
ಹೋಲಿಕೆ, ಅಸೂಯೆ ಹಾಗೂ ಸ್ಪರ್ಧೆ ಎಂಬ ಮೂರು ವಿಚಾರಗಳಿಂದ ದೂರವಿದ್ದರೆ ಮಹಿಳೆಯ ಜೀವನ ಶ್ರೇಷ್ಠವಾಗುತ್ತದೆ :ನಿಶಿತಾ ಸೂರ್ಯಕಾಂತ್ ಸುವರ್ಣ
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ, ಜ. 29:
ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮಲಾಡ್ ಹಾಗೂ ಮಲಾಡ್ ಬಿಲ್ಲವಾಸ್ ಮಹಿಳಾ ವಿಭಾಗದ ಆಶ್ರಯದಲ್ಲಿ ಅರಸಿನ–ಕುಂಕುಮ ಕಾರ್ಯಕ್ರಮವು ಜ. 24ರಂದು ಶನಿವಾರ ಮಲಾಡ್ ಪೂರ್ವದ ಡಪ್ಪರಿ ರಸ್ತೆ, ಪುಷ್ಪಾ ಪಾರ್ಕ್ನ ಉತ್ಕರ್ಷ ವಿದ್ಯಾ ಮಂದಿರದಲ್ಲಿ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮವನ್ನು ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆ ತಾಯಿ, ಸಹೋದರಿ, ಅತ್ತೆ, ಮಗಳು ಎಂಬ ಅನೇಕ ಪಾತ್ರಗಳಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡು ಕುಟುಂಬದ ಸಂತೋಷಕ್ಕಾಗಿ ತನ್ನ ನೋವನ್ನು ಒಳಗೇ ಇಟ್ಟುಕೊಳ್ಳುತ್ತಾಳೆ. ಹೋಲಿಕೆ, ಅಸೂಯೆ ಹಾಗೂ ಸ್ಪರ್ಧೆ ಎಂಬ ಮೂರು ವಿಚಾರಗಳಿಂದ ದೂರವಿದ್ದರೆ ಮಹಿಳೆಯ ಜೀವನ ಇನ್ನಷ್ಟು ಶ್ರೇಷ್ಠವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಸಮಾಜಸೇವಕಿ ಹಾಗೂ ಗೋರೆಗಾಂವ್ ಪೂರ್ವದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಜತೆ ಕಾರ್ಯದರ್ಶಿ ಶಶಿಕಲಾ ಸದಾನಂದ ಕೋಟ್ಯಾನ್ ಮಾತನಾಡಿ, ಅರಸಿನ–ಕುಂಕುಮಕ್ಕೆ ಪವಿತ್ರತೆ ಮತ್ತು ಮಹತ್ವವಿದೆ. ಉತ್ತರಾಯಣ ಪವಿತ್ರ ಕಾಲವಾಗಿದ್ದು, ಮಹಿಳೆ ಮಹಾಲಕ್ಷ್ಮಿಯ ರೂಪವೆಂದು ಅಭಿಪ್ರಾಯಪಟ್ಟರು.
ಸಮಾಜಸೇವಕಿ ಹಾಗೂ ಮಲಾಡ್ ಕನ್ನಡ ಸಂಘದ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ, ಭಂಡಾರಿ ಸೇವಾ ಸಮಿತಿ ಮುಂಬಯಿಯ ಮಾಜಿ ಅಧ್ಯಕ್ಷೆ ಲಲಿತಾ ವಿ. ಭಂಡಾರಿ ಮಾತನಾಡಿ, ಅರಸಿನ–ಕುಂಕುಮ ಕಾರ್ಯಕ್ರಮ ಕೇವಲ ಆಚರಣೆಯಾಗದೆ ಜೀವನದಲ್ಲಿ ನಿತ್ಯ ಅನುಸರಿಸಬೇಕಾದ ಮೌಲ್ಯವಾಗಬೇಕು. ಹಳದಿ–ಕುಂಕುಮ ಮಹಿಳೆಯ ಪವಿತ್ರತೆಯ ಸಂಕೇತವಾಗಿದೆ ಎಂದರು.

ಭಾರತ್ ಬ್ಯಾಂಕ್ ನಿರ್ದೇಶಕ ಸಂತೋಷ್ ಕೆ. ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಸದಾ ಪಾಲಿಸಿಕೊಂಡು ಬರುತ್ತಿದ್ದೇವೆ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ನಗರ ಸೇವಕಿ ದಕ್ಷಾ ಪಟೇಲ್, ನಾರಾಯಣ ಗುರು ಭಜನಾ ಮಂಡಳಿ ಮಲಾಡ್ನ ಜತೆ ಕಾರ್ಯದರ್ಶಿ ಚೇತನ್ ಡಿ. ಪೂಜಾರಿ, ಜತೆ ಖಜಾಂಚಿ ನಳಿನಿ ಪಿ. ಕರ್ಕೇರ, ಕುರಾರ್ ವಿಲೇಜ್ ನಗರ ಸೇವಕಿ ಸುರೇಖಾ ತಾಯಿ ಪರರ್ಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಾಸ್ತು ತಜ್ಞ ರೋಹಿತ್ ನಾರಾಯಣ ಪೂಜಾರಿ ಹಳದಿ–ಕುಂಕುಮದ ಮಹತ್ವವನ್ನು ವಿವರಿಸಿದರು.

ಶೀಲಾ ಮಹಾಬಲ ಪೂಜಾರಿ ಸ್ವಾಗತಿಸಿದರು. ಹರಿಣಾಕ್ಷಿ ಪೂಜಾರಿ ಹಾಗೂ ದಿವ್ಯ ಪೂಜಾರಿ ಪ್ರಾರ್ಥನೆ ಸಲ್ಲಿಸಿದರು. ತನುಜಾ ಗೋಪಾಲ್ ಪೂಜಾರಿ ಹಳದಿ–ಕುಂಕುಮದ ಮಹತ್ವವನ್ನು ತಿಳಿಸಿದರು. ವಿಜಯ ಸುರೇಂದ್ರ ಪೂಜಾರಿ ಮತ್ತು ಶಾರದಾ ಮನೋಹರ್ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಅನಿತಾ ಜಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಶಾರದಾ ಪೂಜಾರಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ ಹಾಗೂ ಹಳದಿ–ಕುಂಕುಮ ಆಚರಣೆ ನಡೆಯಿತು. ನಂತರ ಕೇಶವ ಎಸ್. ಸಾಲ್ಯಾನ್ ಮತ್ತು ಕುಟುಂಬದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




