನೋದ ಪುತ್ರನ್, ಶಾಂತಾ ಜೆ. ಅಮೀನ್, ಪ್ರತಿಭಾ ಕರ್ಕೇರಾ, ವಿನೋದ ಶೆಟ್ಟಿ ಹಾಗೂ ತುಳು ವೆಲ್ ಫೇರ್‌ಎಸೋಸಿಯೇಶನ್‌ನ ಸರ್ವ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು



Related posts

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ 16ನೇ ವರ್ಧಂತಿ ಗುರುಮೂರ್ತಿ ಪ್ರತಿಷ್ಠಾಪನೆ.

Mumbai News Desk

ಕುಲಾಲ ಸಂಘ ಮುಂಬೈ – ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಚಂದನ್ ಗೌಡ ಶೇ.89.80  ಅಂಕ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk