ಪಾಕಿಸ್ತಾನ ಪರ ಗೂಢಚರ್ಯೆ ಮಾಡುತ್ತಿದ್ದ ಇಬ್ಬರನ್ನ ಉಡುಪಿ ಪೊಲೀಸರು ಬಂಧಿದ್ದಾರೆ. ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ ಕೆಲಸ ಮಾಡ್ತಿದ್ದ ಈ ಇಬ್ಬರು ನೌಕರರು, ಕೆಲ ಗೌಪ್ಯ ವಿಚಾರಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡ್ತಿದ್ರು ಎನ್ನಲಾಗ್ತಿದೆ. ದೇಶದ್ರೋಹದ ಕೆಲಸ ಮಾಡ್ತಿದ್ದವರ ಬಗ್ಗೆ ಅನುಮಾನ ಮೂಡಿದ್ದು, ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ದೂರು ನೀಡಿದ್ರು. ಈ ದೂರಿನ ಆಧಾರದ ಮೇಲೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಮೂಲದ ರೋಹಿತ್, ಸಂತ್ರಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಭಾರತದವರೇ ಆಗಿದ್ದು, ಹಣಕ್ಕಾಗಿ ಶತ್ರು ರಾಷ್ಟ್ರ ಪಾಕಿಸ್ತಾನ ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳಿ ಸುಷ್ಮಾ ಮೇರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು.
ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆ ಭಾರತೀಯ ನೌಕಾಪಡೆಗೆ ಟಗ್ ಗಳನ್ನು ನಿರ್ಮಿಸಿ ಕೊಡುತ್ತದೆ. ಹಾಗೇ ಖಾಸಗಿಯವರಿಗೂ ನೌಕೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ಕೊಚ್ಚಿನ್ ಶಿಪ್ ಯಾರ್ಡ್ ಮುಖ್ಯ ಕಚೇರಿ ಕೇರಳದಲ್ಲಿದೆ. ಈ ಶಿಪ್ ಯಾರ್ಡ್ನಲ್ಲಿ ಕೆಲಸಕ್ಕೆಂದು ಸೇರಿಕೊಂಡ ಉತ್ತರ ಭಾರತದ ಮೂಲದವರು ದೇಶ ದ್ರೋಹದ ಕೆಲಸ ಮಾಡಿದ್ದಾರೆ.
ಪಾಕಿಸ್ತಾನ ಪರ ಬೇಹುಗಾರಿಕೆ: ಉಡುಪಿ ಪೊಲೀಸರು ಹೇಳಿದ್ದೇನು?
ಪ್ರಕರಣ ಸಂಬಂಧ ರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣ ಸದ್ಯ ದೇಶದ ಭದ್ರತೆ ದೃಷ್ಟಿಯಿಂದ ಗಂಭೀರ ಆತಂಕ ಉಂಟುಮಾಡಿದೆ. ಉಡುಪಿ ಪೊಲೀಸರು ಆರೋಪಿಗಳ ಜಾಲದ ಮೂಲ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.




