30 C
Mumbai
April 24, 2026
Mumbai News Kannada
ಸುದ್ದಿ

ಕನ್ಯಾನ ಸದಾಶಿವ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ವಿವಾದಕ್ಕೆ ತೆರೆ:ಸಮಾಜದ ಉನ್ನತಿಗೆ, ಒಗ್ಗಟ್ಟಿನ ಬದ್ಧತೆಗೆ ನಿರ್ಧಾರ.





ಚಿತ್ರ ವರದಿ: ದಿನೇಶ್ ಕುಲಾಲ್.


ಮುಂಬಯಿ:ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಸಮಾಜದ ಮುಂಚೂಣಿ ಮಹಾ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ನಡುವಿನ ಬಿನ್ನಾಭಿಪ್ರಾಯಗಳು ಇಂದು ಸುಖಾಂತ್ಯಗೊಂಡಿರುವುದು ಸಮುದಾಯದ ಏಳಿಗೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.

ಫೆಬ್ರವರಿ 26 ರಂದು ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಆಡಳಿತದಲ್ಲಿರುವ ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನಲ್ಲಿ ‘ಸೋರಾ ಬೈ ನೈನ್’ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಸಂಸದ ಗೋಪಾಲ್ ಸಿ ಶೆಟ್ಟಿ ಸಮಕ್ಷಮದಲ್ಲಿನಡೆದ ಸಂಧಾನ ಸಭೆಯಲ್ಲಿ ಐಕಳ ಹರೀಶ್ ಶೆಟ್ಟಿ ಹಾಗೂ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಮಾರ್ಗದರ್ಶನದ ಮಾತುಗಳನ್ನಾಡುತ್ತಾ ಸಮಾಜಕ್ಕೆ ಸೇವೆಯನ್ನು ಮಾಡುತ್ತಾ ಬಂದವರು ನಿಮ್ಮ ಸೇವೆ ಸಮಾಜಕ್ಕೆ ಇನ್ನಷ್ಟು ಅಗತ್ಯವಾಗಿದೆ ಯಾವುದೇ ಮನಸ್ಸಿನಲ್ಲಿಯಿರುವ ಭಿನ್ನಭಿಪ್ರಾಯಗಳನ್ನು ದೂರ ಮಾಡಿ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಪೂರಕವಾಗುವ ಸೇವೆಯಲ್ಲಿ ನಿರಂತರ ಮಾಡುತ್ತೀರಿ ಎಂದು ಹಾರೈಸಿದರು.

ವಿಶೇಷ ಸಭೆಯಲ್ಲಿ, ಬರೋಡದ ಉದ್ಯಮಿ ಶಶಿಧರ್ ಶೆಟ್ಟಿ,ಮಹೇಶ್ ಶೆಟ್ಟಿ ತೆಳ್ಳಾರ್ ,ಪಟ್ಲ ಸತೀಶ್ ಶೆಟ್ಟಿಅವರ ಸಾರಥ್ಯದಲ್ಲಿ ಈ ಮಹತ್ವದ ಸಂಧಾನ ಪ್ರಕ್ರಿಯೆ ನಡೆಯಿತು. ಸಮಾಜದ ಹಿತಾಸಕ್ತಿಯೇ ಸರ್ವೋಚ್ಚ ಎಂಬ ಉದಾತ್ತ ಉದ್ದೇಶದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಇಬ್ಬರೂ
ತಮ್ಮ ವೈಮನಸ್ಯಗಳನ್ನು ಮರೆತು, ಕೈಜೋಡಿಸಿ ಮುನ್ನಡೆಯುವ ದೃಢ ನಿರ್ಧಾರ ಕೈಗೊಂಡರು. ಈ ಐಕ್ಯತೆಯು ಬಂಟ ಸಮುದಾಯದ ಶಕ್ತಿ ಮತ್ತು ಸಾಂಘಿಕ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಐಕಳ ಹರೀಶ್ ಶೆಟ್ಟಿಯವರು ಕನ್ಯಾನ ಸದಾಶಿವ ಶೆಟ್ಟಿಯವರಲ್ಲಿ ಕ್ಷಮೆಯಾಚಿಸಿ ನನ್ನಿಂದ ಅಥವಾ ಒಕ್ಕೂಟದಿಂದ ಯಾವುದೇ ರೀತಿಯ ಮನಸ್ತಾಪವಿದ್ದರೆ ಕ್ಷಮೆ ಇರಲಿ ನಮ್ಮ -ನಿಮ್ಮೊಳಗೆ ಮಾತಿನ ಮೂಲಕ ಯಾವುದೇ ರೀತಿಯ ಭಿನ್ನಾಭಿಪ್ರಾಯ ಬಾರದೆ ಇರಲಿ ಎಂದು ಒಬ್ಬರನ್ನೊಬ್ಬರು ಆಲಂಗಿಸಿ ಹೂಗುಚ್ಛ ನೀಡಿ ಹೃತ್ಪೂರ್ವಕವಾಗಿ ವಿವಾದಕ್ಕೆ ತೆರೆಎಳೆದರು.

ಸಂಧಾನ ಸಭೆಯಲ್ಲಿ ಮಾಜಿ ಸಂಸದರಾದ ಗೋಪಾಲ್ ಶೆಟ್ಟಿ, ಸಮಾಜದ ಗಣ್ಯರಾದ ಬರೋಡ ಶಶಿಧರ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್ , ಪಟ್ಲ ಸತೀಶ್ ಶೆಟ್ಟಿ, ಕೆ. ಕೆ. ಶೆಟ್ಟಿ ಅಹ್ಮದ್ ನಗರ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ ಶೆಟ್ಟಿ ಇನ್ನಂಜೆ, ಉಳ್ತೂರು ಮೋಹನದಾಸ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಅರವಿಂದ್ ಆನಂದ್ ಶೆಟ್ಟಿ,ಅಶೋಕ್ ಶೆಟ್ಟಿ ಕಲ್ಪವೃಕ್ಷ ಇವರುಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿಯವರ ನಡುವಿನ ಮನಸ್ತಾಪವನ್ನು ಸುಖಾಂತ್ಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬರೋಡ ಶಶಿಧರ ಶೆಟ್ಟಿಯವರು ಫೋನ್ ಮೂಲಕ ಐಕಳ ಹಾಗೂ ಅಶೋಕ್ ಪಕ್ಕಳರ ನಡುವೆ ರಾಜಿ ಮಾತುಕತೆಯನ್ನು
ನಡೆಸಿ ಅವರೀರ್ವರ ನಡುವೆ ನಡೆದ ಪ್ರಕರಣವನ್ನು ಕೂಡ ಮುಕ್ತಾಯಗೊಳಿಸಿದರು .


ಸಮಾಜದ ಏಳಿಗೆಗೋಸ್ಕರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದೆ ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸುವೆವು: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ .

ಈ ಸಂದರ್ಭದಲ್ಲಿ ಮಾತನಾಡಿದ ಮಹಾ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ” ನಾವೆಲ್ಲರೂ ಸಮಾಜಕ್ಕಾಗಿ ದುಡಿಯುವುದು ಯಾವುದೇ ಭಿನ್ನಾಭಿಪ್ರಾಯ ಇದ್ದರೂ.ಸಮಾಜದ ಏಳಿಗೆಗೋಸ್ಕರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದೆ ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸುವೆವು. ಹಲವಾರು ವರ್ಷಗಳಿಂದ ನಾನು ಮತ್ತು ಐಕಳ ಹರೀಶ್ ಶೆಟ್ಟಿ ಅವರು ಒಂದಾಗಿ ಕೆಲಸ ಮಾಡುತ್ತಿದ್ದೇವೆ ಅವರು ಸಂಘಟನಾ ಚತುರರಾಗಿ ಕೆಲಸ ಮಾಡಿದರೆ ನಾನು ನನ್ನಿಂದಾಗುವ ದಾನ ನೀಡಿ ಸಹಕಾರ ನೀಡಿದ್ದೇನೆ. ಮುಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ನನ್ನ ಹೆಸರಿನ ಸಮುದಾಯ ಭವನ ಡಿಸೆಂಬರ್ ಕೊನೆಯಲ್ಲಿ ಲೋಕರ್ಪಣೆ ಗೊಳ್ಳುವಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಶ್ರಮಿಸುತ್ತೇವೆ ಎಂದರು,

