
ಮುಂಬಯಿ: ಜೋಗೇಶ್ವರಿ ಪೂರ್ವದ ಕೃಷ್ಣ ನಗರ, ಗುಂಪಾ ತೇಕಡಿ ಇಲ್ಲಿನ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ಇತ್ತೀಚೆಗೆ (ಜ. 27 ರಂದು) ಅತ್ಯಂತ ಸಡಗರ-ಸಂಭ್ರಮದಿಂದ ಜರಗಿತು.
ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮೊಕ್ತೇಸರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯವನ್ನು ಪ್ರಧಾನ ಅರ್ಚಕ ಪಾದೂರು ಶ್ರೀ ನರಹರಿ ತಂತ್ರಿ ಅವರು ವಹಿಸಿದ್ದರು. ಪೂಜಾವಿಧಿಗಳಲ್ಲಿ ದೇವಸ್ಥಾನದ ಟ್ರಸ್ಟಿ ಸುಂದರ್ ಸಿ. ಪೂಜಾರಿ ಮತ್ತು ಶಕುಂತಳಾ ದಂಪತಿ ಯಜಮಾನಿಕೆ ವಹಿಸಿ ಸೇವೆ ಸಲ್ಲಿಸಿದರು.

ಅಂದು ಬೆಳಿಗ್ಗೆ ಪ್ರಾರ್ಥನೆ, ಸಂಕಲ್ಪ, ಶುದ್ಧ ಪುಣ್ಯಾಹ ವಾಚನ ನಡೆಯಿತು. ಬಳಿಕ ಎಲ್ಲಾ ಪರಿವಾರ ದೇವರುಗಳಿಗೆ ಪಂಚಾಮೃತ ಸಹಿತ ‘ನವಕ ಕಲಶ ಅಭಿಷೇಕ’ ಹಾಗೂ ಪ್ರಸನ್ನ ಪೂಜೆ ನೆರವೇರಿತು. ಶ್ರೀ ದೇವರಿಗೆ ಪಂಚಾಮೃತ ಸಹಿತ 25 ಕಲಶಗಳ ಅಭಿಷೇಕ, ಪ್ರಧಾನ ಹೋಮ, ಮಹಾಪೂಜೆ ನಡೆದು, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಂಜೆ ಶ್ರೀ ದೇವರ ಉತ್ಸವ ಬಲಿ, ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು.
ಉತ್ಸವದ ಅಂಗವಾಗಿ ಮಧ್ಯಾಹ್ನ ಶ್ರೀ ಜಗದಂಬಾ ಯಕ್ಷಗಾನ ಕಲಾಮಂಡಳಿ ಮತ್ತು ನಾಡಿನ ಹೆಸರಾಂತ ಕಲಾವಿದರ ಸಂಯೋಜನೆಯಲ್ಲಿ “ಸುಧನ್ವಾರ್ಜುನ” ಎಂಬ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡು ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು.

ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಭಾರತ್ ಬ್ಯಾಂಕಿನ ನಿರ್ದೇಶಕ ನಿರಂಜನ್ ಎಲ್. ಪೂಜಾರಿ, ಶಿವಸೇನೆಯ ನೂತನ ಕಾರ್ಪೊರೇಟರ್ ಲೋನಾ ರಾಹುತ್ ಸೇರಿದಂತೆ ಸ್ಥಳೀಯ ಗಣ್ಯರು, ಉದ್ಯಮಿಗಳು ಹಾಗೂ ಅಪಾರ ಸಂಖ್ಯೆಯ ತುಳು-ಕನ್ನಡಿಗ ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಉತ್ಸವದ ಯಶಸ್ಸಿಗೆ ದೇವಸ್ಥಾನದ ಟ್ರಸ್ಟಿ ಹಾಗೂ ಉಪಾಧ್ಯಕ್ಷರಾದ ಎಚ್. ಬಾಬು ಪೂಜಾರಿ, ಗೌರವ ಕಾರ್ಯದರ್ಶಿ ದೇವದಾಸ ಎಸ್. ಸುವರ್ಣ, ಗೌರವ ಕೋಶಾಧಿಕಾರಿ ಡಿ. ಟಿ. ಕುಂದರ್, ಭಜನಾ ಭುವಾಜಿ ಲವ ಕುಶ್ ಗುಪ್ತಾ ಹಾಗೂ ಟ್ರಸ್ಟಿಗಳಾದ ಸಂಜೀವ ಪಿ. ಪೂಜಾರಿ, ಎಂ. ಸಿ. ಸುವರ್ಣ, ಜಿ. ಟಿ. ಆಚಾರ್ಯ, ಸಂತೋಷ್ ಜಿ. ಶೆಟ್ಟಿ, ಲಕ್ಷ್ಮಣ ಸಿ. ಪೂಜಾರಿ, ಶೇಖರ ಕರ್ಕೇರ ಅವರು ಶ್ರಮಿಸಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಪಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸರಸ್ವತಿ ಪೂಜಾರಿ, ಸಂಚಾಲಕಿ ಕಲಾವತಿ ಡಿ. ಪೂಜಾರಿ ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸಿದರು.




