ಮುಂಬೈನ ಅಪ್ಪಾಜಿ ಬೀಡು ಧಾರ್ಮಿಕ ಕ್ಷೇತ್ರದ ನಿರ್ಮಾತೃ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ರಮೇಶ್ ಗುರುಸ್ವಾಮಿಯವರು ಅಕಾಲಿಕವಾಗಿ ವಿಧಿವಶರಾಗಿದ್ದು, ಮುಂಬೈ ಸೇರಿದಂತೆ ಕರಾವಳಿಯ ಭಕ್ತ ಸಮೂಹದಲ್ಲಿ ಶೋಕದ ಅಲೆ ಮನೆಮಾಡಿದೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿದ್ದ ಇವರು, ಸಾವಿರಾರು ಶಿಷ್ಯರಿಗೆ ಅಯ್ಯಪ್ಪ ವ್ರತದ ದೀಕ್ಷೆ ನೀಡಿ ಧಾರ್ಮಿಕ ಸತ್ಸಂಗದ ಮೂಲಕ ಸನ್ಮಾರ್ಗ ತೋರಿದ್ದರು. ಮುಂಬೈ ಮಹಾನಗರದಲ್ಲಿ “ಅಪ್ಪಾಜಿ ಬೀಡು” ಎನ್ನುವ ಪುಣ್ಯಕ್ಷೇತ್ರವನ್ನು ಸ್ಥಾಪಿಸಿದ್ದಲ್ಲದೆ, ಸಿದ್ಧೇಶ್ವರ ದೇವಸ್ಥಾನದ ಸಂಸ್ಥಾಪಕರಾಗಿ ಭಕ್ತಿ ಮತ್ತು ಧರ್ಮ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿದ್ದ ಗುರುಸ್ವಾಮಿಯವರು ತಮ್ಮ ಹಸನ್ಮುಖಿ ವ್ಯಕ್ತಿತ್ವ ಮತ್ತು ಮೃದು ಮಾತಿನ ಮೂಲಕ ಸರ್ವರ ಪ್ರೀತಿಪಾತ್ರರಾಗಿದ್ದರು. ಅವರು ಕೇವಲ ಧಾರ್ಮಿಕ ಗುರುವಾಗಿ ಮಾತ್ರವಲ್ಲದೆ, ಕಷ್ಟದಲ್ಲಿದ್ದ ಅನೇಕರಿಗೆ ಮಾರ್ಗದರ್ಶಕರಾಗಿ, ಸಮಾಜದ ವಿವಿಧ ಸ್ತರದ ಜನರನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಕಾಲಿಕ ನಿಧನವು ಆಧ್ಯಾತ್ಮಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದ್ದು, ಅಪಾರ ಶಿಷ್ಯ ವೃಂದ ಮತ್ತು ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ.
ಮೂಲತಃ ಪಡುಬಿದ್ರಿ ಬೆಂಗ್ರೆಯವರಾದ ರಮೇಶ್ ಗುರುಸ್ವಾಮಿ ವರ್ಲಿಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದರು.ಮೃತರು ಪತ್ನಿ, ಅವಳಿ ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವರು.
ಮುಂಬೈಯ ಸಾಮಾಜಿಕ, ಧಾರ್ಮಿಕ ಮುಖಂಡರು, ಶಿಷ್ಯ ವೃಂದ ಗುರುಸ್ವಾಮಿಯವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.