ನನ್ನಿಂದ ಅಥವಾ ಒಕ್ಕೂಟದಿಂದ ಏನಾದರೂ ತಪ್ಪಾಗಿದ್ದರೆ ನನಗೆ ಕ್ಷಮೆಯಿರಲಿ: ಐಕಳ ಹರೀಶ್ ಶೆಟ್ಟಿ

ಐಕಳ ಹರೀಶ್ ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ ” ಸದಾಶಿವ ಶೆಟ್ಟಿ ಅವರು ಒಕ್ಕೂಟದ ಮಹಾದಾನಿ , ಸಮಾಜದ ಉನ್ನತಿಗೆ ಅವರು ಕಾರಣಕರ್ತರಾಗಿ ಸಮಾಜದ ಕಟ್ಟ ಕಡೆಯ ಜನರಿಗೆ ಸಹಾಯ ಆಗುವ ಉದ್ದೇಶದಿಂದ ನಮಗೆ ಶಕ್ತಿಯಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಇಂದು ನಾವೆಲ್ಲ ಸಮಾಜದ ಗಣ್ಯ ವ್ಯಕ್ತಿಗಳು ಒಟ್ಟಿಗೆ ಸೇರಿದ್ದೇವೆ ನಮ್ಮ ಮಹಾದಾನಿ ಸದಾಶಿವ ಶೆಟ್ಟಿ ಅವರಿಗೆ ಮನಸಿಗೆ ಬೇಸರ ಆಗಿ ಸಮಾಜಸೇವೆ ಬೇಡ ಎಂದು ತೀರ್ಮಾನಕ್ಕೆ ಬಂದಿದ್ದರು. ಸಮಾಜಕ್ಕೆ ಇಷ್ಟು ಪ್ರೀತಿ ಕೊಟ್ಟ ವ್ಯಕ್ತಿಗೆ ಮನಸ್ಸಿಗೆ ನೋವಾಗಿದೆ ಎಂದು ತಿಳಿದ ಬಳಿಕ ನಾನು ಕೂಡ ಸಮಾಜ ಸೇವೆಗೆ ತಿಲಾಂಜಲಿ ನೀಡುವ ಆಲೋಚನೆ ಮಾಡಿದ್ದೆ. ನಾನು ಯಾವುದೇ ಸಮಾಜ ಸೇವೆ ಮಾಡಿದ್ದರೂ,ಅದು ದಾನಿಗಳ ಸಹಾಯದಿಂದ, ನಾನು ಯಾವತ್ತೂ ಹೇಳುತ್ತೇನೆ ದಾನಿಗಳೇ ದೇವರು ಎಂದು.ಸದಾಶಿವ ಶೆಟ್ಟಿ ನನಗಿಂತ ಹಿರಿಯರು, ಗೌರವಾನ್ವಿತರು ಅವರ ಮನಸ್ಸಿಗೆ ನೋವಾಯಿತು ಎಂದು ತಿಳಿದು ನನಗೆ ಬಹಳ ದುಃಖವಾಯಿತು. ನನ್ನಿಂದ ಏನಾದರೂ ತಪ್ಪಾಗಿದ್ದರೆ ನನಗೆ ಕ್ಷಮೆಯಿರಲಿ , ನನಗೆ ಅವರ ಬಳಿ ವೈಯಕ್ತಿಕ ದ್ವೇಷ ಇಲ್ಲ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂದು ನಾವಿಬ್ಬರು ತಿಳಿದವರು. ಯಾರೇ ಅಗಲಿ ಯಾವುದೇ ಹುದ್ದೆ ಶಾಶ್ವತ ಅಲ್ಲ. ನನ್ನ ಕಾರ್ಯವಧಿ ಮುಗಿದ ಕೂಡಲೇ ಚುನಾವಣೆ ಘೋಷಣೆ ಆಯಿತು. ಆದರೆ ಆಗ ಯಾರು ಸ್ಪರ್ಧಿಸಲು ಮುಂದೆ ಬಾರದ ಕಾರಣ ನಾವೇ ಮುಂದುವರಿದೆವು. ಜಾಗತಿಕ ಬಂಟರ ಸಂಘಗಳು ಒಕ್ಕೂಟ ಎಲ್ಲ ಸಮಾಜಕ್ಕೂ ಮಾದರಿಯಾಗಿದ್ದೆ ನಾವು ಎಲ್ಲರಂಗದಲ್ಲಿಯೂ ಬಲಿಷ್ಠರಾಗಿ ಕೆಲಸ ಮಾಡುತ್ತಿದ್ದೇವೆ. ಸದಾಶಿವ ಶೆಟ್ಟಿ ಮಾಡಿದ ಸಮಾಜ ಸೇವೆ ಯಾವ ಬಂಟರು ಮರೆಯುವಂತಿಲ್ಲ.ಅವರ ಹೆಸರು ಸಮಾಜದಲ್ಲಿ ಸ್ಥಿರವಾಗಿ ಉಳಿಯುತ್ತದೆ.ದೇವರ ದಯೆಯಿಂದ ನಮ್ಮ ಎಲ್ಲ ಬಿನ್ನಭಿಪ್ರಾಯ ಮರೆತು ಈಗ ನಾವು ಒಟ್ಟಾಗಿದ್ದೇವೆ ಮನುಷ್ಯನ ಜೀವನ ಮೂರು ದಿನದ್ದು, ನಾವು ಬಿಟ್ಟುಹೋಗುವುದು ನಮ್ಮ ಒಳ್ಳೆಯತನ ಮಾತ್ರ. ನನ್ನಿಂದ ತಪ್ಪಾಗಿದ್ದರೆ ಸಮಾಜಗೋಸ್ಕರ ಎಲ್ಲಾ ಬಂಟರ ಕ್ಷಮೆ ಕೇಳುತ್ತೇನೆ.ದೇವರು ಸದಾಶಿವ ಶೆಟ್ಟಿ ಅವರಿಗೆ ಆಯುಷ್ಯ, ಸಂಪತ್ತು,ಆರೋಗ್ಯ ಕೊಟ್ಟು ಅವರಿಂದ ಮತ್ತಷ್ಟು ಸಮಾಜಸೇವೆ ಆಗುವಂತಾಗಲಿ ತಿಳಿಸಿದರು.

