ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ
ದುಬೈ: ಯುಎಇ ಬಂಟ್ಸ್ನ 48ನೇ ವರ್ಷದ “ಭಾವೈಕ್ಯ” ಬಂಟರ ಮಹಾಸಮಾಗಮವು ಡಿ. 14 ರಂದು ದುಬೈ ನಗರದ ಶೇಖ್ ಝಯೀದ್ ರಸ್ತೆಯಲ್ಲಿರುವ ಮಿಲೇನಿಯಂ ಪ್ಲಾಜಾ ಡೌನ್ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನದೊಂದಿಗೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಯುಎಇ ಬಂಟ ಬಾಂಧವರಿಂದ ಹಲವು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅವುಗಳೆಂದರೆ:
- ತುಳುನಾಡ ಮಣ್ಣ್ದ ಮಹಿಮೆ (ತುಳುನಾಡಿನ ಮಹಿಮೆ).
- ಭಾರತದ ಸಂಸ್ಕೃತಿಯ ಪಯಣ.
- ಬಂಟೆರ್ನ ಐಸಿರ (ಬಂಟರ ವೈಭವ).
- ಕಿರುಚಿತ್ರ ಸ್ಪರ್ಧೆ.
“ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ
ಪ್ರತಿ ವರ್ಷ ನೀಡಲಾಗುವ ಯುಎಇ ಬಂಟರ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ”ಯನ್ನು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ, ಮಂಗಳೂರು ಕಂಬಳದ ರೂವಾರಿಯೂ ಆಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ, ‘ಡಿವೈನ್ ಸ್ಟಾರ್’ ರಿಷಭ್ ಶೆಟ್ಟಿ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ರವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಚಿತ್ರನಟ ಸಾಯಿಲ್ ರೈ ಮತ್ತು ನಯನ ಶೆಟ್ಟಿಯವರು ಮಾಡಲಿದ್ದಾರೆ.
ಯುಎಇ ಬಂಟ್ಸ್ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುಎಇಯಲ್ಲಿರುವ ಎಲ್ಲ ಬಂಟ ಬಾಂಧವರು 48ನೇ ವರ್ಷದ ಈ ಮಹಾಸಮಾಗಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಿಶೇಷ ಸೂಚನೆ: ಬೆಳಿಗ್ಗೆ ಹತ್ತು ಗಂಟೆಯೊಳಗೆ ಆಗಮಿಸುವವರಿಗೆ ಉಚಿತ ಪ್ರವೇಶ ಮತ್ತು ಎಂಟು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇರುವುದಾಗಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುಎಇ ಬಂಟ್ಸ್ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು 2025ರ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ




