ಮುಂಬಯಿಯಲ್ಲಿ ಫೆಬ್ರವರಿ 27ರಂದು ಬ್ಯಾಂಕ್ ಆಫ್ ಇಂಡಿಯಾದಲ್ಲಿ 37 ವರ್ಷಗಳ ಸುದೀರ್ಘ ಹಾಗೂ ಸ್ತುತ್ಯರ್ಹ ಸೇವೆ ಸಲ್ಲಿಸಿದ ಭಾಸ್ಕರ್ ಎಂ. ಶ್ರೀಯಾನ್ ಅವರು ಉನ್ನತ ಸ್ಥಾನದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಬಟ್ಟೆಕುದ್ರುವಿನ ದಿವಂಗತ ಮಂಜ ಮೊಗವೀರ ಮತ್ತು ದುರ್ಗಿ ಮೊಗವೀರ ದಂಪತಿಗಳ ದ್ವಿತೀಯ ಪುತ್ರರಾದ ಇವರು, ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ.
1979ರಲ್ಲಿ ಮುಂಬಯಿಗೆ ಜೀವನ ಅರಸಿ ಬಂದ ಇವರು, ಆರಂಭದಲ್ಲಿ ಕ್ಯಾಂಟೀನ್ಗಳಲ್ಲಿ ಕೆಲಸ ಮಾಡುತ್ತಲೇ ‘ಮದರ್ ಇಂಡಿಯಾ ರಾತ್ರಿ ಶಾಲೆ’ಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಬಡತನ ಮತ್ತು ಕಠಿಣ ಸವಾಲುಗಳ ನಡುವೆಯೂ ಧೃತಿಗೆಡದೆ, ತಮ್ಮ ದೃಢ ಸಂಕಲ್ಪ ಹಾಗೂ ಅಪಾರ ಪರಿಶ್ರಮದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಿದ ಇವರ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ.
ಕೇವಲ ವೃತ್ತಿಜೀವನಕ್ಕೆ ಸೀಮಿತವಾಗದೆ, ಭಾಸ್ಕರ್ ಅವರು ತಮ್ಮ ಹುಟ್ಟೂರಿನ ದೈವ-ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಬಟ್ಟೆಕುದ್ರುವಿನ ಶ್ರೀರಾಮ ಮಂದಿರ, ಶ್ರೀನಾಗ ದೇವಸ್ಥಾನ, ಬೇಲ್ತೂರು ಭದ್ರಮಹಾಂಕಾಳಿ ದೇವಸ್ಥಾನ, ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನ ಬಗ್ವಾಡಿ ಮತ್ತು ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ಹತ್ತು ಹಲವು ಪುಣ್ಯಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗಣನೀಯ ದೇಣಿಗೆ ದೊರಕಿಸಿಕೊಡುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದಾರೆ.
ಮೊಗವೀರ ಮಹಾಜನ ಸೇವಾ ಸಂಘದ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಶಕ್ತಿಯಾಗಿರುವ ಇವರ ನಿವೃತ್ತ ಜೀವನವು ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಮೊಗವೀರ ಮಹಾಜನ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಹೃದಯಪೂರ್ವಕವಾಗಿ ಶುಭ ಹಾರೈಸಿದ್ದಾರೆ.