ಬರೋಡ ಶಶಿಧರ ಶೆಟ್ಟಿ

ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಐಕಳ ಹರೀಶ್ ಶೆಟ್ಟಿ ಸಂಧಾನದ ಸಾರಥ್ಯವಾಸಿದ ಬರೋಡ ಶಶಿಧರ ಶೆಟ್ಟಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ ಸಮಾಜದ ಪ್ರಗತಿಗೆ ಸದಾಶಿವ ಶೆಟ್ಟಿ ಅವರಂತೂ ದಾನ ನೀಡುವ ಸಮಾಜಕರು ಕಡಿಮೆ ಇಂಥ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿಗೆ ದಾನ ನೀಡುವವರನ್ನು ಒಟ್ಟಿಗೆ ಕೊಂಡು ಹೋಗುವುದು ಮುಖ್ಯವಾಗಿದೆ. ಸಮಾಜ ಸೇವೆಗೆ ಬದುಕನ್ನು ಸಮರ್ಥಿಸಿದ ಐಕಳ ಹರೀಶ್ ಶೆಟ್ಟಿ ಕೂಡ ಸಮಾಜಕ್ಕೆ ಅಗತ್ಯವಿದೆ. ಇಬ್ಬರ ಸಣ್ಣ ವಿಷಯದಿಂದ ಪ್ರಾರಂಭಗೊಂಡ ಅಭಿಪ್ರಾಯ ಅದು ಇಂದು ಸಮಾಜದ ಪ್ರತಿಷ್ಠಿತ ಉದ್ಯಮಿಗಳಾದ ಬಂಜಾರ ಪ್ರಕಾಶ್ ಶೆಟ್ಟಿ, ಸಾಯಿ ಪ್ಯಾಲೇಸ್ ರವಿ ಸುಂದರ್ ಶೆಟ್ಟಿ, ಕೆ. ಎಮ್. ಶೆಟ್ಟಿ, ಕೆ.ಡಿ. ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಅವರ ಮುನ್ಸೂಚನೆಯಂತೆ ಸುಖ ಅಂತ್ಯ ಕಂಡಿದೆ. ಬಂಟರ ಸಮಾಜ ಎಲ್ಲಾ ಸಮಾಜಕ್ಕೂ ಆದರ್ಶವಾಗಿದೆ. ದಾನ- ಧರ್ಮ ಸಮಾಜ ಸೇವೆ ಮುಂಚೂಣಿಯಲ್ಲಿ ನಿಂತವರು. ಮಾತುಗಳಿಂದ ಮನಸ್ಸಿಗೆ ನೋವಾಗುವುದು ಸಹಜ, ಅದು ವೈರತ್ವ ಹಾಗಗಬಾರದು.ಸಮಾಜ ಬಂಧುಗಳ ಎಲ್ಲರ ಆಶ್ರಯದಂತೆ ಇಬ್ಬರ ಮನಸ್ತಾಪ ಸಮಾಜದ ಒಳಿತಿಗಾಗಿ ಪ್ರಕರಣವನ್ನು ಕೊನೆಗೊಂಡಿದೆ. ಡಿಸೆಂಬರ್ ಕೊನೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿಯಲ್ಲಿರುವ ಕನ್ಯಾನ ಸದಾಶಿವ ಶೆಟ್ಟಿ ಸಭಾಭವನ ಲೋಕರ್ಪಣೆಗೊಳ್ಳಲಿದೆ ಎಂದರು.

