ದೇಶಸೇವೆಗೆ ಯುವಜನತೆ ಮುಂದಾಗಲಿ: ಹಳೆಯಂಗಡಿಯಲ್ಲಿ ಸೈನಿಕ ಮೋಹನ್ ದಾಸ್ ವಿ. ಕೋಟ್ಯಾನ್ ಕರೆ
ಹಳೆಯಂಗಡಿ: “ಭಾರತಾಂಬೆಯ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಯುವಜನತೆ ಕೇವಲ ವೃತ್ತಿಜೀವನದತ್ತ ಗಮನ ಹರಿಸದೆ, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯನ್ನು ಸೇರುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಮುಂದಾಗಬೇಕು,” ಎಂದು ಭಾರತೀಯ ಸೇನೆಯ ಹಾಲಿ ಸೈನಿಕ ನಾಯಕ್ ಮೋಹನ್ ದಾಸ್ ವಿ. ಕೋಟ್ಯಾನ್ ಅವರು ಹೇಳಿದರು.
ಅವರು ಸೋಮವಾರ ತೋಕೂರಿನಲ್ಲಿ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಹಾಗೂ ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವರುಗಳ ಮಾರ್ಗದರ್ಶನದಲ್ಲಿ, ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ತಮ್ಮ ಸೇವಾ ಅವಧಿಯ ರೋಚಕ ಅನುಭವಗಳನ್ನು ಹಂಚಿಕೊಂಡ ಅವರು, ಶಿಸ್ತು ಮತ್ತು ದೇಶಪ್ರೇಮ ಯುವಶಕ್ತಿಯ ಮೂಲಮಂತ್ರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುರತ್ಕಲ್ನ ದುರ್ಗಾ ಕನ್ಸ್ಟ್ರಕ್ಷನ್ ಮಾಲೀಕರಾದ ಪ್ರವೀಣ್ ಕುಮಾರ್ ಹಳೆಯಂಗಡಿ ಮಾತನಾಡಿ, “ಗಣರಾಜ್ಯೋತ್ಸವವು ಸಂವಿಧಾನದ ಆಶಯಗಳನ್ನು ಸ್ಮರಿಸುವ ದಿನ. ಇಂತಹ ಸಮಾಜಮುಖಿ ಸಂಘಟನೆಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ದೇಶದ ಘನತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ,” ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ತ್ರಿಷಾ ಎಸ್. ಸುವರ್ಣ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದ ಪ್ರತಿಭಾನ್ವಿತ ವಿದ್ಯಾರ್ಥಿ ಧನಿಶ್ ವಿ. ದೇವಾಡಿಗ ಅವರಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಯೋಗೀಶ್ ಕೋಟ್ಯಾನ್, ಅಧ್ಯಕ್ಷರಾದ ಸುರೇಶ್ ಶೆಟ್ಟಿ ಹಾಗೂ ಮಹಿಳಾ ಕಾರ್ಯದರ್ಶಿ ಶೈಲಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೌರವ ಮಾರ್ಗದರ್ಶಕರಾದ ರಮೇಶ್ ಅಮೀನ್ ಮುಂಬೈ, ಪಡುಪಣಂಬೂರು ಗ್ರಾ.ಪಂ ಸದಸ್ಯರಾದ ಗಣೇಶ್ ದೇವಾಡಿಗ ಪಂಜ ಹಾಗೂ ಸಂತೋಷ್ ಕುಮಾರ್, ಕ್ಲಬ್ನ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಜಗದೀಶ್ ಕುಲಾಲ್ ವಂದನಾರ್ಪಣೆ ಮಾಡಿದರು. ಚಂದ್ರ ಸುವರ್ಣ ನಾಡಗೀತೆ ಹಾಡಿದರು. ನೀಮಾ ಸನಿಲ್ ಮತ್ತು ಹರ್ಷಿತಾ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು. ಸುನಿಲ್ ದೇವಾಡಿಗ ಹಾಗೂ ಗೌತಮ್ ಬೆಲ್ಚೆಡ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.




