
ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯ. ಇಂತಹ ಕೆಲಸವನ್ನು ನಾಡಿನ ಪ್ರತೀ ಸಂಘಸಂಸ್ಥೆಗಳು ಮಾಡಬೇಕು. ಪ್ರಸ್ತುತ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ದಂತ ವೈದ್ಯರೂ ಸಮಾಜ ಸೇವಕರೂ ಆದ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.
ಅವರು ಡಿ.26ರಂದು ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಇದರ ಸಭಾಂಗಣದಲ್ಲಿ ನಡೆದ ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿಯಾಗಿ ಹಾಗೂ ಸಾಧಕರ ಗೌರವಾರ್ಪಣೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಇಂದು ಗೌರವ ಸ್ವೀಕರಿಸಿದ ಮುರಲೀ ಮೋಹನ್ ರವರು ವೈದ್ಯರಾಗಿ ವೃತ್ತಿ ಜೊತೆಗೆ ಸಮಾಜ ಸೇವೆ ಕೈಗೊಂಡಿದ್ದು, ಇಂದು ಮುಲ್ಕಿಯ ಜನಪ್ರಿಯ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಪಡೆದಿರುವುದು ಅಭಿನಂದನೀಯ. ಇಂತಹ ಸಮಾರಂಭದಲ್ಲಿ ತೆರೆಯ ಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವ ಪತ್ರಿಕಾ ಬಳಗದ ಕಾರ್ಯವು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಡುಬಿದ್ರಿಯ ಆಯುರ್ವೇದಿಕ್ ವೈದ್ಯರಾದ ಡಾ. ಎನ್.ಟಿ. ಅಂಚನ್, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹಷ್ಮರಾಜ್ ಶೆಟ್ಟಿ, ಹಳೆಯಂಗಡಿ ಬೆಂಕಿ ನಾಯಕರು, ಹಳೆಯಂಗಡಿ ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ವಾಸು ಪೂಜಾರಿ ಚಿತ್ರಾಪು, ಉಮೇಶ್ ಮಾತನಾಡಿ, ಉದ್ಯಮಿ ಜಾನ್ ಕ್ವಾಡ್ರಸ್, ನಂದಾ ಪಾಯಸ್ ಹಳೆಯಂಗಡಿ, ಜೆಸೀ ಟಸ್ಸಿನ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಹಬೀಬುಲ್ಲಾ, ವಕೀಲ ರವಿ ಕಾಮತ್, ಅಬ್ದುಲ್ ರಜಾಕ್, ಅಶೋಕ್ ಚಿತ್ರಾಪು, ಜಯರಾಮ್ ಬಿ.ಎಸ್. ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಖ್ಯಾತ ದಂತವೈದ್ಯ ಮುರಲೀ ಮೋಹನ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಅತಿಥಿಗಳನ್ನು ಸತ್ಕರಿಸಲಾಯಿತು.
ಹೊಸ ಅಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ರವಿಚಂದ್ರ ನಿರೂಪಿಸಿದರು.