ಸಮಾಜದ ಒಳಿತಾವುದೇ ನಮ್ಮ ಉದ್ದೇಶ: ಮಹೇಶ್ ಶೆಟ್ಟಿ ತೆಳ್ಳಾರ್

ಐಕಳ ಹರೀಶ್ ಶೆಟ್ಟಿ ಮತ್ತು ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜದಲ್ಲಿ ಒಗ್ಗಟ್ಟಾಗಿ ಮುನ್ನಡೆಯುವ ನಿರ್ಧಾರ ಬಹಳ ಸಂತೋಷ ನೀಡಿದೆ. ಇದು ನಮ್ಮ ಉದ್ದೇಶವಾಗಿದೆ ಇವರಿಬ್ಬರೂ ಬಂಟ ಸಮಾಜಕ್ಕಲ್ಲದೆ ಎಲ್ಲಾ ಸಮಾಜಕ್ಕೂ ಅಗತ್ಯವಾಗಿದ್ದವರು. ಕೆಲವು ದಿನಗಳಿಂದ ನಡೆಯುತ್ತಿರುವ ಇವರಿಬ್ಬರ ನಡುವಿನ ವಿವಾದ ವಿದ್ಯಮಾನಗಳು ಕುರಿತು ಸಾಮಾನ್ಯ ಜನ ಕೂಡ ಮಾತನಾಡುತ್ತಿರುವುದು ನಮಗೆ ಬಹಳಷ್ಟು ದುಃಖ ತಂದಿದೆ .ಅದಕ್ಕಾಗಿ ಇವರಿಬ್ಬರೂ ಸಮಾಜದಲ್ಲಿ ಒಟ್ಟಾಗಿ ಸೇವೆ ಮಾಡುವುದು ಅಗತ್ಯವಾಗಿದೆ. ಅವರಿಬ್ಬರ ನಡುವೆ ಬಿನ್ನಾಭಿಪ್ರಾಯ ದೂರವಾಗಿದೆ.ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ತಮ್ಮ ಜಾತಿಯ ಸಂಘಟನೆಗಳನ್ನು ಬಲಿಷ್ಠ ಗೊಳಿಸಬೇಕು ಆ ಮೂಲಕ ಹಿಂದು ಸಮಾಜ ಬಲಿಷ್ಠವಾಗಲು ಸಾಧ್ಯ. ಸಮಾಜದ ಸೇವೆ ಮಾಡುವಾಗ ಟೀಕೆಗಳು ಬರುವುದು ಸಾಧ್ಯ ಅದೆಲ್ಲವನ್ನು ಮನಸ್ಸಿನಲ್ಲಿರಿಸದೆ ಸಂಘದ ಮತ್ತು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ತೊಡಗಿ ಕೊಳ್ಳಬೇಕು ಎಂದು ಸಂಧಾನ ಮಾಡುವಲ್ಲಿ ಪ್ರಮುಖರಣಿಸಿಕೊಂಡಿರುವ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ನುಡಿದರು.



Related posts

ಇಂದಿನಿಂದ ರೈಲು ಪ್ರಯಾಣ ದರ ಏರಿಕೆ : ರೈಲ್ವೆಯಿಂದ ಪ್ರಯಾಣದರ ಏರಿಕೆ ಅಧಿಸೂಚನೆ

Mumbai News Desk

ಯು.ಎ.ಇ. ನೆಲದಲ್ಲಿ “ಕುಲಾಲ ಫ್ಯಾಮಿಲಿ ದುಬೈ ಯು.ಎ.ಇ. ವಿಹಾರ ಕೂಟ 2025”

Mumbai News Desk

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ

Mumbai News Desk

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಡೊಂಬಿವಲಿಯ ಕಲಾವಿದೆ ರಿತಿಕ ಶಂಕರ್ ಸುವರ್ಣ ಅವರಿಂದ ಅಯೋಧ್ಯೆಯಲ್ಲಿ ಭರತನಾಟ್ಯ ಸೇವೆ.

Mumbai News Desk

ವಜ್ರೇಶ್ವರಿ ಶಿಕ್ಷಣ ಪ್ರಸಾರಕ ಮಂಡಳಿ, ಸುರೇಂದ್ರ ಕಲ್ಯಾಣ್ ಪುರ್ ನಿರ್ಮಿತ ನೂತನ ಕಟ್ಟಡದ ಉದ್ಘಾಟನೆ

Mumbai News Desk